ಬೆಂಗಳೂರು: ಕರ್ನಾಟಕದಲ್ಲಿ H1N1 ಹಾಗೂ ಇನ್ಫ್ಲುಯೆನ್ಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಆದರೆ ಮಳೆಗಾಲದಲ್ಲಿ ಇನ್ಫ್ಲುಯೆನ್ಸ ಪ್ರಕರಣಗಳು ಹೆಚ್ಚಾಗುವುದು ಸಾಮಾನ್ಯವಾಗಿದ್ದು, ಪ್ರಸ್ತುತ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿ ಇನ್ಫ್ಲುಯೆನ್ಸ ಪ್ರಕರಣಗಳು ಸಾಮಾನ್ಯವಾಗಿ ವರ್ಷದಲ್ಲಿ ಎರಡು ಅವಧಿಯಲ್ಲಿ ಹೆಚ್ಚಾಗುತ್ತವೆ. ಜನವರಿಯಿಂದ ಮಾರ್ಚ್ವರೆಗೆ ಹಾಗೂ ಜುಲೈನಿಂದ ಸೆಪ್ಟೆಂಬರ್ವರೆಗೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪ್ಲಾಟ್ಫಾರ್ಮ್ ಕಣ್ಗಾವಲು ದತ್ತಾಂಶದ ಪ್ರಕಾರ, ಆಗಸ್ಟ್ 22, 2026ರವರೆಗೆ ರಾಜ್ಯದ 32 ಜಿಲ್ಲೆಗಳಲ್ಲಿ 4,212 ಪ್ರಯೋಗಾಲಯ ದೃಢೀಕರಿಸಿದ ಇನ್ಫ್ಲುಯೆನ್ಸ ಪ್ರಕರಣಗಳು ದಾಖಲಾಗಿವೆ. 2025ರಲ್ಲಿ 4,583 ಹಾಗೂ 2024ರಲ್ಲಿ 3,903 ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಪ್ರಸಕ್ತ ವರ್ಷದ ಪ್ರಕರಣಗಳ ಪ್ರಮಾಣ ನಿರೀಕ್ಷಿತ ಕಾಲೋಚಿತ ಮಾದರಿಯಲ್ಲೇ ಇದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಹಿರಿಯ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯದ ಪರಿಸ್ಥಿತಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಿದರು. ಸೋಂಕು ಮತ್ತಷ್ಟು ಹೆಚ್ಚಾದರೂ ಅಥವಾ ಹಠಾತ್ ಉಲ್ಬಣ ಕಂಡುಬಂದರೂ ಪರಿಸ್ಥಿತಿ ನಿಭಾಯಿಸಲು ಅಗತ್ಯವಿರುವ ವೈದ್ಯಕೀಯ ಮೂಲಸೌಕರ್ಯ, ಔಷಧಿಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳ ದಾಸ್ತಾನು ಸಾಕಷ್ಟಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದ್ದಾರೆ.
WHO ಹಾಗೂ ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳಂತೆ ರಾಜ್ಯಾದ್ಯಂತ ILI ಮತ್ತು SARI ಕಣ್ಗಾವಲನ್ನು ಬಲಪಡಿಸಲಾಗಿದೆ. ವಿವಿಧ ಉಸಿರಾಟದ ವೈರಸ್ಗಳ ಮೇಲ್ವಿಚಾರಣೆ, ಮಾದರಿ ಸಂಗ್ರಹಣೆ ಮತ್ತು ತ್ವರಿತ ಪರೀಕ್ಷೆ ನಡೆಸಲಾಗುತ್ತಿದೆ. ಆರೋಗ್ಯ ಕೇಂದ್ರಗಳಲ್ಲಿ PPE ಕಿಟ್ಗಳು, N95 ಮಾಸ್ಕ್ಗಳು ಹಾಗೂ ಒಸೆಲ್ಟಾಮಿವಿರ್ ಆಂಟಿವೈರಲ್ ಔಷಧಿ ಸೇರಿದಂತೆ ಅಗತ್ಯ ಸಾಮಗ್ರಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.
ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು, ನಿಯಮಿತವಾಗಿ ಕೈ ತೊಳೆಯುವುದು ಹಾಗೂ ಉಸಿರಾಟದ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ. ಜ್ವರ, ಕೆಮ್ಮು, ಉಸಿರಾಟದ ತೊಂದರೆ ಸೇರಿದಂತೆ ಲಕ್ಷಣಗಳು ಕಂಡುಬಂದರೆ ಸಾಕಷ್ಟು ವಿಶ್ರಾಂತಿ ಪಡೆದು, ಇತರರಿಂದ ಅಂತರ ಕಾಯ್ದುಕೊಂಡು, ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
ವೈದ್ಯರ ಸಲಹೆಯಿಲ್ಲದೆ ಸ್ವಯಂ ಔಷಧಿ ಸೇವಿಸಬಾರದು ಎಂದು ಇಲಾಖೆ ಎಚ್ಚರಿಕೆ ನೀಡಿದೆ. ರೋಗಲಕ್ಷಣಗಳಿರುವವರು ಜನದಟ್ಟಣೆಯ ಪ್ರದೇಶಗಳನ್ನು ತಪ್ಪಿಸುವುದು ಹಾಗೂ ಕೈಕುಲುಕುವುದನ್ನು ಕಡಿಮೆ ಮಾಡುವುದು ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ. ಆರಂಭಿಕ ಹಂತದಲ್ಲೇ ಸೋಂಕನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಗಂಭೀರ ತೊಡಕುಗಳನ್ನು ಕಡಿಮೆ ಮಾಡಬಹುದು. ಹೀಗಾಗಿ ಸಾರ್ವಜನಿಕರು ಭಯಭೀತರಾಗದೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಉಡುಪಿ: ಮನೆಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ ವಿದೇಶಿ ಕರೆನ್ಸಿ ಸಹಿತ 23.56 ಲಕ್ಷ ರೂ.ಮೌಲ್ಯದ ಸೊತ್ತು ವಶ ಉಡುಪಿ:…
ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ: ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಿಎಂ ಡಿ.ಕೆ.ಶಿವಕುಮಾರ್ ಅಭಯ ಹೊಸದಿಲ್ಲಿ: "ಧೈರ್ಯವಾಗಿರಿ. ಸುರಕ್ಷಿತ ಸ್ಥಳದಲ್ಲಿ ಇರುವುದರಿಂದ…
ಮೈಸೂರಿನಲ್ಲಿ ಕಂಬಳಕ್ಕೆ ಸಿದ್ಧತೆ : ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಚಾಲನೆ ಮೈಸೂರು: ಸಾತಗಳ್ಳಿ ಪ್ರದೇಶದಲ್ಲಿ…
ನೇಪಾಳ ಭೀಕರ ಪ್ರವಾಹ : 5 ಲಕ್ಷ ಡಾಲರ್ಗಳ ತುರ್ತು ನೆರವು ಘೋಷಿಸಿದ ಅಮೆರಿಕ ಕಠ್ಮಂಡು: ನೇಪಾಳದ ಭೋಟೆ ಕೋಶಿ…
ಮಂಗಳೂರು ನೈಋತ್ಯ ವಲಯ ಸೇರ್ಪಡೆ ; ಶೀಘ್ರ ಸಂಭ್ರಮೋತ್ಸವ: ಸತೀಶ್ ಕುಂಪಲ ಮಂಗಳೂರು : ರೈಲ್ವೇ ಪ್ರದೇಶವನ್ನು ನೈಋತ್ಯ ವಲಯಕ್ಕೆ…
ಶಿರ್ವ : ಹುಚ್ಚುನಾಯಿ ಹಾವಳಿ ; ಹಲವರಿಗೆ ಕಡಿತ , ಸ್ಥಳೀಯರಲ್ಲಿ ಆತಂಕ ಶಿರ್ವ: ಶಿರ್ವ ಮತ್ತು ಕುತ್ಯಾರು ಗ್ರಾ.ಪಂ.…