ಕಾಂಗ್ರೆಸ್​ಗೆ ಬಿಜೆಪಿಯಿಂದ ಕೆಲವರು ಬರುವವರಿದ್ದಾರೆ- ಸಿದ್ದರಾಮಯ್ಯ : vishwanews24

Featured, ರಾಜ್ಯ ನ್ಯೂಸ್

ವಿಜಯಪುರ: ಬಿಜೆಪಿಯವರು ತಮ್ಮ ಪಕ್ಷ ಬಿಟ್ಟು ಹೊರಬರುವವರನ್ನ ತಡೆದುಕೊಳ್ಳಲಿ. ಕಾಂಗ್ರೆಸ್​ಗೆ ಬಿಜೆಪಿಯಿಂದ ಕೆಲವರು ಬರುವವರಿದ್ದಾರೆ, ನನ್ನ ಸಂಪರ್ಕದಲ್ಲಿ ಯಾರೂ ಇಲ್ಲ. ಆದರೂ ಬಿಜೆಪಿಯಿಂದ ಕೆಲವರು ಬರಬಹುದು, ಖಚಿತವಾಗಿ ಗೊತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ವಿಜಯಪುರದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರ ರಚನೆಯ ಬಿಕ್ಕಟ್ಟಿನ ಕುರಿತು ಮಾತನಾಡಿದ್ರು. ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ಕುರಿತು ಹೈಕಮಾಂಡ್ ಇನ್ನೂ ತೀರ್ಮಾನ ಮಾಡಿಲ್ಲ. ಯಾವುದೂ ಫೈನಲ್ ಆಗಿಲ್ಲ, ಹೈಕಮಾಂಡ್ ಏನ್ ಮಾಡುತ್ತೊ ನೋಡೋಣ ಎಂದರು.

ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಹದಿನೈದು ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನ ನಿಲ್ಲಿಸಲಿ, ಅವರದ್ದು ಪಕ್ಷವಿದೆ, ಅವರೂ ಸ್ಪರ್ಧೆ ಮಾಡ್ತಾರೆ ಎಂದರು. ಇನ್ನು ಕಾಂಗ್ರೆಸ್ ಹದಿನೈದು ಸೀಟ್ ಗೆದ್ದರೆ ದೇವೇಗೌಡ ಕ್ಷಮೆ ಕೇಳುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಹೈದಿನೈದು ಕ್ಷೇತ್ರ ಗೆಲ್ಲುತ್ತೆ ಅಂತ ಹೇಳಿಲ್ಲ, 12 ಅಂತಾ ಹೇಳಿದ್ದೇನೆ. ಹನ್ನೆರಡು ಕ್ಷೇತ್ರ ಗೆಲ್ತೇವೆ, ಹದಿನೈದು ಗೆದ್ದರೂ ಆಶ್ವರ್ಯವಿಲ್ಲ‌ ಎಂದು ಹೇಳಿದರು.

ಖರ್ಗೆಯನ್ನ ಸಿಎಂ ಮಾಡುವ ಪ್ರಸ್ತಾಪಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು,  ಖರ್ಗೆಯನ್ನ ಸಿಎಂ ಮಾಡಬಾರದು ಅಂತ ನಾನು ಹೇಳಿದ್ದೇನೆ ಅನ್ನೋದು ಸುಳ್ಳು. ಹೈಕಮಾಂಡ್ ನನಗೆ ಏನೂ ಕೇಳಿಲ್ಲ, ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡಿದ್ರು. ಆಮೇಲೆ ಬಂದು ನನ್ನ ಕೇಳಿದ್ರು. ದೇವೇಗೌಡರು ಹೈಕಮಾಂಡ್ ಜೊತೆ ಮಾತನಾಡುವಾಗ ನಾನು ಅಲ್ಲಿ ಇರಲೇ ಇಲ್ಲ. ಇರಲೇ ಇಲ್ಲ ಎಂದ ಮೇಲೆ ನಾನು ವಿರೋಧಿಸಿದ್ದೆ ಎಂದು ಹೇಗೆ ಹೇಳ್ತಾರೆ? ಎಂದು ಪ್ರಶ್ನಿಸಿದ್ರು. ಬಿಜೆಪಿ ಕೋಮುವಾದಿ ಸರ್ಕಾರ ಬರಬಾರದು ಎಂದು ಹೈಕಮಾಂಡ್ ಹೇಳಿದ್ರು, ಹಾಗಾಗಿ ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡಿದ್ವಿ ಅಂತ ಖಡಕ್ ಆಗಿ ಹೇಳಿದ್ರು.

ಉಪಚುನಾವಣೆಗೆ ಕೆಲ ಅಭ್ಯರ್ಥಿಗಳ‌ ಆಯ್ಕೆ ಈಗಾಗಲೇ ಮಾಡಲಾಗಿದೆ, ಅನರ್ಹ ಶಾಸಕರ ತೀರ್ಪು ಬಂದ ಕೂಡಲೇ ಉಳಿದ ಕ್ಷೇತ್ರಗಳಲ್ಲಿ ತಿರ್ಮಾನ ಮಾಡಲಾಗುವುದು. ಈಗಾಗಲೇ ಎಂಟು ಕ್ಷೇತ್ರಕ್ಕೆ ಆಯ್ಕೆ ಮಾಡಲಾಗಿದೆ, ಉಳಿದ ಕ್ಷೇತ್ರಗಳಲ್ಲಿ ಎಲ್ಲರ ಅಭಿಪ್ರಾಯ ಬಂದ ಮೇಲೆ ಮಾಡ್ತೇವೆ. ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ, ಆಪರೇಷನ್ ಕಮಲ ಮಾಡಲು ಶುರು ಮಾಡಿದವರು ಮಿಸ್ಟರ್ ಯಡಿಯೂರಪ್ಪ. 2009ರಲ್ಲಿ ಯದ್ವಾತದ್ವಾ ದುಡ್ಡು ಖರ್ಚು ಮಾಡಿ 15 ಜನರನ್ನು ಖರೀದಿಸಿ ಸರ್ಕಾರ ಮಾಡಿದ್ರು. ಈಗಲೂ ಅದನ್ನೇ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಗುಡುಗಿದರು.

ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ನಿನ್ನೆ ಕಾಂಗ್ರೆಸ್ ನಾಯಕರ‌ ಮಧ್ಯೆ ವಾಗ್ವಾದ ನಡೆಯಿತು ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲ ಸುಳ್ಳು, ಏನೂ ಆಗಿಲ್ಲ ಎಂದು ಹೇಳಿ ಹೊರಟರು.