ಕಾಂಗ್ರೆಸ್ಗೆ 25 ಸ್ಥಾನಗಳು ಸಿಗುವುದೂ ಡೌಟು ; ಚಾಣಕ್ಯ ತಂತ್ರಗಳೂ ನಡೆಯಲ್ಲ, ಅತಂತ್ರ ಆಗಲ್ಲ : ಎಚ್ಡಿಕೆ
ಹಾಸನ: ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿಯ ಯಾವ ಚಾಣಕ್ಯ ತಂತ್ರಗಳೂ ನಡೆಯುವುದಿಲ್ಲ. ಅತಂತ್ರ ಪರಿಸ್ಥಿತಿ ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೃಢವಿಶ್ವಾಸ ವ್ಯಕ್ತಪಡಿಸಿದರು.

‘‘ನಮ್ಮದೇ ಸರಕಾರ, ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೋದೆಡೆ ಎಲ್ಲ ಹೇಳುತ್ತಿದ್ದಾರೆ. ಅವರ ಪಕ್ಷ ಅಧಿಕಾರಕ್ಕೆ ಬರುವುದಿರಲಿ, 25 ಸ್ಥಾನಕ್ಕೆ ಇಳಿದರೂ ಆಶ್ಚರ್ಯವಿಲ್ಲ,’’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
‘‘ಜೆಡಿಎಸ್ 25 ಸ್ಥಾನ ಗಳಿಸಲ್ಲ ಎಂದು ಪದೇ ಪದೆ ಕೆಣಕಿ ಅಧೋಗತಿಗೆ ಹೋಗಬೇಡಿ. ಮೇ 18ರಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬ. ಅಂದೇ ಜೆಡಿಎಸ್ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ನನ್ನ ತಂದೆ ದೇವೇಗೌಡರು, ತಾಯಿ ಚನ್ನಮ್ಮ ಸಾಕ್ಷಿಯಾಗಲಿದ್ದಾರೆ. ಜನರ ಮನಸ್ಸನ್ನು ಪರಿರ್ತನೆ ಮಾಡಲು ಜೆಡಿಎಸ್ ಟೀಕಿಸುತ್ತಿದ್ದೀರಲ್ಲ, ಇನ್ನೊಂದು ಜನ್ಮ ಎತ್ತಿಬಂದರೂ, ಜನ ನಿಮ್ಮ ಮಾತು ಕೇಳುವುದಿಲ್ಲ ಎಂಬ ನಂಬಿಕೆ ನನಗಿದೆ,’’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘‘ಸೋಲಿನ ಭೀತಿಯಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಐದು ದಿನದಿಂದ ಠಿಕಾಣಿ ಹೂಡಿ ಹಳ್ಳಿ, ಹಳ್ಳಿಗೆ ತಿರುಗುತ್ತಿದ್ದೀರಲ್ಲ, ಅಲ್ಲಿ ಜನತೆ ಯಾವ ರೀತಿ ಸ್ಪಂದಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲವೆ. ನಿಮ್ಮ ದುರಂಕಾರಕ್ಕೆ ತಕ್ಕಶಾಸ್ತಿ ಮಾಡಲಿದ್ದಾರೆ’’ ಎಂದು ಟೀಕಿಸಿದರು.
