ಕಾಂಗ್ರೆಸ್ ದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಸಾಮರ್ಥ್ಯ ಹೊಂದಿದೆ : ಬಿ.ಕೆ ಹರಿಪ್ರಸಾದ್

Featured, ಜಿಲ್ಲೆ

ಬಾಗಲಕೋಟೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್ ತಿಂಗಳ ಅವಧಿಯಲ್ಲಿ ಬಿಎಸ್ ವೈ ಸಿಎಮ್ ಆಗುತ್ತಾರೆ ಎಂಬ ರಂಭಾಪುರಿ ಶ್ರೀ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ‘ ಸ್ವಾಮೀಜಿಗಳ ಹೇಳಿಕೆ ಬಗ್ಗೆ ನಾನು ಮಾತನಾಡೋದಿಲ್ಲ. ಸ್ವಾಮೀಜಿಗಳು ಅವರ ಅನಿಸಿಕೆ ಹೇಳಿದ್ದಾರೆ. ರಾಜಕಾರಣಿಗಳು ಹೇಳಿದ್ದರೆ ನಾ ಉತ್ತರ ಕೊಡುತ್ತಿದ್ದೆ. ಅವರು ಮಾತನಾಡುವ ವೇಳೆ ನಾವು ಮಾತನಾಡೋದು ತಪ್ಪು ‘ ಎಂದಿದ್ದಾರೆ.

‘ ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಜೆಡಿಎಸ್ ಲೋಕಸಭಾ ಚುನಾವಣೆ ಒಟ್ಟಾಗಿ ಎದುರಿಸುತ್ತೇವೆ. ಕಾಂಗ್ರೆಸ್ ದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಶಕ್ತಿ ಹೊಂದಿದೆ. ಜೆಡಿಎಸ್ ಕಾಂಗ್ರೆಸ್ ಯಾರಾದರೂ ಪ್ರಧಾನಿಯಾಗಲಿ. ಆದರೆ ಬಿಜೆಪಿ ಪಕ್ಷದವರನ್ನು ಬಿಟ್ಟು ಯಾರಾದರೂ ಪ್ರಧಾನಿಯಾಗ್ತಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆಯ್ಕೆ ಬಗ್ಗೆ ರಾಹುಲ್ ಗಾಂಧಿ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ‘ ಎಂದು ಹೇಳಿದ್ದಾರೆ.

ಸಭಾಪತಿ ಆಯ್ಕೆ ಗೊಂದಲ ವಿಚಾರವಾಗಿ ಮಾತನಾಡಿರುವ ಅವರು ‘ ಸಮ್ಮಿಶ್ರ ಸರಕಾರ ಅಂದ ಮೇಲೆ ಚರ್ಚೆಗಳು,ಗೊಂದಲಗಳು ಸಾಮಾನ್ಯ. ಈ ಬಗ್ಗೆ ಸಮನ್ವಯ ಸಮಿತಿ ಇದೆ ಸಮಿತಿ ಮೂಲಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ‘ ಎಂದಿದ್ದಾರೆ.

ಸಮ್ಮಿಶ್ರ ಸರಕಾರ ಹೆಚ್ಚು ದಿನ ಉಳಿಯೋದಿಲ್ಲ ಎಂಬ ಡಿವಿ ಸದಾನಂದಗೌಡ ಹೇಳಿಕೆಗೆ ತಿರುಗೇಟು ನೀಡಿರುವ ಹರಿಪ್ರಸಾದ್ ‘ ಸದಾನಂದಗೌಡ ಓರ್ವ ರಾಜಕೀಯ ಪಂಡಿತ, ಭವಿಷ್ಯ ನುಡಿತಕ್ಕಂತವರು ಅವರ ಭವಿಷ್ಯ ಏನಾಗುತ್ತದೆ ಅಂತ ಎಲ್ಲರೂ ನೋಡಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ನಿಗಮ ಮಂಡಳಿ ಆಯ್ಕೆ ವಿಚಾರವಾಗಿ ‘ ಮೊದಲನೇ ಹಂತದಲ್ಲಿ ಹಿರಿಯ ಶಾಸಕರಿಗೆ ಕೊಡುವ ತೀರ್ಮಾನ ಮಾಡಲಾಗಿದೆ. ಉಳಿದಂತೆ ಪ್ರಮುಖ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುವುದು ‘ ಎಂದು ಹೇಳಿದ್ದಾರೆ.