ಕಾಂಗ್ರೇಸಿನಿಂದ ಚುನಾವಣಾ ಪೂರ್ವ ಅಕ್ರಮ : ಬಿಜೆಪಿ ಆರೋಪ; 94 ಕ್ಷೇತ್ರಕ್ಕೆ ಶ್ರಮಶಕ್ತಿಯ 18 ಕೋಟಿ ಹಂಚಿಕೆ….
ಬೆಂಗಳೂರು: ರಾಜ್ಯ ಸರಕಾರ ‘ಶ್ರಮಶಕ್ತಿ ‘ಯೋಜನೆ ಹೆಸರಿನಲ್ಲಿ ಚುನಾವಣಾ ಪೂರ್ವ ಅಕ್ರಮ ನಡೆಸಿದ್ದು, ಕಾಂಗ್ರೆಸ್ ಶಾಸಕರಿರುವ 94 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಓಲೈಕೆಗಾಗಿ ತಲಾ 18.75 ಲಕ್ಷ ರೂ. ಹಂಚಿಕೆ ಮಾಡಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದು, ”ನೀತಿ ಸಂಹಿತೆ ಜಾರಿಗೆ ಬಂದ ನಂತರ ಹಣ ಹಂಚುವುದು ಕಷ್ಟವಾಗುತ್ತದೆ ಎಂದು ಸರಕಾರ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮೂಲಕ ಶ್ರಮ ಶಕ್ತಿ ಯೋಜನೆ ದುರ್ಬಳಕೆ ಮಾಡಿಕೊಂಡಿದೆ. ಆಯೋಗ ತಕ್ಷಣ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು,” ಎಂದು ಆಗ್ರಹಿಸಿದರು.
”ಈ ಯೋಜನೆಗೆ ಅನಾಮಧೇಯ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸಿನ 94 ಶಾಸಕರನ್ನು ಮಾತ್ರ ಈ ವ್ಯಾಪ್ತಿಗೆ ತರಲಾಗಿದ್ದು, ಉಳಿದ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ಇಲ್ಲವೇ? ಯೋಜನೆಯ ಅನುಷ್ಠಾನಕ್ಕೆ ಸರಕಾರ ಅನುಸರಿಸಿದ ಮಾನದಂಡಗಳೇನು,”ಎಂದು ಪ್ರಶ್ನಿಸಿದರು.
”ಈ ಯೋಜನೆಯ ಲಾಭ ಪಡೆಯುವುದಕ್ಕೆ ಯಾರು ಅರ್ಹರಿದ್ದಾರೆ ಎಂಬ ಬಗ್ಗೆ ಅಲ್ಪಸಂಖ್ಯಾತರ ಆಯೋಗವೇ ನಿರ್ಧಾರ ಮಾಡಬೇಕು. ಪಟ್ಟಿಯನ್ನು ಅನುಮೋದಿಸುವುದಕ್ಕೆ ಶಾಸಕರಿಗೆ ಯಾವುದೇ ಅಧಿಕಾರವಿಲ್ಲ. ನಿಗಮದ ಜಿಲ್ಲಾ ವ್ಯವಸ್ಥಾಪಕರು ಮಾಡಬೇಕಾದ ಕೆಲಸವನ್ನು ಶಾಸಕರು ಮಾಡಿದ್ದಾರೆ. ಒಟ್ಟಾರೆಯಾಗಿ ಶ್ರಮಶಕ್ತಿ ಯೋಜನೆಯೇ ಅಕ್ರಮದ ಗೂಡಾಗಿದ್ದು, 18 ಕೋಟಿಗೂ ಮೇಲ್ಪಟ್ಟು ಅಕ್ರಮವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಡಹಗಲೇ ಬೊಕ್ಕಸ ಕೊಳ್ಳೆ ಹೊಡೆಯುತ್ತಿದ್ದಾರೆ,” ಎಂದು ಆಪಾದಿಸಿದರು.
