ಕಾಪುವಿನಲ್ಲಿ ಅಮ್ಮನ ಮಕ್ಕಳೇ ಜತೆ ಸೇರಿ ಅತ್ಯದ್ಭುತವಾಗಿ ಮಾರಿಗುಡಿಯನ್ನು ನಿರ್ಮಿಸಿದ್ದಾರೆ : ಪೇಜಾವರ ಶ್ರೀ – vishwanews24
ಕಾಪುವಿನಲ್ಲಿ ಅಮ್ಮನ ಮಕ್ಕಳೇ ಜತೆ ಸೇರಿ ಅತ್ಯದ್ಭುತವಾಗಿ ಮಾರಿಗುಡಿಯನ್ನು ನಿರ್ಮಿಸಿದ್ದಾರೆ : ಪೇಜಾವರ ಶ್ರೀ
ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಎಂಟನೇ ದಿನದ ಧಾರ್ಮಿಕ ಸಭೆ ಉದ್ಘಾಟಿಸಿದ ಪೇಜಾವರ ಶ್ರೀ
ಕಾಪು: ಒಡೆಯ ಶ್ರೀ ಜನಾರ್ದನ ದೇವರು ಹಾಗೂ ತಾಯಿ ಮಾರಿಯಮ್ಮನ ರಕ್ಷಣೆಯಲ್ಲಿರುವ ಕಾಪುವಿನಲ್ಲಿ ಅಮ್ಮನ ಮಕ್ಕಳೇ ಜತೆ ಸೇರಿ ಅತ್ಯದ್ಭುತವಾಗಿ ಮಾರಿಗುಡಿಯನ್ನು ನಿರ್ಮಿಸಿದ್ದಾರೆ. ಕುಂಕುಮವರ್ಣದ ಇಳಕಲ್ ಕೆಂಪು ಶಿಲೆಯಲ್ಲಿ ನಿರ್ಮಾಣಗೊಂಡು, ಶಿಲಾ ಶಿಲ್ಪ, ದಾರು ಶಿಲ್ಪದ ವೈಭವದೊಂದಿಗೆ ಸ್ವರ್ಣ ಗದ್ದುಗೆ, ರಜತ ರಥ, ಬೃಹತ್ ಘಂಟೆ ಸಹಿತವಾಗಿ ಕಾಪುವಿನ ಅಮ್ಮನ ದೇವಸ್ಥಾನವು ದಕ್ಷಿಣ ಭಾರತದಲ್ಲೇ ಅತ್ಯಪೂರ್ವವಾಗಿ ಮೂಡಿಬಂದಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಎಂಟನೇ ದಿನದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ನಮ್ಮೆಲ್ಲರ ಮನೋರಥದಲ್ಲಿಯೂ ದೇವರನ್ನು ಪ್ರತಿಷ್ಠೆ ಮಾಡಿ ಊರು ತುಂಬಾ ಪ್ರದಕ್ಷಿಣೆ ಮಾಡಬೇಕು. ಅಮ್ಮನನ್ನು ಕೇವಲ ಗರ್ಭಗುಡಿಗೆ ಸೀಮಿತವಾಗಿರಿಸಿಕೊಳ್ಳದೇ ನಮ್ಮ ಮನಸ್ಸಿನಲ್ಲಿಯೂ ಸದಾ ಕಾಪಿಟ್ಟುಕೊಳ್ಳಬೇಕಿದೆ. ವಾಸುದೇವ ಶೆಟ್ಟಿ ಅವರ ನೇತೃತ್ವದಲ್ಲಿ ಸರ್ವಾಂಗ ಸುಂದರವಾಗಿ ಮಾರಿಗುಡಿ ನಿರ್ಮಾಣವಾಗಿದೆ ಎಂದು ಆಶೀರ್ವದಿಸಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ವಿದ್ವಾನ್ ನಿಟ್ಟೆ ಪ್ರಸನ್ನ ಆಚಾರ್ಯ, ಶಶಿಧರ್ ಶೆಟ್ಟಿ ಮಲ್ಲಾರು, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಉದ್ಯಮಿಗಳಾದ ಪ್ರಸಾದ್ರಾಜ್ ಕಾಂಚನ್, ರಾಮದಾಸ ಮಡ್ಮಣ್ಣಾಯ, ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ಬೆಟ್ಟು, ಅರುಣ್ಕುಮಾರ್ ಪುತ್ತಿಲ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮ್ಮಾನ: ಮಹಾದಾನಿಗಳಾದ ಆನಂದ ಶೆಟ್ಟಿ ಮತ್ತು ಶಶಿರೇಖಾ ಶೆಟ್ಟಿ ದಂಪತಿ, ಅರವಿಂದ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ಮುಂಬಯಿ, ಕೆ.ಎಂ. ಶೆಟ್ಟಿ ಮತ್ತು ವಸಂತಿ ಶೆಟ್ಟಿ ದಂಪತಿಯನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು. ವೇದಿಕೆ ಸಮಿತಿಯ ಅಶೋಕ್ ಪಕಳ ಸ್ವಾಗತಿಸಿ, ದಾಮೋದರ ಶರ್ಮ ನಿರೂಪಿಸಿದರು.
