ಕಾಪು ದಂಡತೀರ್ಥ ಕೆರೆಯಲ್ಲಿ ಕೃಷ್ಣಾಪುರದ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಪವಿತ್ರ ಸ್ನಾನ:vishwanews24 

Featured, ಉಡುಪಿ

ಕಾಪು ದಂಡತೀರ್ಥ ಕೆರೆಯಲ್ಲಿ ಕೃಷ್ಣಾಪುರದ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಪವಿತ್ರ ಸ್ನಾನ:vishwanews24 

ಕಾಪು: ಸರ್ವಜ್ಞ ಪೀಠಾರೋಹಣಕ್ಕೆ ಮುನ್ನ ಪರ್ಯಾಯೋತ್ಸವದ ಸಂಪ್ರದಾಯದಂತೆ ಕೃಷ್ಣಾಪುರದ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಗುರುವಾರ ಬೆಳಗ್ಗಿನ ಜಾವ 2.30ಕ್ಕೆ ಕಾಪು ದಂಡತೀರ್ಥ ಮಠದ ದಂಡತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ ನೆರವೇರಿಸಿದರು.
ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರನ್ನು ಕಾಪು ದಂಡತೀರ್ಥ ಮಠದ ತೋಟಂತಿಲ್ಲಾಯ ವಂಶಸ್ಥರಾದ ಡಾ. ಸೀತಾರಾಮ ಭಟ್‌ ನೇತೃತ್ವದಲ್ಲಿ ಅರ್ಚಕ ಶ್ರೀನಿವಾಸ್‌ ಭಟ್‌ ಹಾಗೂ ತೋಟಂತಿಲ್ಲಾಯ ಕುಟುಂಬಸ್ಥರು ಶಂಕರಪುರ ಮಲ್ಲಿಗೆಯ ಹಾರ ಹಾಕಿ ಸ್ವಾಗತಿಸಿ ಮಠಕ್ಕೆ ಬರಮಾಡಿಕೊಂಡರು. ಮಠ ಪ್ರವೇಶಿಸಿದ ಶ್ರೀಗಳು ಕೆಲ ಕ್ಷಣ ವಿಶೇಷ ಸಿಂಹಾಸನದಲ್ಲಿ ಆಸೀನರಾಗಿ ಬಳಿಕ ನಿತ್ಯ ಕರ್ಮಾದಿಗಳನ್ನು ಪೂರೈಸಿ ತಮ್ಮ ಶಿಷ್ಯಗಡಣದೊಂದಿಗೆ ದಂಡತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ, ಜಪತಪಾದಿಗಳನ್ನು ನೆರವೇರಿಸಿದರು.
ಬಳಿಕ ಪಲಿಮಾರು ಮಠದ ಪಟ್ಟದ ದೇವರು ಸಮೇತ ದಂಡತೀರ್ಥ ಮಠದ ದೇವರಾದ ಕುಂಜಿ ಗೋಪಾಲಕೃಷ್ಣ ಹಾಗೂ ರಾಮ, ಕೃಷ್ಣ, ಲಕ್ಷ ್ಮಣ, ಭೂದೇವಿ, ಶ್ರೀದೇವಿ ಮತ್ತು ಹಾಗೂ ಮುಖ್ಯಪ್ರಾಣ ದೇವರಿಗೆ ಏಕ ನೈವೇದ್ಯ ಸಮರ್ಪಿಸಿ ಮಹಾಮಂಗಳಾರತಿ ನೆರವೇರಿಸಿದರು. ನಂತರ ಉಡುಪಿಗೆ ತೆರಳಿ ಸರ್ವಜ್ಞ ಪೀಠಾರೋಹಣಕ್ಕೆ ಪೂರ್ವ ಜೋಡುಕಟ್ಟೆಯಿಂದ ಹೊರಟ ಪರ್ಯಾಯ ಮೆರವಣಿಗೆ ಸೇರಿಕೊಂಡರು. ಸ್ವಾಮೀಜಿಯೊಂದಿಗೆ ಅವರ ಶಿಷ್ಯಗಡಣ, ಭಕ್ತಾದಿಗಳು ಹಾಗೂ ಮಠದ ಕಾರ್ಯಕರ್ತರು ಉಪಸ್ಥಿತರಿದ್ದರು.
ಆಚಾರ್ಯರು ಸೃಷ್ಟಿಸಿದ ಕೆರೆಯಲ್ಲಿ ಸ್ನಾನ
ಆಚಾರ್ಯ ಮಧ್ವರು ತಮ್ಮ ಅವತಾರ ಭೂಮಿಯಾದ ಪಾಜಕದಿಂದ ಪ್ರಾಥಮಿಕ ಶಿಕ್ಷ ಣಕ್ಕಾಗಿ ಕಾಪು ಬಳಿಯ ಉಳಿಯಾರಗೋಳಿಗೆ ಬಂದು ಇಲ್ಲಿನ ತೋಟಂತಿಲ್ಲಾಯರೆನ್ನುವ ಐಗಳ ಬಳಿ ವೇದಾಧ್ಯಯನಾದಿ ವಿದ್ಯಾಭ್ಯಾಸ ನಡೆಸಿದ್ದರು.
ವಿದ್ಯಾಭ್ಯಾಸ ಮುಗಿಸಿ ಹಿಂದಿರುಗುವ ವೇಳೆ ಆಚಾರ್ಯರು ತಮ್ಮ ಗುರುಗಳಿಗೆ ಗುರುದಕ್ಷಿಣೆಯ ರೂಪದಲ್ಲಿ ಗುರುಗಳ ಆಶಯದಂತೆ ಪರಿಸರದ ನೀರಿನ ಸಮಸ್ಯೆ ಹೋಗಲಾಡಿಸುವ ಸಂಕಲ್ಪದಿಂದ ತಮ್ಮ ತಪೋದಂಡದಿಂದ ನೆಲವನ್ನು ಗೀರಿ ಈ ಸ್ಥಳದಲ್ಲಿ ನೀರಿನ ಸೆಲೆ ಉಕ್ಕುವಂತೆ ಮಾಡಿದ್ದರಂತೆ. ಇದರಿಂದಾಗಿ ಇಲ್ಲಿ ಕೆರೆ ನಿರ್ಮಾಣವಾಗಿ ಮುಂದೆ ಇಲ್ಲಿನ ನೀರಿನ ಸಮಸ್ಯೆ ಪರಿಹಾರಗೊಂಡು ಸುತ್ತೆಲ್ಲ ಕೃಷಿ ಭೂಮಿಗಳು ಸಮೃದ್ಧಿ ಪಡೆದುಕೊಂಡವೆಂಬ ಪ್ರತೀತಿಯಿದೆ. ಆಚಾರ್ಯರ ದಂಡದಿಂದ ಉದ್ಭವಿಸಿದ ಕಾರಣಕ್ಕೆ ಈ ಕೆರೆಗೆ ದಂಡತೀರ್ಥವೆಂದು ಹೆಸರಾಯಿತು. ಇಂದಿಗೂ ಈ ಕೆರೆ ವರ್ಷದ 12 ತಿಂಗಳೂ ನೀರಿನ ಸಮೃದ್ಧಿಯನ್ನು ಕಾಯ್ದುಕೊಂಡು ಬರುತ್ತಿದೆ.
ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಅಷ್ಟಮಠಗಳ ಯತಿಗಳು ತಮ್ಮ ತಮ್ಮ ಪರ್ಯಾಯದ ಅವದಿಯಲ್ಲಿ ಸರ್ವಜ್ಞ ಪೀಠಾರಹಣಕ್ಕೆ ಮುನ್ನ ಇಲ್ಲಿನ ಕೆರೆಯಲ್ಲಿ ಜಳಕ ಪೂರೈಸಿ, ಮಠದ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿಯೇ ಮುಂದಿನ ಎರಡು ವರ್ಷಗಳ ಅವಧಿಗೆ ಉಡುಪಿ ಶ್ರೀಕೃಷ್ಣನ ಪೂಜೆಯ ಜವಾಬ್ದಾರಿ ನಿರ್ವಹಿಸಲು ತೆರಳುವುದು ಸಂಪ್ರದಾಯ.
ಆಚಾರ್ಯ ಮಧ್ವರು ತಮ್ಮ ದಂಡದಿಂದ ನಿರ್ಮಿಸಿದ್ದರೆನ್ನುವ ಐತಿಹ್ಯ ಇರುವ ಈ ಕೆರೆಯನ್ನು ಶಾಸಕ ವಿನಯ ಕುಮಾರ್‌ ಸೊರಕೆಯವರ ಮುತುವರ್ಜಿಯಿಂದ ರಾಜ್ಯ ಸರಕಾರದ ಸುಮಾರು 17 ಲಕ್ಷ ರೂ. ಅನುದಾನದಲ್ಲಿ ನವೀಕರಣಗೊಳಿಸಲಾಗಿತ್ತು.

Leave a Reply