ಕಾಪು: ಮೂಳೂರು ಪರಿಸರದಲ್ಲಿ ಕಡಲ್ಕೊರೆತ: ಆತಂಕದಲ್ಲಿ ಸ್ಥಳೀಯ ನಿವಾಸಿಗಳು – vishwanews24
ಕಾಪು: ಮೂಳೂರು ಪರಿಸರದಲ್ಲಿ ಕಡಲ್ಕೊರೆತ: ಆತಂಕದಲ್ಲಿ ಸ್ಥಳೀಯ ನಿವಾಸಿಗಳು ತುರ್ತು ಕಾಮಗಾರಿಗೆ ಸರಕಾರದ ಅನುದಾನ ನಿರೀಕ್ಷಿಸಲಾಗುತ್ತಿದೆ : ಕಾಪು ಶಾಸಕರು
ಕಾಪು: ಕಾಪು ಪುರಸಭಾ ವ್ಯಾಪ್ತಿಯ ಕಾಪು ಪಡು ಮೂಳೂರು ತೊಟ್ಟಂ ಮತ್ತು ಮೂಳೂರು ಲಕ್ಷ್ಮೀ ನಾರಾಯಣ ಭಜನಾ ಮಂದಿರದ ನಡುವಿನ ಸುಮಾರು ಒಂದು ಕಿ. ಮೀ. ಉದ್ದದ ಕರಾವಳಿ ತೀರದ ಎರಡು ಮೂರು ಕಡೆಗಳಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ.
ಬೃಹತ್ ಅಲೆಗಳು ದಡಕ್ಕೆ ಮತ್ತು ತಡೆಗೋಡೆಗೆ ಅಪ್ಪಳಿಸುತ್ತಿದ್ದು ಈ ಪ್ರದೇಶಗಳಲ್ಲಿ ಹಿಂದೆ ನಿರ್ಮಿಸಿರುವ ತಡೆಗೋಡೆ, ಕಡಲು ವಿಸ್ತಾರಗೊಳ್ಳದಂತೆ ಅಡ್ಡಲಾಗಿ ಜೋಡಿಸಿರುವ ಕಲ್ಲುಗಳನ್ನು ಆಹುತಿ ಪಡೆಯುತ್ತಾ ಮುನ್ನುಗ್ಗಿ ಸಾಗಿಬರುತ್ತಿದೆ.
ಬೃಹತ್ ಅಲೆಗಳ ಕಾರಣದಿಂದಾಗಿ ಫಿಷರೀಸ್ ರಸ್ತೆಯಿಂದ ಪಡುಭಾಗದಲ್ಲಿರುವ ವೆಂಕು ಬಾಯಿ, ಅಪ್ಪಿ ಮರಕಾಲ್ತಿ, ತಾರಾವತಿ ಶ್ರೀಯಾನ್, ಶಾರದಾ ಕೋಟ್ಯಾನ್, ಸಂತೋಷ್ ಕುಮಾರ್, ಸುಮತಿ ಕಾಂಚನ್ ಎಂಬವರಿಗೆ ಸೇರಿದ ಮನೆ, ತೋಟ ಮತ್ತು ಖಾಲಿ ಜಾಗವು ತೀರಾ ಅಪಾಯದಲ್ಲಿವೆ. ಹತ್ತಾರು ತೆಂಗಿನಮರಗಳು ಸಮುದ್ರದ ಒಡಲು ಸೇರಲು ಸಿದ್ಧವಾಗಿರುವಂತೆ ಭಾಸವಾಗುತ್ತಿದೆ.
ಲೈಟ್ ಹೌಸ್ ಪರಿಸರದಲ್ಲೂ ಭೀತಿ
ಕಾಪು ಲೈಟ್ ಹೌಸ್ ಬಳಿ ದೊಡ್ಡ ಅಲೆಗಳು ಬಂಡೆಗೆ ಅಪ್ಪಳಿಸುತ್ತಾ ಭಯದ ವಾತಾವರಣ ಸೃಷ್ಟಿಸಿವೆ. ಪೊಲಿಪು, ಲೈಟ್ಹೌಸ್ನ ಎರಡೂ ಬದಿ, ಕಾಪು ತೊಟ್ಟಂ, ಅಲ್ಲಿಂದ ಭಜನಾ ಮಂದಿರದವರೆಗಿನ ಪ್ರದೇಶ, ಗೆಸ್ಟ್ ಹೌಸ್ ಪರಿಸರದಲ್ಲೂ ಕಡಲ್ಕೊರೆತದ ಭೀತಿ ಎದುರಾಗಿದೆ.
ಗೆಸ್ಟ್ ಹೌಸ್ ಪ್ರದೇಶ ಸುರಕ್ಷಿತ
ಸಮುದ್ರ ತೀರದಲ್ಲಿ ಅಲ್ಲಲ್ಲಿ ನಿರ್ಮಾಣಗೊಂಡಿರುವ ಗೆಸ್ಟ್ ಹೌಸ್, ರೆಸಾರ್ಟ್ಗಳು, ರೆಸಾರ್ಟ್ ನಿರ್ಮಾಣಕ್ಕಾಗಿ ಖರೀದಿರಿಸುವ ಜಾಗಗಳಲ್ಲಿ ಮಾಲಕರುಗಳು ತಮ್ಮ ಸ್ವಂತ ಖರ್ಚಿನಲ್ಲಿ ಕಲ್ಲುಗಳನ್ನು ಹಾಕಿಸಿರುವುದರಿಂದ ಆ ಪ್ರದೇಶಗಳಲ್ಲಿ ಸದ್ಯ ಕಡಲ್ಕೊರೆತ ಕಾಣಿಸಿಕೊಂಡಿಲ್ಲ. ಕಡಲಬ್ಬರ ಹೆಚ್ಚಾದರೆ ಅಲ್ಲಿಯೂ ಸಮುದ್ರ ನುಗ್ಗುವ ಸಾಧ್ಯತೆಗಳಿವೆ.
ಅನುದಾನವಿದ್ದರೂ ಕಾಮಗಾರಿ ಆರಂಭಗೊಂಡಿಲ್ಲ
ಕಡಲ್ಕೊರೆತ ಪ್ರತಿಬಂಧಕ ಕಾಮಗಾರಿಗೆ 2024-25ರಲ್ಲಿ ಉಡುಪಿ ಜಿಲ್ಲೆಗೆ 4.50 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ಅದರಲ್ಲಿ ಕಾಪು ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂ. ಮೀಸಲಿಡಲಾಗಿದೆ. ಅನುದಾನ ಬಿಡುಗಡೆಗೊಂಡು, ಟೆಂಡರ್ ಆಗಿ ಗುತ್ತಿಗೆದಾರರನ್ನೂ ನೇಮಿಸಲಾಗಿದೆ. ಆದರೆ ಕಾಮಗಾರಿ ವಿಳಂಬವಾಗಿದೆ. ಅದರ ಜತೆಗೆ ಹಿಂದಿನ ವರ್ಷವೇ ಬಿಡುಗಡೆಯಾಗಿದ್ದ 2 ಕೋ. ರೂ. ಅನುದಾನದ ಕಾಮಗಾರಿ ಟೆಂಡರ್ ಹಂತದಲ್ಲಿದೆ.
ಸರಕಾರದ ಅನುದಾನ ನಿರೀಕ್ಷೆಯಲ್ಲಿ
ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರದಿಂದ ಹೆಜಮಾಡಿ ಯವರೆಗಿನ ಕಡಲ್ಕೊರೆತದ ಭೀತಿಯ ಪ್ರದೇಶಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ. ಆ ಪ್ರದೇಶಗಳಲ್ಲಿ ತುರ್ತು ಕಾಮಗಾರಿಗೆ ಸರಕಾರದ ಅನುದಾನ ನಿರೀಕ್ಷಿಸಲಾಗುತ್ತಿದೆ. ಅದರ ಜತೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕವಾಗಿ ಕೇಂದ್ರದಿಂದ ಸಾಗರ್ಮಾಲ ಯೋಜನೆಯಡಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಗುರ್ಮೆ ಸುರೇಶ್ ಶೆಟ್ಟಿ, ಶಾಸಕರು, ಕಾಪು
