‘ಕೇರಳ ಅಥವಾ ತಮಿಳುನಾಡಿನಿಂದ ಸ್ಪರ್ಧಿಸುವ ಧೈರ್ಯ ಪ್ರಧಾನಿ ಮೋದಿ ಅವರಿಗೆ ಇದೆಯೇ’ ? ಶಶಿ ತರೂರ್ – Vishwanews24
ನವದೆಹಲಿ: ‘ಕೇರಳ ಅಥವಾ ತಮಿಳುನಾಡಿನಿಂದ ಸ್ಪರ್ಧಿಸುವ ಧೈರ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೆಯೇ’ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದ ಶಶಿ ತರೂರ್ ಪ್ರಶ್ನಿಸಿದ್ದಾರೆ.
‘ವಯನಾಡ್ನಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುವ ಮೂಲಕ ಉತ್ತರ ಮತ್ತು ದಕ್ಷಿಣ ಭಾರತದಿಂದ ಗೆಲ್ಲುವ ವಿಶ್ವಾಸವಿದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ’ ಎಂದು ಹೇಳಿದ್ದಾರೆ.
‘ರಾಹುಲ್ ಅವರು ವಯನಾಡ್ನಲ್ಲಿ ಸ್ಪರ್ಧಿಸಿದ್ದರಿಂದ ದಕ್ಷಿಣ ರಾಜ್ಯಗಳಲ್ಲಿ ಅತಿ ಹೆಚ್ಚು ಉತ್ಸಾಹ ಮೂಡಿದೆ. ಮುಂದಿನ ಪ್ರಧಾನಿ ನಮ್ಮ ಪ್ರದೇಶದಿಂದಲೇ ಆಯ್ಕೆಯಾಗುತ್ತಾರೆ ಎನ್ನುವ ಭಾವನೆ ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಎಲ್ಲರಲ್ಲೂ ಮೂಡಿದೆ. ರಾಹುಲ್ ಅಲೆ ಕೇರಳದ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಇದೇ ಉತ್ಸಾಹ ಕರ್ನಾಟಕ ಮತ್ತು ತಮಿಳುನಾಡಿನಲ್ಲೂ ಕಾಣುತ್ತಿದೆ’ ಎಂದು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳೊಂದಿಗೆ ಹಲವು ವಿಷಯಗಳಲ್ಲಿ ನಿರಂಕುಶ ರೀತಿಯಲ್ಲಿ ನಡೆದುಕೊಂಡಿದೆ ಎಂದು ಶಶಿ ತರೂರ್ ಆರೋಪಿಸಿದರು.ರಾಹುಲ್ ಗಾಂಧಿ ಉತ್ತರದ ಅಮೇಥಿ ಹಾಗೂ ದಕ್ಷಿಣದ ವೈನಾಡು ಎರಡು ಕ್ಷೇತ್ರದಿಂದಲೂ ಗೆಲ್ಲಲಿದ್ದಾರೆ ಎಂದು ಶಶಿ ತರೂರ್ ವಿಶ್ವಾಸ ವ್ಯಕ್ತಪಡಿಸಿದರು.
‘ಎನ್ಡಿಎ ಆಡಳಿತಾವಧಿಯಲ್ಲಿ ದಕ್ಷಿಣ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವಣ ಸಂಬಂಧ ತೀವ್ರ ಹದಗೆಟ್ಟಿತ್ತು. ದಕ್ಷಿಣ ಮತ್ತು ಉತ್ತರದ ನಡುವೆ ಸಂಪರ್ಕ ಸೇತುವೆಯಾಗಿ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಕಾರ್ಯೋನ್ಮುಖರಾಗಿದ್ದಾರೆ’ ಎಂದು ಪ್ರತಿಪಾದಿಸಿದರು.
