ಕೊಡೈಕನಲ್ ಪ್ರವಾಸಕ್ಕೆ ತೆರಳಿದ್ದ ಯುವಕ ರೈಲಿನಡಿಗೆ ಬಿದ್ದು ಸಾವು

Featured, ಉಡುಪಿ

ಬೆಳ್ಮಣ್‌: ಕೊಡೈಕನಾಲ್‌ಪ್ರವಾಸ ಮುಗಿಸಿ ರೈಲಿನಲ್ಲಿ ಮಂಗಳವಾರ ಮುಂಜಾನೆ ವಾಪಸಾಗುತ್ತಿದ್ದ ಯುವಕರ ತಂಡದಲ್ಲಿದ್ದ ಮುಂಡ್ಕೂರಿನ ಶೈಲೇಶ್‌ ರಾವ್‌ (25) ಅವರು ವಡಗರ ರೈಲು ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ ಸಾವಿಗೀಡಾಗಿದ್ದಾರೆ.

ದುಬೈನಿಂದ ಇತ್ತಿಚೆಗಷ್ಟೇ ಬಂದಿದ್ದ ಶೈಲೇಶ್ ರಾವ್ ತನ್ನ ಕಾಲೇಜಿನ ಮೂವರು ಮಿತ್ರರ ಜತೆ ಕೊಡೈಕನಲ್‌ಗೆ ಪ್ರವಾಸಕ್ಕೆ ತೆರಳಿದ್ದರು. ಕೊಡೈಕನಲ್‌ನಿಂದ ಕೇರಳ ಮೂಲಕ ರೈಲಿನಲ್ಲಿ ವಾಪಾಸಾಗುತ್ತಿದ್ದಾಗ ಮಂಗಳವಾರ ಮುಂಜಾನೆ 2.30ರ ಸುಮಾರಿಗೆ ಬಡಾಗರ್ ಸ್ಟೇಷನ್‌ನಲ್ಲಿ ಕುಡಿಯುವ ನೀರಿಗಾಗಿ ಶೈಲೇಶ್ ರೈಲಿನಿಂದ ಇಳಿದಿದ್ದಾರೆ. ಈ ಸಂದರ್ಭ ರೈಲು ಬಿಟ್ಟಿತೆಂಬ ಅವಸರದಲ್ಲಿ ಹತ್ತಲು ಪ್ರಯತ್ನಿಸಿ ಆಯ ತಪ್ಪಿ ರೈಲಿನಡಿಗೆ ಸಿಕ್ಕಿ ಮೃತ ಪಟ್ಟಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಮುಂಡ್ಕೂರಿನ ಕಂಗುಳಿಯ ಪಾಕ ಶಾಸ್ತ್ರಜ್ಞ ಯೋಗೀಶ್‌ ಭಟ್‌ ಹಾಗೂ ರೇಖಾ ರಾವ್‌ ದಂಪತಿ ಪುತ್ರನಾದ ಶೈಲೇಶ್‌ ಅವರು ನಿಟ್ಟೆ  ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ಡಿಪ್ಲೊಮಾ ಪಡೆದು ಮೂರು ವರ್ಷಗಳಿಂದ ದುಬಾೖಯಲ್ಲಿ ಉದ್ಯೋಗದಲ್ಲಿದ್ದರು. 15 ದಿನಗಳ ಹಿಂದೆ ಊರಿಗೆ ಬಂದಿದ್ದ ಅವರು ಎರಡು ವಾರ ಕಳೆದು ವಾಪಸ್‌ ಹೋಗುವವರಿದ್ದರು.

ಶೈಲೇಶ್‌ ಮತ್ತು ಮಿತ್ರರಿದ್ದ ರೈಲು ಮಂಗಳವಾರ ಬೆಳಗ್ಗೆ 7ರ ಹೊತ್ತಿಗೆ ಮಂಗಳೂರು ತಲುಪಿದಾಗಲಷ್ಟೇ ಉಳಿದವರಿಗೆ ಶೈಲೇಶ್‌ ರೈಲಿನಲ್ಲಿರದ ಬಗ್ಗೆ ತಿಳಿಯಿತು. ಕೂಡಲೇ ಆತನ ಮೊಬೈಲಿಗೆ ಕರೆ ಮಾಡಿದಾಗ ವಡಗರ ಸ್ಟೇಷನ್‌ನ ಪೊಲೀಸರು  ಕರೆ ಸ್ವೀಕರಿಸಿ ಅಪಘಾತದ ಬಗ್ಗೆ ಮಾಹಿತಿ ನೀಡಿದರು.

vishwanews24