ಕೋವಿಡ್ 2ನೇ ಅಲೆ :  ಹೊಸ ಮಾರ್ಗ ಸೂಚಿ ಪ್ರಕಟ, ಮದುವೆಗೆ 200, ರಾಜಕೀಯ ಕಾರ್ಯಕ್ರಮಕ್ಕೆ– 500 ಮಂದಿಗೆ ಅವಕಾಶ -Vishwanews24

Featured, ರಾಜ್ಯ ನ್ಯೂಸ್

ಕೋವಿಡ್ 2ನೇ ಅಲೆ :  ಹೊಸ ಮಾರ್ಗ ಸೂಚಿ ಪ್ರಕಟ..

ಮದುವೆಗೆ 200, ರಾಜಕೀಯ ಕಾರ್ಯಕ್ರಮಕ್ಕೆ– 500 ಮಂದಿಗೆ ಅವಕಾಶ -Vishwanews24

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ನಿಯಮ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಬುಧವಾರ ಹೊಸ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಧಾರ್ಮಿಕ, ರಾಜಕೀಯ ಸಮಾವೇಶಗಳಲ್ಲಿ ಮಾಸ್ಕ್ ಧರಿಸದಿದ್ದರೆ ಮತ್ತು ಅಂತರ ಕಾಪಾಡದಿದ್ದರೆ ಆಯೋಜಕರನ್ನೇ ಜವಾಬ್ದಾರಿ ಮಾಡಲಾಗುವುದು ಎಂದು ತಿಳಿಸಿದೆ.

ಮಾಸ್ಕ್ ಧರಿಸದ ಮತ್ತು ಅಂತರ ಕಾಪಾಡದವರ ವಿರುದ್ಧ ಬಿಬಿಎಂಪಿ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ₹250 ಮತ್ತು ಇತರ ಪ್ರದೇಶಗಳಲ್ಲಿ ₹100 ದಂಡ ವಿಧಿಸಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾರ್ಷಲ್‌ಗಳು, ಇತರೆಡೆ ಹೆಡ್ ಕಾನ್‌ಸ್ಟೆಬಲ್ ಹುದ್ದೆಗೂ ಮೇಲಿನ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬಿಲ್ ಕಲೆಕ್ಟರ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದಂಡ ವಸೂಲಿ ಮಾಡುವ ಅಧಿಕಾರ ನೀಡಲಾಗಿದೆ ಎಂದು ಸರ್ಕಾರ ವಿವರಿಸಿದೆ.

ಕಾರ್ಯಕ್ರಮಗಳಲ್ಲಿ ನಿಗದಿಗಿಂತ ಹೆಚ್ಚು ಜನ ಸೇರಿ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವುದು ಆ ಜಾಗದ ಮಾಲೀಕರ ಜವಾಬ್ದಾರಿ. ಇಂತಹ ಉಲ್ಲಂಘನೆಗಳಿಗೆ ಹವಾನಿಯಂತ್ರಿತವಲ್ಲದ ಸಭಾಂಗಣಗಳಿಗೆ ₹5 ಸಾವಿರ, ಧಾರ್ಮಿಕ, ರಾಜಕೀಯ ರ್‍ಯಾಲಿಗಳು, ಹವಾನಿಯಂತ್ರಿತ ಸಭಾಂಗಣ, ಸ್ಟಾರ್ ಹೋಟೆಲ್‌ಗಳು, ಬ್ರಾಂಡೆಂಡ್ ಅಂಗಡಿಗಳು, ಹೊರಾಂಗಣ ಕಾರ್ಯಕ್ರಮಗಳಿಗೆ ₹10 ಸಾವಿರ ದಂಡ ವಿಧಸಲಾಗುತ್ತದೆ. ಸಭಾಂಗಣದ ಮಾಲೀಕರು ಅಥವಾ ಆಯೋಜಕರು ಈ ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ : ಉಡುಪಿ : ಪರಂಪರಾಗತ ಪೌಷ್ಟಿಕ ಆಹಾರಗಳಿಗೆ ಒತ್ತು ನೀಡಿ : ಲಾಲಾಜಿ ಆರ್ ಮೆಂಡನ್ -Vishwanews24

ಎಷ್ಟು ಜನ ಸೇರಬಹುದು?

ಮದುವೆ: ಹೊರಾಂಗಣ–500, ಒಳಾಂಗಣ–200

ಹುಟ್ಟುಹಬ್ಬದ ರೀತಿಯ ಕಾರ್ಯಕ್ರಮ; ಹೊರಾಂಗಣ–100 , ಒಳಾಂಗಣ –50

ಸಾವು ಅಥವಾ ಅಂತ್ಯಕ್ರಿಯೆ; ಹೊರಾಂಗಣ –100, ಒಳಾಂಗಣ –50

ಧಾರ್ಮಿಕ, ರಾಜಕೀಯ ಕಾರ್ಯಕ್ರಮ; ಹೊರಾಂಗಣ– 500

ಮದುವೆ-ಸಮಾರಂಭಗಳಲ್ಲಿ ನಿಯಮ ಉಲ್ಲಂಘಿಸಿದರೆ ರೂ. 10 ಸಾವಿರ ದಂಡ

ನಿಯಮ ಉಲ್ಲಂಘನೆಗೆ ಎ.ಸಿ. ರಹಿತ ಪಾರ್ಟಿ ಹಾಲ್‌, ವಾಣಿಜ್ಯ ಮಳಿಗೆಗಳಿಗೆ ರೂ.5 ಸಾವಿರ, ಎ.ಸಿ. ಪಾರ್ಟಿ ಹಾಲ್‌, ವಾಣಿಜ್ಯ ಮಳಿಗೆ, ಬ್ರಾಂಡೆಡ್‌ ಶಾಪ್‌, ಶಾಪಿಂಗ್‌ ಮಾಲ್‌ಗಳಿಗೆ ರೂ.10 ಸಾವಿರ, ಸ್ಟಾರ್‌ ಹೋಟೆಲ್‌, ಮದುವೆ ಸಮಾರಂಭಗಳಲ್ಲಿ ನಿಯಮ ಉಲ್ಲಂಘಿಸಿದರೆ ಮಾಲೀಕರಿಗೆ ರೂ. 10 ಸಾವಿರ ಹಾಗೂ ಸಾರ್ವಜನಿಕ ಸಮಾರಂಭ ಅಥವಾ ರ್ಯಾಲಿಗಳಲ್ಲಿ ನಿಯಮ ಉಲ್ಲಂಘನೆಯಾದರೆ ಆಯೋಜಕರಿಗೆ ರೂ. 10 ಸಾವಿರ ದಂಡ ವಿಧಿಸಲು ಆರೋಗ್ಯ ಇಲಾಖೆ ಆದೇಶಿಸಿದೆ.

ಇದನ್ನೂ ಓದಿ : ಉಡುಪಿ : ಮಾ. 27 ರಂದು ಮೆಘಾ ಲೋಕ್ ಅದಾಲತ್ -Vishwanews24

ತಾಂತ್ರಿಕ ಸಲಹಾ ಸಮಿತಿ ಸೂಚನೆ

ನೆರೆ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಸೋಂಕು ಪ್ರಕರಣ ಹೆಚ್ಚಳ ಹಾಗೂ ರಾಜ್ಯದಲ್ಲಿ ಸೋಂಕು ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸೂಚನೆ ಮೇರೆಗೆ ಕೋವಿಡ್ ಮಾರ್ಗಸೂಚಿ ಪರಿಷ್ಕೃತಗೊಳಿಸಿ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ. ಇದರನ್ವಯ ರಾಜ್ಯಾದ್ಯಂತ ಪ್ರತಿ ದಿನ ನಡೆಸುತ್ತಿರುವ ಆರ್‌ಟಿಪಿಸಿಆರ್ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗಿದೆ.

ಬೆಂಗಳೂರು ನಗರ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿನಿದ್ಯ 40 ಸಾವಿರ, ಮೈಸೂರಿನಲ್ಲಿ 5 ಸಾವಿರ, ತುಮಕೂರು 3,500, ಬೆಳಗಾವಿ ಮತ್ತು ದಕ್ಷಿಣ ಕನ್ನಡ ತಲಾ 3 ಸಾವಿರ, ಉಡುಪಿ ಮತ್ತು ವಿಜಯಪುರ ತಲಾ 2 ಸಾವಿರ, ಕೊಡಗು ಜಿಲ್ಲೆಯಲ್ಲಿ ಒಂದು ಸಾವಿರ ಕೋವಿಡ್ ಪರೀಕ್ಷೆ ನಡೆಸಲು ಗುರಿ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲೂ ರ‌್ಯಾಪಿಡ್ ಆಂಟಿಜೆನ ಪರೀಕ್ಷೆ ಕಡಿಮೆಗೊಳಿಸಿ, ಈಗಾಗಲೇ ನೀಡಿರುವ ಗುರಿಯಂತೆ ಪೂರ್ಣ ಪ್ರಮಾಣದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಪಾಲನೆ ಕಡ್ಡಾಯಗೊಳಿಸಲಾಗಿದ್ದು, ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಹಾಗೂ ಸೋಂಕು ಲಕ್ಷಣಗಳಲ್ಲಿದ್ದವರು ಪರೀಕ್ಷೆಗೆ ಒಳಪಡುವುದರ ಕುರಿತು ಮಾಧ್ಯಮ (ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಮಾಧ್ಯಮ ಇತ್ಯಾದಿ)ಗಳ ಮೂಲಕ ಆರೋಗ್ಯ ಶಿಕ್ಷಣ ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದೆ.

ಇದನ್ನೂ ಓದಿ : ಉಡುಪಿ : ಪರಂಪರಾಗತ ಪೌಷ್ಟಿಕ ಆಹಾರಗಳಿಗೆ ಒತ್ತು ನೀಡಿ : ಲಾಲಾಜಿ ಆರ್ ಮೆಂಡನ್ -Vishwanews24