ಗಜರಾಜನಿಗೆ ಡಿಕ್ಕಿಯಾದ ಖಾಸಗಿ ಬಸ್ ; ದಸರಾ ಆನೆ ರಂಗ ದುರ್ಮರಣ..
ಮಡಿಕೇರಿ: ದಸರಾಗೆ ತೆರಳಬೇಕಿದ್ದ ಸಾಕಾನೆಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸೊಂಟ ಮುರಿದು ಗಾಯಗೊಂಡಿದ್ದ ದಸರಾ ಆನೆ ಮೃತಪಟ್ಟಿದೆ.
ಕೊಡಗು ಜಿಲ್ಲೆ ವಿರಾಜಪೇಟೆ ವಿರಾಜಪೇಟೆ ತಾಲೂಕಿನ ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ ಶಿಬಿರದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮತ್ತಿಗೋಡು ಆನೆ ಶಿಬಿರದ 45 ವರ್ಷ ವಯಸ್ಸಿನ ರಂಗ ಎನ್ನುವ ಸಾಕಾನೆಯ ಸೊಂಟ ಮುರಿದಿದೆ. ಮಾವುತರು ಎಂದಿನಂತೆ ಭಾನುವಾರ ರಾತ್ರಿ ರಂಗನನ್ನು ತಿರುಗಾಡಲು ಬಿಟ್ಟಿದ್ದರು. ಈ ವೇಳೆ ಕಣ್ಣೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಆನೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆನೆ ಸ್ಥಳದಲ್ಲೇ ಕುಸಿದು ಬಿದ್ದು, ಸೊಂಟ ಮುರಿದಿತ್ತು
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮಾವುತರು ಹಾಗೂ ಪುಶುವೈದ್ಯ ಡಾ.ಮುಜೀಬ್ ಸಹಾಯದಿಂದ ಆನೆಗೆ ಚಿಕಿತ್ಸೆ ನೀಡಿ, ಶಿಬಿರಕ್ಕೆ ಕರೆತರಲಾಗಿತ್ತು. ಆದ್ರೆ ತೀವ್ರ ಗಾಯಗೊಂಡಿದ್ದ ಆನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಮೂರು ವರ್ಷಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ಪುಂಡಾಟ ನಡೆಸುತ್ತಿದ್ದ ಆನೆಯನ್ನು ಸೆರೆ ಹಿಡಿದು, ಮತ್ತಿಗೋಡು ಆನೆ ಶಿಬಿರದಲ್ಲಿ ಪಳಗಿಸಲಾಗಿತ್ತು. ರೌಡಿ ರಂಗ ಎಂದೇ ಹೆಸರು ಪಡೆದಿತ್ತು.
ಇನ್ನೆರಡು ದಿನ ಕಳೆದಿದ್ದರೆ ರಂಗ ದಸರಾದಲ್ಲಿ ಪಾಲ್ಗೊಳ್ಳಲು ತೆರಳಬೇಕಿತ್ತು. ಇನ್ನು ಘಟನೆ ಸಂಬಂಧ ಖಾಸಗಿ ಬಸ್ ಚಾಲಕನ ವಿರುದ್ಧ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

