ಗೋ ಸಂರಕ್ಷಣೆಗಾಗಿ ಮುಜರಾಯಿ ದೇಗುಲಗಳಲ್ಲಿ ಗೋ ಸಂರಕ್ಷಣೆ ಕೇಂದ್ರ ಸ್ಥಾಪನೆ : ಕೋಟ ಶ್ರೀನಿವಾಸ ಪೂಜಾರಿ -Vishwanews24
ಉಡುಪಿ : ರಾಜ್ಯದ “ಎ’ ದರ್ಜೆಯ 25 ಶ್ರೀಮಂತ ದೇಗುಲಗಳಲ್ಲಿ ಮುಜರಾಯಿ ಇಲಾಖೆ ವತಿಯಿಂದ ಗೋ ಸಂರಕ್ಷಣೆ ಕೇಂದ್ರ ತೆರೆಯಲು ಇಲಾಖೆ ನಿಶ್ಚಯಿಸಿದ್ದು, ಪ್ರಸ್ತಾವನೆ ಸಲ್ಲಿಕೆಯಾಗಿದೆ. ದೇಶೀ ಗೋ ಸಂರಕ್ಷಣೆ ಇದರ ಪ್ರಮುಖ ಉದ್ದೇಶ. ಜತೆಗೆ ಅಕ್ರಮ ಸಾಗಾಟ ಸಂದರ್ಭ ವಶಪಡಿಸಿಕೊಂಡ ಜಾನುವಾರುಗಳು, ಅತಿವೃಷ್ಟಿ, ಅನಾವಷ್ಟಿಯಿಂದ ಮೇವಿನ ಕೊರತೆಯಾಗಿ ಸಾವನ್ನಪ್ಪುವ ಸ್ಥಿತಿಯಲ್ಲಿರುವವು, ವಯಸ್ಕ, ಕಾಯಿಲೆಪೀಡಿತ ಗೋವುಗಳ ರಕ್ಷಣೆಯೂ ಸೇರಿದೆ.
ಹೊಸನಗರ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಗೋಸ್ವರ್ಗದ ಪರಿಕಲ್ಪನೆ ಮತ್ತು ಗೋಸೇವೆಯಲ್ಲಿ ತೊಡಗಿಸಿಕೊಂಡ ನಾಡಿನ ಇತರ ಸಾಧು-
ಸಂತರು, ಧಾರ್ಮಿಕಮುಖಂಡರ ಮಾರ್ಗದರ್ಶನದಲ್ಲಿ ಯೋಜನೆಗೆ ಅಂತಿಮರೂಪ ನೀಡಲಾಗುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ರಾಜ್ಯದ ಕೆಲವು ಗೋಸರಂಕ್ಷಣ ಕೇಂದ್ರಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ, ಜಾನುವಾರುಗಳು ಸಂಕಷ್ಟದಲ್ಲಿವೆ ಎನ್ನುವ ದೂರು ಆಗಾಗ ಕೇಳಿಬರುತ್ತಿದೆ. ಮುಜರಾಯಿ ಇಲಾಖೆಯಿಂದಲೇ ಸ್ಥಾಪನೆಯಾಗುವ ಕೇಂದ್ರಗಳಲ್ಲಿ ಅಂತಹ ಅವ್ಯವಸ್ಥೆ ಆಗಬಾರದು ಎಂಬುದಕ್ಕಾಗಿ ಆಹಾರ, ನೆಲೆ ಮತ್ತು ಆರೈಕೆಯಲ್ಲಿ ಯಾವುದೇ ಕೊರತೆ ಎದುರಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ತಜ್ಞರ ಸಲಹೆ ಪಡೆದು ಸೌಲಭ್ಯಗಳ ಕುರಿತು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.
ಗೋಸಂರಕ್ಷಣೆಗಾಗಿ ಮುಜರಾಯಿ ಇಲಾಖೆಯ ಎ ದರ್ಜೆಯ 25 ದೇಗುಲಗಳಲ್ಲಿ ಪ್ರಾಯೋಗಿಕವಾಗಿ ಗೋಶಾಲೆಗಳನ್ನು ತೆರೆದು ಬಳಿಕ ಹಂತಹಂತವಾಗಿ ವಿಸ್ತರಿಸಲಾಗುವುದು. ಇದಕ್ಕೆ ಹಣಕಾಸಿನ ಸಮಸ್ಯೆ ಎದುರಾಗದು. ಶೀಘ್ರವಾಗಿ ಯೋಜನೆ ಕಾರ್ಯಗತಗೊಳ್ಳಲಿದೆ.
– ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಮುಜರಾಯಿ ಸಚಿವರು
