ಚಿತ್ರದುರ್ಗ ಭೀಕರ ರಸ್ತೆ ಅಫಘಾತ : ‘ಮಗಳು ಜಾನಕಿ’ ಖ್ಯಾತಿಯ ನಟಿ ಶೋಭಾ ಸಾವು -Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್

ಚಿತ್ರದುರ್ಗ: ಖ್ಯಾತ ಕಿರುತೆರೆ ನಟಿ ಶೋಭಾ ಎಮ್.ವಿ ನಿನ್ನೆ ಸಂಭವಿಸಿದ್ದ ಭೀಕರ ರಸ್ತೆ ಅಫಘಾತದಲ್ಲಿ ಸಾವನಪ್ಪಿದ್ದಾರೆ. ಚಿತ್ರದುರ್ಗದ ಹೊರವಲಯ ರಾಷ್ಟ್ರೀಯ ಹೆದ್ದಾರಿ-4ರ ಕುಂಚಿಗನಾಳು ಗ್ರಾಮದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಶೋಭಾ ಸೇರಿದಂತೆ ಐವರು ಮೃತಪಟ್ಟಿದ್ದು, ಇನ್ನೂ ಮೂವರು ಗಂಭೀರ ಗಾಯಗೊಂಡಿದ್ದಾರೆ.

ಕಾರಿನಲ್ಲಿ ಒಟ್ಟು ಎಂಟು ಜನ ಪ್ರಯಾಣಿಸುತ್ತಿದ್ದು ಇವರೆಲ್ಲಾ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಬಾಗಲಕೋಟೆ ಜಿಲ್ಲೆಯ ಬದಾಮಿ ಬನಶಂಕರಿ ದೇವಾಲಯಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗುತ್ತಿದೆ.

ಸಹಜ ಮತ್ತು ನೈಜ ಅಭಿನಯದ ಮೂಲಕವೆ ವೀಕ್ಷಕರ ಮನಗೆದ್ದಿದ್ದ ಶೋಭಾ ಧಾರಾವಾಹಿಯ ಪಾತ್ರಧಾರಿಯಂತೆ, ನಿಜ ಜೀವನದಲ್ಲೂ ಅತ್ಯಂತ ಸಜ್ಜನ ಮತ್ತು ಸೌಮ್ಯ ಸ್ವಭಾವದವರಾಗಿದ್ದರು. ಮಗಳು ಜಾನಕಿ ಧಾರಾವಾಹಿ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡಿದ್ದಾರೆ ಶೋಭಾ.

ಶೋಭಾ ಅವರ ನಿಧನಕ್ಕೆ ಮಗಳು ಜಾನಕಿ ಧಾರಾವಾಹಿ ತಂಡ ಮತ್ತು ಅಭಿಮಾನಿ ಬಳಗ ಸಂತಾಪ ಸೂಚಿಸಿದೆ. ಶೋಭಾ ಅವರ ಅಗಲಿಗೆ ತಂಡಕ್ಕೆ ದೊಡ್ಡ ನಷ್ಟ ಎಂದು ಧಾರಾವಾಹಿ ತಂಡ ಹೇಳಿಕೊಂಡಿದೆ. ಅಲ್ಲದೆ ಈ ಧಾರಾವಾಹಿಯ ಅತೀ ದೊಡ್ಡ ಫೇಸ್ ಬುಕ್ ಗ್ರೂಪ್ ನವರು ಕೂಡ ಶುಭಾ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ಮಂಗಳಕ್ಕ ಆಗಿ ಧಾರಾವಾಹಿಯಲ್ಲಿ ಎಲ್ಲರ ಅಚ್ಚುಮೆಚ್ಚಾಗಿದ್ದರು ಶೋಭಾ. ಮಗಳು ಜಾನಕಿ ಧಾರಾವಾಹಿ ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿದೆ.

ಗಾಯಾಳುಗಳಲ್ಲಿ ಇಬ್ಬರು ಮಕ್ಕಳೂ ಸೇರಿದ್ದು ಎಲ್ಲಾ ಗಾಯಾಳುಗಳನ್ನು ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಕಾರು ಸಂಪೂರ್ಣ ಜಖಂ ಆಗಿದ್ದು, ಸ್ಥಳಕ್ಕೆ ಚಿತ್ರದುರ್ಗ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.