ಜನ ಬದಲಾವಣೆಯನ್ನು ಬಯಸುತ್ತಿದ್ದಾರೆ ; ನನ್ನನ್ನು ಆಯ್ಕೆ ಮಾಡಿ ಅವರ ಕಷ್ಟಕ್ಕೆ ಸ್ಪಂದಿಸುವ ನಾಯಕನನ್ನಾಗಿ ಮಾಡುತ್ತಾರೆ : ಮಿಥುನ್ ರೈ – Vishwanews24

Featured, ದಕ್ಷಿಣ ಕನ್ನಡ

ವಿಟ್ಲ,: ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಮಿಥುನ್ ರೈ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕರೊಂದಿಗೆ ಮತಯಾಚಿಸಿದರು.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ಹೊರಬಂದ ಮಿಥುನ್ ರೈಯವರು ಪತ್ರಕರ್ತರೊಂದಿಗೆ ಮಾತನಾಡಿ ಜನ ಬದಲಾವಣೆಯನ್ನು ಬಯಸುತ್ತಿದ್ದಾರೆ.ಬದಲಾವಣೆಯ ವಾತಾವರಣ ಸೃಷ್ಟಿಯಾಗುತ್ತಿದೆ. ಜಿಲ್ಲೆಯ ಪ್ರಜ್ಞಾವಂತ ನಾಗರೀಕರಿಗೆ ಶೂನ್ಯ ಪ್ರಗತಿಯ ಜಿಲ್ಲೆಯಿಂದ ಪೂರ್ಣ ಪ್ರಗತಿಯ ಜಿಲ್ಲೆಯಾಗಬೇಕೆನ್ನುವ ನಿರೀಕ್ಷೆ ಇದೆ. ಯುವಕರ ಕಷ್ಟಕ್ಕೆ ಸಹಕಾರ ನೀಡುವ ಓರ್ವ ನಾಯಕ ಬೇಕೆನ್ನುವ ನಿರೀಕ್ಷೆ ಇದೆ. ಯುವಕರ ಧ್ವನಿಯಾಗಿ ಲೋಕಸಭೆಯಲ್ಲಿ ಸ್ಪಂದಿಸುವ ನಾಯಕರ ಕೊರತೆ ಇದೆ. ದ.ಕ ಜಿಲ್ಲೆಯ ಎಲ್ಲಾ ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿ ನನ್ನನ್ನು ಆಯ್ಕೆ ಮಾಡಿ ಅವರ ಕಷ್ಟಕ್ಕೆ ಸ್ಪಂದಿಸುವ ನಾಯಕನನ್ನಾಗಿ ಮಾಡುತ್ತಾರೆ ಎನ್ನುವ ಭರವಸೆ ಇದೆ ಎಂದರು.

ಮೇಗಿನ ಪೇಟೆಯಿಂದ ಆರಂಭಗೊಂಡ ಮೆರವಣಿಗೆಯೂ ಖಾಸಗಿ ಬಸ್ಸುನಿಲ್ದಾಣ, ಸಂತೆ ರಸ್ತೆ ಆಗಿ ಸರಕಾರಿ ಬಸ್ಸು ನಿಲ್ದಾಣದ ವರೆಗೆ ಸಾಗಿ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ಸಮಾಪ್ತಿ ಅಯಿತು. ಬಳಿಕ ಮಿಥುನ್ ರೈಯವರು ಬಳಿಕ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಶ್ರೀ ದೇವರ ದರ್ಶನ ಪಡೆದರು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಸ್ವಾಗತಿಸಿದರು. ಬಳಿಕ ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಉಮ್ಮರ್ ಸಅದಿ ಅವರ ಹಾಗೂ ವಿಟ್ಲ ಶೋಕ ಮಾತಾ ಇಗರ್ಜಿಯಲ್ಲಿ ಧರ್ಮಗುರು ಎರಿಕ್ ಕ್ರಾಸ್ತಾ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.