ಜಮೀರ್ ಅಹ್ಮದ್ ಕರ್ನಾಟಕದ ಓವೈಸಿ ಆಗಲು ಹೊರಟಿದ್ದಾರೆ : ಪ್ರತಾಪ್ ಸಿಂಹ -Vishwanews24

Featured, ರಾಜ್ಯ ನ್ಯೂಸ್

ಮೈಸೂರು: ಶಾಸಕ ಜಮೀರ್ ಅಹ್ಮದ್ ಕರ್ನಾಟಕದ ಓವೈಸಿ ಆಗಲು ಹೊರಟಿದ್ದಾರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಗಲಭೆ ನಡೆದ ಎಲ್ಲಾ ಕಡೆ ಜಮೀರ್ ಅಹ್ಮದ್ ಏಕೆ ಹೋಗುತ್ತಾರೆ? ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಪುಂಡ ಮುಸಲ್ಮಾನರ ಹೆಸರು ಹೇಳದಂತೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಸ್ಲೀಪರ್ ಸೆಲ್ಗಳು ಆಯಕ್ಟೀವ್ ಆಗಿವೆ. ಕೇರಳ ಮಾದರಿಯಲ್ಲಿ ರಾಜಕೀಯ ಹತ್ಯೆಗೆ ಸಂಚು ನಡೆಯುತ್ತಿದೆ. ಇದು ಎಸ್ ಡಿಪಿಐ, ಕೆಎಫ್ ಡಿ ಮೂಲಕ ರಾಜ್ಯಕ್ಕೆ ಕೇರಳ ಮಾದರಿ ಕಾಲಿಟ್ಟಿದೆ. ಕಾಂಗ್ರೆಸ್ ಪಕ್ಷದವರು ಇದನ್ನು ಮಟ್ಟ ಹಾಕುವ ಪ್ರಯತ್ನದ ಬದಲು ಪೋಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ.

ಎಸ್ ಡಿಪಿಐ ನಿಷೇಧ ವಿಚಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವೇದನೆಯಾಗುತ್ತಿದೆ. ಎಸ್ ಡಿಪಿಐ ವಿರುದ್ಧದ 175 ಪ್ರಕರಣಗಳನ್ನು 2015ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ವಾಪಾಸ್ ಪಡೆದಿದ್ದು ಯಾಕೆ? ಹಾಲಿ ನ್ಯಾಯಧೀಶರಿಂದ ತನಿಖೆಗೆ ಒತ್ತಾಯ ಮಾಡುವುದು ತನಿಖೆ ವಿಳಂಬವಾಗುವಂತೆ ನೋಡಿಕೊಂಡು ವ್ಯವಸ್ಥಿತವಾಗಿ ಎಸ್ ಡಿಪಿಐ ರಕ್ಷಣೆ ಮಾಡುವುದು ಸಿದ್ದರಾಮಯ್ಯ ಅವರ ಪ್ಲ್ಯಾನ್. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿಯವರನ್ನು ಮಟ್ಟ ಹಾಕುವ ಕೆಲಸ ಮಾಡಿದ್ದಾರೆ. ಅವರಿಗೆ ನಿರಂತರವಾಗಿ ಒಳ ಏಟು ಕೊಟ್ಟಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ.