ಜೆಡಿಎಸ್ ಮೈತ್ರಿ ಸರಕಾರವನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ; ಬಿಜೆಪಿ ಗದ್ದುಗೆ ಏರುವವರೆಗೆ ನಮ್ಮ ಹೋರಾಟ ನಿಲ್ಲದು : ಲಾಲಾಜಿ ಆರ್. ಮೆಂಡನ್

Featured, ಉಡುಪಿ

ಕಾಪು,  : ಕಾಂಗ್ರೆಸ್ ಮತ್ತು ಜೆಡಿಎಸ್ ಅಕಾರದ ಲಾಲಸೆ ನಡೆಸಿ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದು, ಇದರಿಂದಾಗಿ ರಾಜ್ಯದಲ್ಲಿ ಅಕ್ರಮ ಸರಕಾರ ಆಡಳಿತಕ್ಕೆ ಬರುವಂತಾಗಿದೆ. ಈ ಅಪವಿತ್ರ ಮೈತ್ರಿ ತೀವ್ರ ಖಂಡನೀಯವಾಗಿದೆ. ರಾಜ್ಯದಲ್ಲಿ ಅಪವಿತ್ರ ಮೈತ್ರಿ ಸರಕಾರ ಬಿದ್ದು, ಬಿಜೆಪಿ ಆಡಳಿತಕ್ಕೆ ಬರುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸರಕಾರ ಮತ್ತು ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪದಗ್ರಹಣ ಸ್ವೀಕರಿಸುತ್ತಿರುವುದನ್ನು ಖಂಡಿಸಿ ಕಾಪು ಕ್ಷೇತ್ರ ಬಿಜೆಪಿ ವತಿಯಿಂದ ಕಾಪು ಪೇಟೆಯಲ್ಲಿ ಬುಧವಾರ ನಡೆದ ಕರಾಳ ದಿನಾಚರಣೆ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾಪು ಕ್ಷೇತ್ರದಲ್ಲಿ ಬಿಜೆಪಿಗೆ 76 ಸಾವಿರ ಮಂದಿ ಮತದಾರರು ಮತ ನೀಡಿದ್ದಾರೆ. ಕಾಪು ಕ್ಷೇತ್ರವೂ ಸೇರಿದಂತೆ ಕರಾವಳಿ ಜಿಲ್ಲೆ ಮತ್ತು ರಾಜ್ಯದಲ್ಲೂ ಬಿಜೆಪಿಗೆ ಜನಾದೇಶ ನೀಡಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಜನಾದೇಶಕ್ಕೆ ವಿರುದ್ಧವಾಗಿ ಸರಕಾರ ನಡೆಸಲು ಮುಂದಾಗಿದೆ. ಈ ದುರಾಡಳಿತಕ್ಕೆ ಜನರೇ ಉತ್ತರ ನೀಡಲಿದ್ದು, ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಪ್ರತ್ಯುತ್ತರ ನೀಡಲಿದ್ದೇವೆ ಎಂದರು.

ಕಾಂಗ್ರೆಸ್‍ನ ಇತಿಹಾಸಕ್ಕೆ ಮೊಳೆ : ಗುರ್ಮೆ ಸುರೇಶ್ ಶೆಟ್ಟಿ

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ನಡುವಿನ ಮೈತ್ರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅಪಮಾನವಾಗಿದೆ. ಕೇವಲ ಬಿಜೆಪಿಯನ್ನು ಅಕಾರದಿಂದ ದೂರವಿರಿಸಬೇಕೆಂಬ ಏಕೈಕ ಉದ್ದೇಶವನ್ನು ಇಟ್ಟುಕೊಂಡು ರಾಜ್ಯದ 125ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಠೇವಣಿಯನ್ನೇ ಕಳೆದುಕೊಂಡಿರುವ ಜೆಡಿಎಸ್‍ಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡುವ ಮೂಲಕ ಕಾಂಗ್ರೆಸ್ ತಾನಾಗಿಯೇ ತನ್ನ ಇತಿಹಾಸಕ್ಕೆ ಮೊಳೆ ಹೊಡೆದುಕೊಳ್ಳುತ್ತಿದೆ ಎಂದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ತಾ.ಪಂ. ಸದಸ್ಯೆ ರಜನಿ, ಪುರಸಭೆ ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು, ಜಿಲ್ಲಾ ಕಾರ್ಯದರ್ಶಿ ರಮಾಕಾಂತ ದೇವಾಡಿಗ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್, ಕ್ಷೇತ್ರ ಕಾರ್ಯದರ್ಶಿ ಜಿತೇಂದ್ರ ಶೆಟ್ಟಿ ಉದ್ಯಾವರ, ಯುವಮೋರ್ಚಾ ಕ್ಷೇತ್ರಾಧ್ಯಕ್ಷ ಪ್ರವೀಣ್ ಕುಮಾರ್, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಶೇಖ್ ನಝೀರ್, ಎಸ್ಸಿ/ಎಸ್ಟಿ ಮೋರ್ಚಾದ ಅಧ್ಯಕ್ಷ ಚಂದ್ರ ಮಲ್ಲಾರು, ಮಹಿಳಾ ಮೋರ್ಚಾ ಅಧ್ಯಕ್ಷ ಕೇಸರಿ ಯುವರಾಜ್, ಮುಖಂಡರಾದ ವೀಣಾ ಶೆಟ್ಟಿ, ಪವಿತ್ರಾ ಶೆಟ್ಟಿ, ಸಂತೋಷ್ ಸುವರ್ಣ, ಸಂದೀಪ್ ಶೆಟ್ಟಿ, ಕಿರಣ್ ಆಳ್ವ, ಅನಿಲ್ ಕುಮಾರ್, ಸರೋಜಿನಿ ಶೆಟ್ಟಿ, ಸತೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.