ದೇಶದಲ್ಲಿ ಮೋದಿ ಸುನಾಮಿ, 2019ರ ಬಳಿಕ ಚುನಾವಣೆಯೇ ಅಗತ್ಯವಿಲ್ಲ: ಸಾಕ್ಷಿ ಮಹಾರಾಜ್ – Vishwanews24

Featured, ರಾಷ್ಟ್ರ ನ್ಯೂಸ್

ಉನ್ನಾವೋ: ಮೋದಿ ಸುನಾಮಿ ಎಷ್ಟು ತೀವ್ರವಾಗಿದೆ ಎಂದರೆ, 2019ರ ಬಳಿಕ ಚುನಾವಣೆಯ ಅಗತ್ಯವೇ ಇರುವುದಿಲ್ಲ ಎಂದು ಉನ್ನಾವೋದಲ್ಲಿ ನಡೆಸಿದ ಸಾರ್ವಜನಿಕ ಸಮಾವೇಶದಲ್ಲಿ ಸಾಕ್ಷಿ ಮಹಾರಾಜ್‌ ಭವಿಷ್ಯ ನುಡಿದರು.

ಮೋದಿ ನಾಮ್‌ ಕಿ ಸುನಾಮಿ ಹೈ. ದೇಶ್‌ ಮೇ ಜಾಗೃತಿ ಆಯಿ ಹೈ. ಮುಝೆ ಲಗ್ತಾ ಹೈ ಕಿ ಇಸ್‌ ಚುನಾವ್‌ ಹೈ ಇಸ್‌ ದೇಶ ಕೇ ಲಿಯೆ ಪ್ರತ್ಯಾಶಿ ಜಿತ್ವಾನೆ ಕಾ ಕಮ್‌ ಕರೇಂಗೆʼ (ದೇಶದಲ್ಲಿ ಮೋದಿ ಸುನಾಮಿಯೇ ಎದ್ದಿದೆ. ದೇಶಾದ್ಯಂತ ಹೊಸ ಜಾಗೃತಿ ಮೂಡಿದೆ. 2019ರ ಚುನಾವಣೆ ಬಳಿಕ 2024ರಲ್ಲಿ ಮತ್ತೆ ಚುನಾವಣೆಯ ಅಗತ್ಯವೇ ಬಾರದು ಎಂದು ನನ್ನ ಅನಿಸಿಕೆ. ಇದೊಂದೇ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನಾವು ಶ್ರಮಿಸಿದರೆ ಸಾಕುʼ ಎಂದು ಸಾಕ್ಷಿ ಮಹಾರಾಜ್‌ ಹೇಳಿದ್ದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

17ನೇ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಎರಡನೇ ಅವಧಿಗೆ ಆಯ್ಕೆ ಬಯಸಿದ್ದು, ಏಪ್ರಿಲ್‌ 11ರಿಂದ ಏಳು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಕೇಂದ್ರ ಚುನಾವಣಾ ಆಯೋಗ ಮಾರ್ಚ್‌ 10ರಂದು ಚುನಾವಣೆಗಳ ದಿನಾಂಕಗಳನ್ನು ಪ್ರಕಟಿಸಿತ್ತು. ಲೋಕಸಭೆ ಚುನಾವಣೆಗಳ ಜತೆಗೆ ಅರುಣಾಚಲಪ್ರದೇಶ, ಆಂದ್ರಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ವಿಧಾನಸಭೆಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಯಲಿದೆ.

ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ತಮಗೆ ಟಿಕೆಟ್‌ ನಿರಾಕರಿಸಿದರೂ ಸ್ವತಂತ್ರವಾಗಿ ಸ್ಪರ್ಧಿಸುವುದು ಖಚಿತ ಎಂದು ಈ ಮೊದಲು ಸಾಕ್ಷಿ ಮಹಾರಾಜ್‌ ಹೇಳಿದ್ದರು. ತಮಗೆ ಪಕ್ಷ ಟಿಕೆಟ್‌ ನಿರಾಕರಿಸುವುದು ಉತ್ತಮ ಆಯ್ಕೆಯಾಗದು ಎಂದು ಸಾಕ್ಷಿ ಮಹಾರಾಜ್‌ ಎಚ್ಚರಿಸಿದ್ದರು.