ದೇಶದ್ರೋಹ ಪ್ರಕರಣ :ಜೆಎನ್‌ಯು ವಿದ್ಯಾರ್ಥಿ ಶರ್ಜೀಲ್‌ ಇಮಾಮ್‌ ಬಂಧನ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ : ದೇಶದ್ರೋಹದ ಆರೋಪ ಎದುರಿಸುತ್ತಿರುವ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಶರ್ಜೀಲ್ ಇಮಾಮ್ ರನ್ನು ಅವರ ಹುಟ್ಟೂರಾದ ಬಿಹಾರದ ಜೆಹೆನಾಬಾದ್ ಎಂಬಲ್ಲಿ ಬಂಧಿಸಲಾಗಿದೆ.

ದೇಶವಿರೋಧಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಶರ್ಜೀಲ್ ಮೇಲೆ ಇದ್ದು ವಿಡಿಯೋವನ್ನು ಆಧರಿಸಿ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು..

ಇಡೀ ಈಶಾನ್ಯ ಪ್ರದೇಶವನ್ನು ಭಾರತ ದೇಶದಿಂದ ಪ್ರತ್ಯೇಕ ಮಾಡಬೇಕು ಎಂದು ಅವರು ಹೇಳಿದ್ದಾರೆ ಎಂದು ಆರೋಪಿಸಿ ಆವರ ಮೇಲೆ ದೇಶದ್ರೋಹ ಪ್ರಕರಣ ದಾಖಲು ಮಾಡಲಾಗಿತ್ತು.

ಅವರ ವಿರುದ್ಧವಾಗಿ ಅರುಣಾಚಲ ಪ್ರದೇಶ, ಅಸ್ಸಾಂ, ಉತ್ತರ ಪ್ರದೇಶ, ಮಣಿಪುರದಲ್ಲೂ ಪ್ರಕರಣಗಳು ದಾಖಲಾಗಿವೆ. ಐದು ಪೊಲೀಸ್‌ ತಂಡಗಳು ಅವರ ಶೋಧಕ್ಕಾಗಿ ಮುಂಬೈ, ಪಾಟ್ನಾ ಹಾಗೂ ದೆಹಲಿಗೆ ತೆರಳಿದ್ದರು.

ಶರ್ಜೀಲ್‌ ಎರಡು ಸಂದರ್ಭಗಳಲ್ಲಿ ವಿಭಜನಾತ್ಮಕ ಭಾಷಣ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಜಾಂಇಯಾ ಮಿಲ್ಲಿಯಾ ವಿವಿಯಲ್ಲಿ ಒಂದು ಭಾಷಣ ಹಾಗೂ ಇನ್ನೊಂದು ಭಾಷಣವನ್ನು ಆಲಿಘರ್‌ ಮುಸ್ಲಿಂ ವಿವಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್​ಸಿ ವಿರೋಧಿರುವ ಭರದಲ್ಲಿ ಇಮಾಮ್ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಡಿ.13 ರಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಇದೇ ರೀತಿ ಉದ್ರಿಕ್ತ ಭಾಷಣ ಮಾಡಿದ್ದರು ಎಂದು ಹೇಳಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ಇಮಾಮ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಿದ್ದಾರೆ. ಇದಷ್ಟೇ ಅಲ್ಲದೆ, ಉತ್ತರಪ್ರದೇಶ ಹಾಗೂ ಅಸ್ಸಾಂನಲ್ಲಿಯೂ ಇಮಾಮ್ ವಿರುದ್ಧ ಪ್ರಕರಣ ದಾಖಲಾಗಿದೆ.