ದೇಹದಾನ ಮಾಡಿ ಎಲ್ಲರಿಗೂ ಮಾದರಿಯಾದ ಬಾಲಕಿ ; ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಗಳೂರಿನ ಪ್ರತೀಕ್ಷಾ

Featured, ದಕ್ಷಿಣ ಕನ್ನಡ

ಮಂಗಳೂರು: ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ದೇಹದಾನ, ಅಂಗಾಂಗ ದಾನಗಳ ಕುರಿತು ಜನರಲ್ಲಿ ಸಾಕಷ್ಟು ಅರಿವು ಮೂಡುತ್ತಿರುವ ದಿನಗಳಲ್ಲಿ ಈಕೆಯೂ ಅಂಥದ್ದೇ ಒಂದು ಉದಾಹರಣೆಯನ್ನು ಉಳಿಸಿಹೋಗಿದ್ದಾಳೆ. ಅಶೋಕ ನಗರದ ಪ್ರತೀಕ್ಷಾ (16) ಪ್ರತಿಭಾವಂತ ವಿದ್ಯಾರ್ಥಿನಿ. ಕಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಆಕೆಗೆ ಸಾವೇ ಖಚಿತ ಎನಿಸತೊಡಗಿದ್ದಾಗ ತನ್ನ ಪೋಷಕರಲ್ಲಿ, “ನಾನು ಒಂದುವೇಳೆ ಇಲ್ಲವಾದರೆ ದೇಹವನ್ನು ದಾನ ಮಾಡಿ’ ಎಂದಿದ್ದಳಂತೆ. ಅದು ಅವಳ ಕೊನೆ ಇಚ್ಛೆ. ಅದೃಷ್ಟ ಕೈಗೂಡಲಿಲ್ಲ; ಕೊನೆಯುಸಿರೆಳೆದಳು. ಆಕೆಯ ಪೋಷಕರಾದ ಕುಮಾರಸ್ವಾಮಿ ಕೊಕ್ಕಡ ಹಾಗೂ ವಂದನಾ ದಂಪತಿ ತಮ್ಮ ಮಗಳ ಇಚ್ಛೆಯನ್ನು ಗುರುವಾರ ನೆರವೇರಿಸಿದರು.

ಕುಮಾರಸ್ವಾಮಿ – ವಂದನಾ ದಂಪತಿಗೆ ಮೂವರು ಮಕ್ಕಳು. ಹಿರಿಯ ಪುತ್ರ ಪ್ರಜ್ವಲ್‌ ಕೃಷ್ಣ ಸಂತ ಅಲೋಶಿಯಸ್‌ ಕಾಲೇಜಿನ ದ್ವಿತೀಯ ವರ್ಷದ ಪದವಿ ಕಲಿಯುತ್ತಿದ್ದರೆ, ಅನಂತರ ಹುಟ್ಟಿದ ಪ್ರತೀಕ್ಷಾ ಮತ್ತು ಪ್ರೀತಂ ಅವಳಿ ಮಕ್ಕಳು. ಇಬ್ಬರೂ ಈಗ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದರು. ಪ್ರತೀಕ್ಷಾಳಿಗೆ 6ನೇ ತರಗತಿ ಓದುತ್ತಿದ್ದಾಗ ಎಲುಬಿನ ಕ್ಯಾನ್ಸರ್‌ ಕಾಣಿಸಿಕೊಂಡಿತ್ತು. ಎರಡು ವರ್ಷಗಳ ಚಿಕಿತ್ಸೆಯ ಬಳಿಕ ಗುಣಮುಖ ಹೊಂದಿದ್ದಳು. ಆದರೆ ಒಂದೇ ವರ್ಷದಲ್ಲಿ ಕಾಯಿಲೆ ಮರುಕಳಿಸಿತ್ತು. ಆ ಬಳಿಕ ಚಿಕಿತ್ಸೆ ಪಡೆಯುತ್ತಲೇ ವ್ಯಾಸಂಗವನ್ನು ಮುಂದುವರಿಸಿದ್ದಳು. ಒಟ್ಟು ಐದು ವರ್ಷಗಳ ಸುದೀರ್ಘ‌ ಅವಧಿಯ ಚಿಕಿತ್ಸೆಯೂ ಫ‌ಲಕಾರಿಯಾಗದೆ ಬುಧವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಳು.

ಪ್ರತೀಕ್ಷಾ 20 ದಿನಗಳ ಹಿಂದೆ, ತಾನು ಸತ್ತರೆ ದೇಹವನ್ನು ಕೆಎಂಸಿಗೆ ದಾನ ಮಾಡಬೇಕೆಂದು ತಾಯಿಯ ಬಳಿ ಹೇಳಿದ್ದಳು. ಅದರಂತೆ ಗುರುವಾರ ದೇಹವನ್ನು ಹಸ್ತಾಂತರಿಸಲಾಯಿತು.

ಜಾಹೀರಾತುಗಳು