ಧರ್ಮದ ಆಧಾರದಲ್ಲಿ ಭಾರತೀಯರನ್ನು ವಿಭಜಿಸುವ ಷಡ್ಯಂತ್ರವನ್ನು ಕಾಂಗ್ರೆಸ್​​ ಮಾಡುತ್ತಿವೆ : ಪ್ರಹ್ಲಾದ್​​ ಜೋಶಿ -Vishwanews24

Featured, ರಾಜ್ಯ ನ್ಯೂಸ್

ಧಾರವಾಡ: ಧರ್ಮದ ಆಧಾರದಲ್ಲಿ ಭಾರತೀಯರನ್ನು ವಿಭಜಿಸುವ ಷಡ್ಯಂತ್ರವನ್ನು ಕಾಂಗ್ರೆಸ್​​ ನೇತೃತ್ವದ ವಿರೋಧ ಪಕ್ಷಗಳು ಮಾಡುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಕಿಡಿಕಾರಿದ್ದಾರೆ.

ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಅಭಿಯಾನದಲ್ಲಿ ಮಾತಾಡಿದ ಪ್ರಹ್ಲಾದ ಜೋಶಿ‌ ಹೀಗೆ ಕಾಂಗ್ರೆಸ್​​ ಮತ್ತಿತರ ಮಿತ್ರ ಪಕ್ಷಗಳ ವಿರುದ್ಧ ಆರೋಪ ಎಸಗಿದ್ದಾರೆ.

ಇತ್ತೀಚೆಗೆ ದೇಶದ ಪೌರತ್ವ ಕಾನೂನು ತಿದ್ದುಪಡಿ ಮಾಡಿದ್ದೇವೆ. ಈ ಕಾನೂನು ಪೌರತ್ವ ಕಿತ್ತುಕೊಳ್ಳುವುದು ಅಲ್ಲ. ಬದಲಿಗೆ ಪೌರತ್ವ ಕೊಡುವಂತಹ ಕಾನೂನು ಇದಾಗಿದೆ. ಆದರೂ ಕಾಂಗ್ರೆಸ್ ಜನರನ್ನು ಒಡೆಯುವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಮೂರು ಕೋಟಿ ಮನೆಗಳನ್ನು ಭೇಟಿಯಾಗಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಿದ್ದೇವೆ ಎಂದರು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ.

ಕೊಪ್ಪಳದಲ್ಲಿರುವ ಬಾಂಗ್ಲಾ ನಿರಾಶ್ರಿತರಿಗೆ ಪೌರತ್ವ ಕೊಡುವ ಬಗ್ಗೆ ಸಂಗಣ್ಣ ಕರಡಿ ಪತ್ರ ವಿಚಾರಕ್ಕೂ ಪ್ರಹ್ಲಾದ್​​ ಜೋಶಿ ಪ್ರತಿಕ್ರಿಯಿಸಿದರು. ಅವರಿಗೆ ಪೌರತ್ವ ಸಿಕ್ಕೇ ಸಿಗುತ್ತದೆ. ಧಾರ್ಮಿಕ ಅತ್ಯಾಚಾರಕ್ಕೊಳಗಾಗಿ ದೇಶಕ್ಕೆ ಬಂದವರಿಗೆ ಪೌರತ್ವ ಸಿಗುತ್ತದೆ. ಮಹಾತ್ಮ ಗಾಂಧಿಯೇ ಪಾಕಿಸ್ತಾನದಲ್ಲಿರುವ ಜನರಿಗೆ ತೊಂದರೆಯಾದರೆ ಭಾರತವೇ ಅದರ ಜವಾಬ್ದಾರಿ ಹೊರಬೇಕು ಎಂದರು. ಆದರೀಗ, ಗಾಂಧಿ ಮಾತನ್ನು ಲೆಕ್ಕಿಸದೇ ಕಾಂಗ್ರೆಸ್ ಪೌರತ್ವದ ವಿಷಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಕುಟುಕಿದರು.

ಪೌರತ್ವ ತಿದ್ದುಪಡಿ ಮಸೂದೆಯು ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಿಂದ ವಲಸೆ ಬಂದಿರುವ ಮುಸ್ಲಿಮೇತರ ವ್ಯಕ್ತಿಗಳಿಗೆ ಭಾರತೀಯ ಪೌರತ್ವ ನೀಡಲು ಅನುವು ಮಾಡಿಕೊಡುವ ಕಾನೂನಾಗಿದೆ. ಅಂದರೆ, ವಿದೇಶಗಳಿಂದ ವಲಸೆ ಬಂದಿರುವ ಮುಸ್ಲಿಮರನ್ನು ಗುರುತಿಸಿ ಅವರನ್ನು ದೇಶಭ್ರಷ್ಟರನ್ನಾಗಿ ಮಾಡುವುದು ಈ ಕಾನೂನಿನ ಗುರಿಯಾಗಿದೆ. ಕಳೆದ ಅಧಿವೇಶನದಲ್ಲೇ ಈ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿತ್ತು. ಆದರೆ, ಧಾರ್ಮಿಕವಾಗಿ ಇದು ತಾರತಮ್ಯವಾಗಿದೆ. ಮುಸ್ಲಿಮರನ್ನೇ ಗುರಿಯಾಗಿಸಿಕೊಳ್ಳಲಾಗಿದೆ ಎಂದು ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಚರ್ಚೆಯಲ್ಲೇ ಕಾಲವ್ಯಯವಾಗಿ ಮಸೂದೆಗೆ ಅನುಮೋದನೆ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಈ ಪೌರತ್ವ ಮಸೂದೆಗೆ ಅಂಗೀಕಾರ ದೊರಕಿದ್ದು, ಕಾನೂನು ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.