ಧರ್ಮಸ್ಥಳ : ಯಾತ್ರಾರ್ಥಿ ಮಹಿಳೆಯ 12.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಗದು ಎಗರಿಸಿದ ಕಳ್ಳರು – vishwanews24
ಧರ್ಮಸ್ಥಳ : ಯಾತ್ರಾರ್ಥಿ ಮಹಿಳೆಯ 12.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಗದು ಎಗರಿಸಿದ ಕಳ್ಳರು
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದ ಕುಟುಂಬವೊಂದರ ಮಹಿಳೆಯ ಬ್ಯಾಗ್ ನಲ್ಲಿದ್ದ ನಗದು ಸಹಿತ ಸುಮಾರು 12.80 ಲಕ್ಷ ರೂ. ಮೌಲ್ಯದ 40 ಪವನ್ ಚಿನ್ನಾಭರಣಗಳನ್ನು ಕಳ್ಳರು ಎಗರಿಸಿದ ಘಟನೆ ನ.24ರಂದು ನಡೆದಿದ್ದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕಾಪು ಕೋಟೆ ಗ್ರಾಮದ ಜೋಗಿ ಕಂಪೌಂಡ್ ನಿವಾಸಿ ಗಾಯತ್ರಿ ಆರ್. ಜೋಗಿ ಅವರಿಗೆ ಸೇರಿದ ಬ್ಯಾಗ್ ನಲ್ಲಿದ್ದ 10 ಸಾವಿರ ರೂ. ನಗದು ಹಾಗೂ 12.80 ಲಕ್ಷ ರೂ. ಮೌಲ್ಯದ 40 ಪವನ್ ಚಿನ್ನಾಭರಣಗಳನ್ನು ಕಳ್ಳರು ಕಳವು ಮಾಡಿದ್ದಾರೆ.
ಸುರತ್ಕಲ್ : ಕಾಲೇಜಿನಲ್ಲಿ ರ್ಯಾಗಿಂಗ್ ; ವಿದ್ಯಾರ್ಥಿಯ ಮೇಲೆ ಹಲ್ಲೆ: ದೂರು ದಾಖಲು – vishwanews24
ಗಾಯತ್ರಿ ಅವರು ತನ್ನ ಮಗಳು ರಜಿತಾ, ಆಕೆಯ 7 ತಿಂಗಳ ಮಗು ಹಾಗೂ ತಾಯಿ ತಾರಾ ಜೋಗಿ ಜೊತೆ ನ.24ರಂದು ಬೆಳಗ್ಗೆ 10 ಗಂಟೆಗೆ ಮನೆಯಿಂದ ಕಾರಿನಲ್ಲಿ ಧರ್ಮಸ್ಥಳಕ್ಕೆ ಬಂದಿದ್ದರು. ಬರುವಾಗ ತಮ್ಮ ಬ್ಯಾಗ್ ನಲ್ಲಿ ಮಗಳ ಹಾಗೂ ಮಗುವಿನ ಹಾಗೂ ತನಗೆ ಸೇರಿದ 40 ಪವನ್ ಚಿನ್ನಾಭರಣಗಳನ್ನು ಎರಡು ಪರ್ಸ್ ನಲ್ಲಿ ಇಟ್ಟು 10 ಸಾವಿರ ನಗದನ್ನು ಇನ್ನೊಂದು ಬ್ಯಾಗ್ ನಲ್ಲಿಟ್ಟು ಬಂದಿದ್ದರು. ಮಧ್ಯಾಹ್ನ 1.45ರ ಸುಮಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಕಾರನ್ನು ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಬಳಿಕ ದೇವರ ದರ್ಶನಕ್ಕೆ ದೇವಸ್ಥಾನದ ಒಳಗಡೆ ಹೋಗಿ ದೇವರ ದರ್ಶನ ಮುಗಿಸಿ ಮಧ್ಯಾಹ್ನ 2.30 ಗಂಟೆಯ ಸಮಯಕ್ಕೆ ಬ್ಯಾಗನ್ನು ನೋಡಿದಾಗ, ಜಿಪ್ ತೆರೆದುಕೊಂಡಿರುವುದು ಕಂಡುಬಂದಿತ್ತು.
ಬ್ಯಾಗ್ ನಲ್ಲಿಟ್ಟಿದ್ದ ಸುಮಾರು 40 ಪವನ್ ಚಿನ್ನಾಭರಣಗಳನ್ನು ಇರಿಸಿದ್ದ ಎರಡು ಪರ್ಸ್ ಹಾಗೂ ನಗದು ನಾಪತ್ತೆಯಾಗಿತ್ತು. ಕೂಡಲೇ ಪಾರ್ಕ್ ಮಾಡಿದ್ದ ಕಾರಿನತ್ತ ತೆರಳಿ ಹುಡುಕಾಡಿದಾಗ ಅಲ್ಲಿಯೂ ಚಿನ್ನಾಭರಣ ಪತ್ತೆಯಾಗಿರಲಿಲ್ಲ. ದೇವರ ದರ್ಶನ ಸಂದರ್ಭದಲ್ಲಿಯೇ ಬ್ಯಾಗಿನಲ್ಲಿದ್ದ ಚಿನ್ನಾಭರಣವನ್ನು ಯಾರೋ ಕಳವುಗೈದಿರಬೇಕೆಂದು ಗಾಯತ್ರಿ ಜೋಗಿ ಅವರು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದಾರೆ.
