ನಂದಿನಿ ನದಿಯ ಮಧ್ಯ ಭಾಗದಲ್ಲಿ ನೆಲೆಯಾಗಿರುವ ದೇವಿ ದುರ್ಗಾಪರಮೇಶ್ವರಿ ; ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪುಣ್ಯಕ್ಷೇತ್ರದ ಬಗ್ಗೆ ನಿಮಗೆಷ್ಟು ಗೊತ್ತು? – Vishwanews24
ಕಟೀಲು ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ, ಪುಣ್ಯಸ್ಥಳಗಳಲ್ಲಿ ಒಂದು. ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ.
ಸ್ಥಳ ಪುರಾಣ
ದೀರ್ಘವಾದ ಧ್ಯಾನದಲ್ಲಿ ಮುಳುಗಿದ್ದ ಮಹಾಜ್ಞಾನಿಯಾದ ಜಬಲಿ ಮಹರ್ಷಿ ಜನರ ಕಷ್ಟಗಳನ್ನು ತನ್ನ ದಿವ್ಯ ದೃಷ್ಟಿಯಲ್ಲಿ ಕಂಡನು. ಅವರ ಮೇಲಿನ ಕನಿಕರದಿಂದ ಅವರನ್ನು ನೋವುಗಳಿಂದ ಮುಕ್ತಿಗೊಳಿಸುವ ನಿರ್ಧಾರವನ್ನು ಕೈಗೊಂಡನು. ಆತನು ಒಂದು ಯಜ್ಞವನ್ನು ನಡೆಸಲು ನಿರ್ಣಯಿಸಿ ಪುಣ್ಯ ಹಸುವಾಗಿದ್ದ ಕಾಮಧೇನುವನ್ನು ಭೂಮಿಗೆ ಕರೆತರಲು ನಿರ್ಧರಿಸಿದನು.ಕಾಮಧೇನು ತರಲು ದೇವತೆಗಳ ಒಡೆಯನಾದ ಇಂದ್ರನ ಒಪ್ಪಿಗೆ ಕೇಳಿದಾಗ, ಇಂದ್ರನು ಕಾಮಧೇನುವು ವರುಣ ಲೋಕಕ್ಕೆ ಹೋಗಿರುವುದಾಗಿಯೂ ಅದರ ಬದಲು ಆತನ ಪುತ್ರಿಯಾದ ನಂದಿನಿಯನ್ನು ಕರೆದೊಯ್ಯಬಹುದಾಗಿ ತಿಳಿಸಿದನು. ಆದರೆ ನಂದಿನಿಯು ಜಬಲಿ ಮಹರ್ಷಿ ಜತೆಗೆ ಭೂಲೋಕಕ್ಕೆ ಹೋಗಲು ಅತ್ಯಂತ ನಿಷ್ಠುರದಿಂದ ನಿರಾಕರಿಸಿತು. ಭೂಲೋಕವು ಪಾಪಿಗಳ ಲೋಕವಾಗಿದ್ದರಿಂದ ತಾನೆಂದೂ ಅಲ್ಲಿ ಕಾಲಿಡುವುದಿಲ್ಲವೆಂದು ಹೇಳಿತು.
ಆದರೆ ಜಬಲಿ ಮಹರ್ಷಿಯು ಆಕೆಯ ಮನವೊಲಿಸಲು ಸಾಕಷ್ಟು ಪರಿಪರಿಯಾಗಿ ಬೇಡಿಕೊಂಡನು. ಭೂಮಿಯಲ್ಲಿಹ ಜನರು ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳ ಬಗ್ಗೆಯೂ ಆಕೆಯೂ ಬಂದು ಅವರ ನೋವನ್ನು ನೀಗಿಸಲು ಸಹಕರಿಸುವಂತೆಯೂ ಕೇಳಿಕೊಂಡನು. ಆದರೆ ಜಬಲಿ ಮಹರ್ಷಿಯ ಮಾತಿಗೆ ಜಪ್ಪೆನ್ನದೇ ನಂದಿನಿಯು ತನ್ನದೇ ಹಠ ಹಿಡಿಕೊಂಡಿತು. ಇದರಿಂದ ಕೋಪಗೊಂಡ ಜಬಲಿ ಮಹರ್ಷಿಯು ಭೂಲೋಕಕ್ಕೆ ಬರಲೊಪ್ಪದ ನಂದಿನಿಯು ಇನ್ನು ಮುಂದೆ ನದಿಯ ರೂಪದಲ್ಲಿ ಭೂಮಿಗಿಳಿಯುವಂತೆ ಶಾಪವಿತ್ತನು. ಶಾಪಕ್ಕೊಳಗಾದ ನಂದಿನಿಯು ಚಿಂತೆಗೀಡಾಗಿ ಮಹರ್ಷಿ ಜಬಲಿಗೆ ಕರುಣೆ ಮಾಡಿ ಶಾಪ ಹಿಂತೆಗೆದುಕೊಳ್ಳಬೇಕು ಇಲ್ಲವಾದರಲ್ಲಿ ಶಾಪ ವಿಮೋಚನೆಯನ್ನಾದರೂ ತಿಳಿಸಬೇಕೆಂದು ಬೇಡಿಕೊಂಡಿತು. ಆಗ ಜಬಲಿ ಮಹರ್ಷಿಯು ನಿರಂತರವಾಗಿ ದುರ್ಗಾದೇವಿಯನ್ನು ಪ್ರಾರ್ಥಿಸಿದರೆ ಶಾಪ ವಿಮೋಚನೆಯನ್ನು ಆ ತಾಯಿಯೇ ತೋರಿಸುತ್ತಾಳೆ ಎಂದು ಹೇಳಿದನು.
ನಂದಿನಿಯು ಅನಂತರ ದೇವಿಯನ್ನು ಪ್ರಾರ್ಥಿಸಲು, ದುರ್ಗಿಯು ಪ್ರತ್ಯಕ್ಷವಾಗಿ ಜಬಲಿ ಮಹರ್ಷಿಯ ಶಾಪದಂತೆ ನದಿಯಾಗಿ ಹರಿಯುವಂತೆ ಹೇಳಿದಳು. ನಂತರ ತಾನೇ ಆಕೆಯ ಮಗಳಂತೆ ಹುಟ್ಟಿ ಮಹರ್ಷಿ ಜಬಲಿಯ ಶಾಪ ವಿಮೋಚನೆಗೊಳಿಸುವುದಾಗಿ ಆಶೀರ್ವದಿಸಿದಳು.ಅದರಂತೆ ಕಟೀಲಿನ ಕನಕ ಗಿರಿಯಿಂದ ನಂದಿನಿ ನದಿಯ ರೂಪದಲ್ಲಿ ಹರಿದಳು. ಈ ನದಿಯ ದಂಡೆಯ ಮೇಲೆ ಜಬಲಿ ಮಹರ್ಷಿಯು ಯಜ್ಞ ಯಾಗಾದಿಗಳನ್ನು ನಡೆಸಿದ. ನಂತರ ಎಲ್ಲೆಡೆ ಸಮೃದ್ಧ ಮಳೆಯಾಗಿ ಆ ಜನರಲ್ಲಿ ಶಾಂತಿ ನೆಮ್ಮದಿ ನೆಲೆಸಿ ಅಭ್ಯುದಯ ಹೊಂದಿದರು.
ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. ಪುಷ್ಪಾಲಂಕಾರ ಪೂಜೆ ಎಂದರೆ ದೇವರಿಗೆ ಇಷ್ಟ ಎನ್ನುವುದು ಭಕ್ತರ ನಂಬಿಕೆ. ಮಲ್ಲಿಗೆ ಹೂ ದೇವರಿಗೆ ಪ್ರೀಯವಂತೆ. ಆದರೆ ಸಂಪಿಗೆ ಹೂವನ್ನು ಇಲ್ಲಿ ದೇವರಿಗೆ ಅರ್ಪಿಸಲಾಗುವುದಿಲ್ಲ.
ಪೌರಾಣಿಕ ಕಥೆಯನ್ನು ಇನ್ನೂ ಕೆದಕಿದಾಗ:
ಇತ್ತ ನಂದಿನಿಯು ನದಿಯಾಗಿ ಹರಿಯುತ್ತಿದ್ದಂತೆಯೇ, ಅರುಣಾಸುರನೆಂಬ ರಾಕ್ಷಸನ ಮುಂದೆ ದೇವಿಯು ಸುಂದರ ಕನ್ಯೆಯ ರೂಪದಲ್ಲಿ ಪ್ರತ್ಯಕ್ಷವಾದಳು. ಆ ಕನ್ಯೆಯ ಸೌಂದರ್ಯವನ್ನು ಕಂಡು ಮೋಹಿತನಾದ ಅರಣಾಸುರನು ಆಕೆಯನ್ನು ಹಿಂಬಾಲಿಸಿದನು. ಸುಂದರ ಕನ್ಯೆಯ ರೂಪದಲ್ಲಿದ್ದ ದೇವಿಯು ತನ್ನ ನಿಜ ರೂಪವನ್ನು ತೋರಿದಳು. ಆಗ ಅರುಣಾಸುರನು ಅವಳನ್ನು ಕೊಲ್ಲಲು ಪ್ರಯತ್ನಿಸಿದನು ಆದರೆ ಅಷ್ಟರಲ್ಲಿಯೇ ದೇವಿಯು ಕಲ್ಲು ಬಂಡೆಯಾದಳು. ಅದೇ ಕಲ್ಲಿನಿಂದ ದುಂಬಿಗಳ ಗುಂಪೊಂದು ಸೃಷ್ಟಿಯಾಗಿ ಬಂದು ಅರುಣಾಸುರನನ್ನು ಕುಟುಕಿ ಕುಟುಕಿ ಸಾಯಿಸಿದವು. ದುಂಬಿಗಳಿಂದ ಅರುಣಾಸುರ ಸಾಯಲು ಕಾರಣವೆಂದರೆ ಆತನು ಪಡೆದಿದ್ದ ವರ. ಎರಡು ಅಥವಾ ನಾಲ್ಕು ಕಾಲಿನ ಯಾವುದೇ ಪ್ರಾಣಿಯಾಗಲಿ ಹಾಗೂ ಆಯುಧದಿಂದಾಗಲಿ ತನಗ ಸಾವು ಬರಬಾರದೆಂದು ಆತ ವರ ಪಡೆದಿದ್ದ. ನಂತರ ದೇವತೆಗಳಲೆಲ್ಲಾ ಸೇರಿಕೊಂಡು ಭ್ರಮರಾಂಬಿಕೆಗೆ (ದುಂಬಿಗಳ ರಾಣಿ) ಉಗ್ರರೂಪದಿಂದ ತನ್ನ ಚೆಲುವಿನ ಮತ್ತು ಶಾಂತಿ ಸ್ವಭಾವವನ್ನು ಹೊಂದಲು ಪ್ರಾರ್ಥಿಸಿದರು. ಆಗ ದೇವಿಯು ತನ್ನ ಸುಂದರವಾದ ರೂಪದಲ್ಲಿ ನಂದಿನಿ ನದಿಯ ಕೇಂದ್ರ ಭಾಗದಲ್ಲಿ ಬಂದು ಅವತರಿಸಿ, ನಂದಿನಿಗೆ ನೀಡಿದ್ದ ಆಕೆಯ ಮಗಳಾಗಿ ಹುಟ್ಟುವ ವಚನವನ್ನು ಈಡೇರಿಸಿದಳು. ಆಕೆ ನೆಲೆಸಿದ ಸಣ್ಣ ದ್ವೀಪಕ್ಕೆ ಕಟೀಲು ಎಂಬ ಹೆಸರು ಬಂದಿತು.
ಸಂಸ್ಕೃತ ಭಾಷೆಯಲ್ಲಿ ಕಟಿ ಎಂದರೆ ಮಧ್ಯ ಭಾಗ ಮತ್ತು ಇಳ ಎಂದರೆ ಭೂಮಿ ಅದರಿಂದ ಈ ಸ್ಥಳವು ನದಿಯ ಮಧ್ಯ ಭಾಗದಲ್ಲಿದ್ದುದ್ದರಿಂದ ಕಟಿ ಇಳ, ಕಟೀಲ್ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಈ ಸಣ್ಣ ದ್ವೀಪದಲ್ಲಿ ದೇವಾಲಯವನ್ನು ನಿರ್ಮಿಸಿ ಅಲ್ಲಿರುವ ಮೂರ್ತಿಯನ್ನು ದುರ್ಗಾದೇವಿಗೆ ಮುಡಿಪಾಗಿರಿಸಲಾಗಿದೆ.
ಇಲ್ಲಿನ ಆಚರಣೆಗಳು: ಇಲ್ಲಿನ ವಿಶೇಷ ಉತ್ಸವಗಳಲ್ಲಿ ಏಪ್ರಿಲ್ ತಿಂಗಳಿನಲ್ಲಿ ಆಚರಿಸಲ್ಪಡುವ ಮೇಷ ಸಂಕ್ರಮಣ, ನವರಾತ್ರಿ ಆಚರಣೆಗಳು, ನಂದಿನಿ ನದಿಯ ಜನ್ಮ ಪೂರಕವಾಗಿ ಆಚರಿಸುವ ಮಹಾ ಶುದ್ಧ ಪೂರ್ಣಿಮೆ, ಗಣೇಶ ಚತುರ್ಥಿ, ಶ್ರೀಕೃಷ್ಣ ಜನ್ಮಾಷ್ಟಮಿ, ಕದಿರುಹಬ್ಬ ಮತ್ತು ಲಕ್ಷ ದೀಪೋತ್ಸವವನ್ನು ಒಳಗೊಂಡಿವೆ.
ಇಲ್ಲಿನ ದೇವಾಲಯದ ಟ್ರಸ್ಟ್ ಹಲವು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದು, ಬರುವ ಭಕ್ತಾದಿಗಳಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಿದೆ. ಅಲ್ಲದೇ ಯಕ್ಷಗಾನದಂತಹ ಜಾನಪದ ಕಲೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದೆ.
ಕಟೀಲು ನಂದಿನ ತಟದ ಮೇಲೆ ನೆಲೆಸಿರುವ ದುರ್ಗಾಪರಮೇಶ್ವರಿಯು ಸಕಲ ಭಕ್ತರನ್ನು ಹರಸುವ ಶ್ರೀಕ್ಷೇತ್ರವಾಗಿ ಹೆಸರುವಾಸಿಯಾಯಿತು. ಪ್ರಸ್ತುತ ಕಟೀಲು ಶ್ರೀಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಮಂಗಳೂರಿನಿಂದ ಸುಮಾರು 26 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಅನುಕೂಲಕರವಾಗಿದೆ.
ಬೆಂಕಿಯ ಕಾಳಗ: ಪಟ್ಟೆ ಸೀರೆ ದೇವಿಗೆ ಏನಾದರೂ ಕೋರಿಕೊಂಡು ಪಟ್ಟೆಸೀರೆಯ ಹರಕೆ ನೀಡಿದ್ರೆ ದೇವಿ ಆ ಕೋರಿಕೆಯನ್ನು ಈಡೇರಿಸುತ್ತಾಳೆ ಎನ್ನುವುದು ಭಕ್ತರ ನಂಬಿಕೆ. ಹಾಗಾಗಿ ಇಲ್ಲಿ ಪ್ರತಿದಿನ ಸಾಕಷ್ಟು ಪಟ್ಟೆ ಸೀರೆ ಸೇವೆಗಳು ಕಾಣಸಿಗುತ್ತವೆ. ದುರ್ಗಾಪರಮೇಶ್ವರಿಯ ಜೊತೆಗೆ ಪರಿವಾರ ದೇವತೆಗೂ ಪೂಜೆ ನಡೆಯುತ್ತದೆ. ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇನ್ನೂ ಎಪ್ರಿಲ್ ತಿಂಗಳಲ್ಲಿ ವಾರ್ಷಿಕ ಪೂಜೆಯೂ ಅದ್ದೂರಿಯಾಗಿ ನಡೆಯುತ್ತದೆ. ಜಾತ್ರೆಯ ಸಂದರ್ಭದಲ್ಲಿ ಬೆಂಕಿಯ ಕಾಳಗ ಇಲ್ಲಿನ ಮತ್ತೊಂದು ವಿಶೇಷ. ನಿತ್ಯವೂ ಅನ್ನದಾಸೋಹವನ್ನು ನೀಡುತ್ತದೆ. ಅಕ್ಕ ಪಕ್ಕದ ಊರಿನ ಮಕ್ಕಳಿಗೆ ಅಕ್ಷರದಾಸೋಹವನ್ನೂ ನೀಡುತ್ತಿದೆ ಈ ಕ್ಷೇತ್ರ.
ಕಟೀಲು ಯಕ್ಷಗಾನ ಮೇಳಗಳು
ಶ್ರೀ ಕಟೀಲು ದೇವಿಗೆ ಆಟವೆಂದರೆ ಇಷ್ಟ. ಹಾಗಾಗಿ ಶ್ರೀ ಕ್ಷೇತ್ರದ ಹರಕೆ ಆಟಗಳಿಗೆ ವಿಶೇಷ ಮಹತ್ವವಿದೆ. ಅರುಣಾಸುರನನ್ನು ಮರ್ಧಿಸಿ ನೆಲೆಯಾದ ಭ್ರಮರಾಂಬಿಕೆ ಖುದ್ದು ತಮ್ಮ ಮನೆಗೆ ಬರುತ್ತಾಳೆ ಎಂಬ ನಂಬಿಕೆಯಿಂದ ಬಹು ಶ್ರದ್ಧೆಯಿಂದ ಆಟ ಆಡಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ದಿನಂಪ್ರತಿ ಸರಾಸರಿ ಮೂರ್ನಾಲ್ಕು ಹರಕೆಯಾಟಗಳು ಬುಕ್ಕಿಂಗ್ ಆಗುತ್ತಿವೆ. ಇಪ್ಪತ್ತು ವರುಷಗಳಿಗೂ ಮಿಕ್ಕಿ ಆಟಗಳ ಬುಕ್ಕಿಂಗ್ ಆಗಿವೆ ಎಂದರೆ ಬಹುಶಃ ಮತ್ಯಾವ ಕಲೆಯೂ ಈ ಪರಿಯ ದಾಖಲೆ ಮಾಡಿರಲಿಕ್ಕಿಲ್ಲ. ಒಂದರ್ಥದಲ್ಲಿ ಇದು ಗಿನ್ನಿಸ್ ದಾಖಲೆ.
ಒಟ್ಟಾರೆ ಮುನ್ನೂರು ಮಂದಿ ಕಲಾವಿದರಿಗೆ ಬದುಕು ನೀಡುವ ಕಟೀಲಿನ ಆರು ಮೇಳಗಳು ಕ್ಷೇತ್ರದ ಪ್ರಚಾರವನ್ನೂ ಕೇವಲ ಪೌರಾಣಿಕ ಪ್ರಸಂಗಗಳ ಪ್ರದರ್ಶನದಿಂದ ಧರ್ಮ ಪ್ರಚಾರವನ್ನೂ ಮಾಡುತ್ತಿವೆ. ಕಲೆಯನ್ನೂ ಉಳಿಸಿ, ಬೆಳೆಸುವ ಮಹತ್ತರ ಕಾರ್ಯವನ್ನು ಮಾಡುತ್ತಿದೆ.
ಸಾಧಾರಣ 125ರಿಂದ 150 ವರುಷಗಳ ಇತಿಹಾಸವಿರುವ ಕಟೀಲು ಮೇಳ 1975ರಲ್ಲಿ ವ್ಯವಸ್ಥಿತ ಎರಡನೇ ಮೇಳ ಆರಂಭಿಸಿತು. 1982ರಲ್ಲಿ ಮೂರನೇ ಮೇಳ, 1993ರಲ್ಲಿ ನಾಲ್ಕನೇ ಮೇಳ, 2010ರಲ್ಲಿ ಐದನೇ ಮೇಳ ಆರಂಭಿಸಿದ ಕಟೀಲು ಕ್ಷೇತ್ರ 2013ರಲ್ಲಿ ಆರನೇ ಮೇಳ ಆರಂಭಿಸಿದೆ. ಆದರೂ 25-30 ವರುಷಗಳ ಆಟ ಬಾಕಿಯಾಗುತ್ತಿದೆ.
ಸರ್ವಾಭೀಷ್ಟ ಸಿದ್ಧಿಗಾಗಿ ಆಟ ಆಡಿಸುವ ಭಕ್ತರು ಇದ್ದಾರೆ. ಕಾಣಿಕೆ ಡಬ್ಬಿಯಲ್ಲಿ ಹಣ ಸಂಗ್ರಹಿಸಿ ಆಟ ಆಡಿಸುವ ಭಕ್ತರೂ ಇದ್ದಾರೆ. ಮುಸ್ಲಿಂ, ಕ್ರೈಸ್ತರೂ ಹರಿಕೆ ಆಟ ಆಡಿಸುತ್ತಾರೆ.
ಆಟ ಆಡಿಸಿದವರ ಅಭೀಷ್ಟಗಳನ್ನು ಈಡೇರಿಸುವ ಜಗನ್ಮಾತೆಯ ಸಾನಿಧ್ಯದಿಂದ ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಮೇಳಗಳ ತಿರುಗಾಟ ಆರಂಭವಾಗಿ ಮೇ ತಿಂಗಳ ಕೊನೆಗೆ ಮುಕ್ತಾಯ ಕಾಣುತ್ತದೆ.
ಆಡಳಿತ ಮಂಡಳಿ
ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. 6 ಯಕ್ಷಗಾನ ಮೇಳಗಳು ಸೇವಾರೂಪದಲ್ಲಿ ಯಕ್ಷಗಾನ ಬಯಲಾಟ ವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ.
ದಾರಿಯ ವಿವರ:
ಉಡುಪಿ – ಮಂಗಳೂರಿನಿಂದ ಶ್ರೀ ದೇವಾಲಯವನ್ನು ತಲುಪಲು ಮೂಲ್ಕಿ ಅಥವಾ ಮಂಗಳೂರಿನಿಂದ ಬಸ್ಸಿನ ವ್ಯವಸ್ಥೆಗಳು ಇವೆ.
