‘ನನ್ನ ತಲೆ ತೆಗೆಯುವುದಾದರೆ ಕಾಂಗ್ರೆಸ್ ಕಚೇರಿ ಎದುರು ಇರುತ್ತೇನೆ ಬನ್ನಿ : ಮಿಥುನ್ ರೈ -Vishwanews24
ಮಂಗಳೂರು, : ಬಜರಂಗದಳದ ಕಾರ್ಯಕರ್ತರು ಮೇ 23ರಂದು ಬಂಟ್ವಾಳ ತಾಲ್ಲೂಕಿನ ಬಡಕಬೈಲ್ನಲ್ಲಿ ನಡೆದ ವಿಜಯೋತ್ಸವದ ವೇಳೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಿಥುನ್ ರೈ ಅವರ ತಲೆ ತೆಗೆಯುವುದಾಗಿ ಘೋಷಣೆ ಕೂಗುತ್ತಿರುವ ವಿಡಿಯೊ ವೈರಲ್ ಆಗಿದೆ.
‘ನನ್ನ ತಲೆ ತೆಗೆಯುವುದಾದರೆ ಕಾಂಗ್ರೆಸ್ ಕಚೇರಿ ಎದುರು ಇರುತ್ತೇನೆ ಬನ್ನಿ. ನನ್ನ ವಿಳಾಸ ಕಾಂಗ್ರೆಸ್ ಕಚೇರಿ, ಕೋಮು ದ್ವೇಷ ಉಂಟು ಮಾಡುವ ಸಂಘಟನೆ ವಿರುದ್ಧ ನನ್ನ ಹೋರಾಟ ನಿರಂತರ’ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕೋಮು ಸಂಘರ್ಷ ಉಂಟು ಮಾಡುವ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಯಲಿದೆ. ಮಿಥುನ್ ರೈ ತಲೆ ತೆಗೆಯುವುದರಿಂದ ಜಿಲ್ಲೆಯಲ್ಲಿ ಶಾಂತಿ, ಕೋಮು ಸಂಘರ್ಷ ನಿಲ್ಲುತ್ತದೆ ಎಂದಾದರೆ ನನ್ನ ತಲೆ ತೆಗೆಯಲಿ. ನನ್ನ ದೇಹ ತ್ಯಾಗ ಮಾಡುವುದಕ್ಕೂ ನಾನು ಸಿದ್ಧನಿದ್ದೇನೆ. ನಾನು ಎಲ್ಲಿಯೂ ಹೆದರಿ ಓಡಿ ಹೋಗಲ್ಲ. ನಾನು ಕಾಂಗ್ರೆಸ್ ಕಚೇರಿ ಎದುರಿನಲ್ಲಿಯೇ ಇರುತ್ತೇನೆ, ಬನ್ನಿ’ ಎಂದು ಸವಾಲು ಹಾಕಿದರು.
’ಈ ಘಟನೆಗೆ ಸಂಬಂಧಿಸಿ ಎಲ್ಲ ತಾಲ್ಲೂಕುಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದೂರು ದಾಖಲು ಮಾಡಲಿದ್ದಾರೆ. ಈ ಬಗ್ಗೆ ನಾನು ಕೂಡಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ಸಲ್ಲಿಸಲಿದ್ದೇನೆ’ ಎಂದು ಅವರು ತಿಳಿಸಿದರು.
