ನಾನು ಬಿಜೆಪಿ ಸೇರಲು ಪ್ರಧಾನಿ ಮೋದಿ ಅವರ ನಾಯಕತ್ವವೇ ಮೂಲ ಕಾರಣ :ಎಸ್.ಎಂ ಕೃಷ್ಣ – Vishwanews24
ಬೆಂಗಳೂರು: ತಾವು ಬಹಳ ಯೋಚಿಸಿಯೇ ಬಿಜೆಪಿ ಸೇರುವ ದೃಢ ನಿರ್ಧಾರ ಮಾಡಿದ್ದಾಗಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಎಸ್.ಎಂ ಕೃಷ್ಣ ತಿಳಿಸಿದರು. ಬೆಂಗಳೂರು ಪ್ರೆಸ್ಕ್ಲಬ್ನಲ್ಲಿ ವರದಿಗಾರರ ಕೂಟ ಆಯೋಜಿಸಿದ್ದ ಮಾತು-ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಹಲವು ವಿಚಾರಗಳನ್ನು ತೆರೆದಿಟ್ಟರು.
ಬಿಜೆಪಿಯಲ್ಲಿ ಅರ್ಹತೆ ಇದ್ದವರನ್ನೇ ನಾಯಕರಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಗುಜರಾತ್ನಲ್ಲಿ ಯಶಸ್ವಿಯಾಗಿ 3 ಅವಧಿಗೆ ಮುಖ್ಯಮಂತ್ರಿಯಾಗಿ ಮೋದಿಯವರು ದೇಶಕ್ಕೇ ಮಾದರಿಯಾಗುವಂತೆ ಆ ರಾಜ್ಯವನ್ನು ಅಭಿವೃದ್ಧಿಪಡಿಸಿದರು. ನಂತರ ದಿಲ್ಲಿಯ ರಾಜಕಾರಣಕ್ಕೆ ಪ್ರವೇಶಿಸಿ ಪ್ರಧಾನಿಯಾಗಿ ಭಾರತದ ಭವಿಷ್ಯಕ್ಕೆ ಮಹತ್ವದ ತಿರುವು ನೀಡಿದ್ದಾರೆ. ಅವರಿಗೆ ಯಾವುದೇ ಅಧಿಕಾರದ ಆಸೆ ಇರಲಿಲ್ಲ. ಅವರ ಆ ಗುಣವನ್ನೇ ನಾನು ಮೆಚ್ಚಿಕೊಂಡು ಅನುಸರಿಸಿದೆ. ಮತ್ತೆ ಮೋದಿಯವರೇ ಈ ದೇಶದ ನಾಯಕತ್ವವನ್ನು ಮುಂದುವರಿಸಬೇಕು ಎಂಬುದು ನನ್ನ ಬಯಕೆ’ ಎಂದು ಎಸ್.ಎಂ ಕೃಷ್ಣ ಮನದಾಳವನ್ನು ತೆರೆದಿಟ್ಟರು.
ಐದು ವರ್ಷಗಳ ನಿಷ್ಕಳಂಕ ಹಾಗೂ ಅಭಿವೃದ್ಧಿ ಕೇಂದ್ರಿತ ಆಡಳಿತ ನೀಡಿದ ಮೋದಿಯವರು ದೇಶವನ್ನು ಸದ್ಯ ಒಂದು ರಸ್ತೆಗೆ ತಂದು ಬಿಟ್ಟಿದ್ದಾರೆ. ಇದೇ ಹಾದಿಯಲ್ಲಿ ದೇಶ ಮುಂದುವರಿಯಬೇಕು. ದೇಶದಲ್ಲಿ ಆರ್ಥಿಕವಾಗಿ ಬಹಳಷ್ಟು ಅಭಿವೃದ್ಧಿಯಾಗಿದೆ. ಕಳೆದ ಐದು ವರ್ಷದಿಂದ ಸಾಕಷ್ಟು ಬದಲಾವಣೆಯೂ ಆಗಿದೆ. ಇದಕ್ಕೆಲ್ಲ ಕಾರಣ ನರೇಂದ್ರ ಮೋದಿಯವರು. ಹೀಗಾಗಿಯೇ ಇನ್ನೂ 5 ವರ್ಷ ಅವರು ನಮ್ಮ ದೇಶವನ್ನು ಮುನ್ನಡೆಸಬೇಕು ಅನ್ನೋದು ನನ್ನ ಬಯಕೆ ಎಂದು ಕೃಷ್ಣ ತಿಳಿಸಿದರು.
ವಂಶಪಾರಂಪರ್ಯ ರಾಜಕೀಯ ನನಗೆ ಇಷ್ಟ ಆಗಲಿಲ್ಲ. ಅದರಿಂದ ನಾನು ಕಾಂಗ್ರೆಸ್ ಪಕ್ಷ ಬಿಡಬೇಕಾಯ್ತು. ಕಾಂಗ್ರೆಸ್ನಲ್ಲಿ ಇತ್ತೀಚಿನ ಬೆಳವಣಿಗೆ ನನಗೆ ಇಷ್ಟವಾಗಲಿಲ್ಲ. ಇದರಿಂದ ನಾನು ಕಾಂಗ್ರೆಸ್ನಲ್ಲಿ ಉಳಿದು ಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ 40 ವರ್ಷಗಳ ಕಾಲದ ಸಂಬಂಧವನ್ನು ಮುರಿದು ಬಿಜೆಪಿಗೆ ಬಂದೆ.
‘ನಾನು ಬಿಜೆಪಿ ಸೇರಿದ ನಂತರ ನನ್ನ ಅಳಿಯ ಸಿದ್ದಾರ್ಥ ಮೇಲೆ ಐಟಿ ದಾಳಿ ಆಯ್ತು. ಇದು ನನಗೆ ಬಿಜೆಪಿ ಕೊಟ್ಟ ಬಳುವಳಿ. ಆದರೆ ಐಟಿ ದಾಳಿಗೂ ರಾಜಕಾರಣಕ್ಕೂ ಸಂಬಂಧ ಬೆರೆಸುವುದು ಸೂಕ್ತವಲ್ಲ’ ಎಂದು ಅವರು ಪ್ರತಿಪಾದಿಸಿದರು.
