“ನಾನು ಮತ್ತು ಮಹಾಭಾರತದ ಕರ್ಣ ಇಬ್ಬರೂ ಸಾಂದರ್ಭಿಕ ಶಿಶುಗಳು,” : ಮುಖ್ಯಮಂತ್ರಿ ಕುಮಾರಸ್ವಾಮಿ

Featured, ರಾಜ್ಯ ನ್ಯೂಸ್

ಬೆಂಗಳೂರು:”ನಾನು ಮತ್ತು ಮಹಾಭಾರತದ ಕರ್ಣ ಇಬ್ಬರೂ ಸಾಂದರ್ಭಿಕ ಶಿಶುಗಳು,” ಎಂಬ ಮಾತನ್ನು ಸದನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುವ ಮೂಲಕ ಕರ್ಣನಿಗೆ ತಮ್ಮನ್ನು ಹೋಲಿಸಿಕೊಂಡರು.

ಶುಕ್ರವಾರ ಕರ್ನಾಟಕ ರಾಜ್ಯದ ನೂತನ ಬಜೆಟ್​ ಮಂಡನೆ ಮಾಡಿದ ನಂತರ ಇಂದು ನಡೆಯುತ್ತಿರುವ ಸದನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಕರ್ಣ ಕೂಡ ಸಾಂದರ್ಭಿಕ ಶಿಶುವೇ ಎಂದಿದ್ದಾರೆ. ವಿರೋಧ ಪಕ್ಷದ ನಾಯಕರು ಈ ಸರ್ಕಾರಕ್ಕೆ ಮತ್ತು ಸಿಎಂ ಆದ ತಮಗೆ ಅಪ್ಪ – ಅಮ್ಮ ಇಲ್ಲವೆಂದು ಹೀಗಳೆಯುತ್ತಿದ್ದಾರೆ. ಆದರೆ ಕಾಂಗ್ರೆಸ್​ ಮತ್ತು ಜೆಡಿಎಸ್​ ಶಾಸಕರೇ ಈ ಸರ್ಕಾರದ ಅಪ್ಪ – ಅಮ್ಮಂದಿರು, ಎಂದು ಕುಮಾರಸ್ವಾಮಿ ಹೇಳಿದರು.

ವಿರೋಧ ಪಕ್ಷದ ನಾಯಕರು ಪದೇ ಪದೇ ಸಮ್ಮಿಶ್ರ ಸರ್ಕಾರವನ್ನು ಅಪವಿತ್ರ ಮೈತ್ರಿ ಸರ್ಕಾರ ಎಂದು ಬಣ್ಣಿಸುತ್ತಿವೆ. ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ 12 ವರ್ಷಗಳ ಹಿಂದೆ 2006ರಲ್ಲಿ ಜೆಡಿಎಸ್​ನಲ್ಲಿ 38 ಶಾಸಕರು ಮಾತ್ರ ಇದ್ದರು. ಆಗ ಸರ್ಕಾರ ಮಾಡಲು ಬಿಜೆಪಿ 84 ಶಾಸಕರು ಬೆಂಬಲ ಕೊಟ್ಟಾಗ ಪ್ರಜಾಪ್ರಭುತ್ವ ಕಗ್ಗೊಲೆ ಆಗಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಜತೆಗೆ ಆದ ಯಾರು ಮತ್ತು ಯಾಕೆ ಬೆಂಬಲ ಕೊಟ್ಟಿರಿ ಎಂಬುದನ್ನು ಮರೆ ಬಿಟ್ಟಿದ್ದೀರಾ ಎಂಬ ಪ್ರಶ್ನೆಯನ್ನು ಬಿ.ಎಸ್​. ಯಡಿಯೂರಪ್ಪ ಅವರಿಗೆ ಕೇಳಿದರು.

ಅಂದು ಧರ್ಮಸಿಂಗ್ ಸರ್ಕಾರ ಅಸ್ತಿರಗೊಳಿಸಲು ಕೆಲವರು ಪ್ರಯತ್ನ ನಡೆಸಿದ್ದರು. ಚುನಾವಣೆಗೆ ಹೋಗೋಣ, ಈ ಸಮ್ಮಿಶ್ರ ಸರ್ಕಾರ ಸಾಕು ಎಂದು ಸೋನಿಯಾ ಗಾಂಧಿ ಜೊತೆ ಚರ್ಚಿಸಲು ದೇವೇಗೌಡರು ಮುಂದಾಗಿದ್ದರು. ಆದರೆ ಕೆಲ ಶಾಸಕರು ಬೇಡ ಎಂಬ ಸಲಹೆ ನೀಡಿದರು. ಆಗ ಬಿಜೆಪಿಯ ಕೆಲ ಶಾಸಕರು ನಮ್ಮ ಸಂಪರ್ಕ ಮಾಡಿದ್ದರು. ದೇವರು ಕೊಟ್ಟ ಒಂದು ಆಶೀರ್ವಾದ , ಕಾಂಗ್ರೆಸ್ ಶಾಸಕರು ಕೊಟ್ಟ ಸಹಕಾರದಿಂದ ಸಿಎಂ ಆಗಿದ್ದೇನೆ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದ್ದಾರೆ.