ನಾನೇನು ಪಕ್ಷಕ್ಕೆ ದ್ರೋಹ ಮಾಡಿಲ್ಲ , ಯಾರನ್ನೂ ಸೋಲಿಸುವ ಉದ್ದೇಶ ನನ್ನಲ್ಲಿಲ್ಲ : ರಘುಪತಿ ಭಟ್ – vishwanews24
ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಸಿಗದ ಹಿನ್ನಲೆ ಬೇಸರ, ನೋವಿನಿಂದ ಸ್ಪರ್ಧಿಸುತ್ತಿದ್ದೇನೆ..
ಗೆದ್ದು, ಪದವೀಧರ ಕ್ಷೇತ್ರದ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತೇನೆ..
ಮಂಗಳೂರು: ‘ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿ ಘೋಷಣೆಯಲ್ಲಿ ಬಿಜೆಪಿಯಿಂದ ಕರಾವಳಿಗೆ ಆದ ಭೌಗೋಳಿಕ ಅನ್ಯಾಯ, ಆಯ್ಕೆಯ ಮಾನದಂಡದಲ್ಲಾದ ವ್ಯತ್ಯಾಸದ ಕಾರಣಕ್ಕಾಗಿ ನಾನು ಕರ್ನಾಟಕ ನೈಋತ್ಯ ಪದವೀಧರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಯಾರನ್ನೂ ಸೋಲಿಸುವ ಉದ್ದೇಶ ನನ್ನಲ್ಲಿಲ್ಲ, ಬದಲಾಗಿ ಗೆದ್ದು, ಪದವೀಧರ ಕ್ಷೇತ್ರದ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತೇನೆ’ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ, ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಷತ್ ಸದಸ್ಯನಾಗಿ ಆಯ್ಕೆಯಾದರೆ ಪದವೀಧರ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಪೂರ್ತಿ ಸಮಯ ನೀಡಿ, ಆ ಸ್ಥಾನಕ್ಕೆ ನ್ಯಾಯ ನೀಡುವ ಕೆಲಸ ಮಾಡುತ್ತೇನೆ. ನಾನೇನು ಪಕ್ಷಕ್ಕೆ ದ್ರೋಹ ಮಾಡಿಲ್ಲ. ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬೇಸರ, ನೋವಿನಿಂದ ಸ್ಪರ್ಧಿಸುತ್ತಿದ್ದೇನೆ’ ಎಂದರು.
‘ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವಾಗ ಬೂತ್ ಮಟ್ಟದಿಂದಲೇ ಹೆಸರು ಪಡೆದು, ಮಂಡಲದಲ್ಲಿ ಚರ್ಚೆಯಾಗಿ ಅಂತಿಮವಾಗಿ ಜಿಲ್ಲೆಯಿಂದ ಒಂದು ಹೆಸರು ಅಂತಿಮವಾಗಿ ರಾಜ್ಯದ ಮೂಲಕ ಕೇಂದ್ರಕ್ಕೆ ಕಳುಹಿಸಲಾಗುತ್ತಿತ್ತು. ಆದರೆ, ಈಗ ರಾಜ್ಯದಿಂದ ಹೋದ ಹೆಸರು ಕೇಂದ್ರದಲ್ಲಿ ಬದಲಾಗುತ್ತದೆ. ಈಗ ಕಾಂಗ್ರೆಸ್ನ ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ’ ಎಂದು ಆಕ್ರೋಶ ಹೊರ ಹಾಕಿದರು.
