ನಾವು ಕಾಶ್ಮೀರವನ್ನೇ ಬಿಟ್ಟಿಲ್ಲ ಇನ್ನೂ ಮಂಗಳೂರನ್ನು ಬಿಡುತ್ತೇವಾ? : ಕೆ‌.ಎಸ್‌.ಈಶ್ವರಪ್ಪ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : “ಕಾಂಗ್ರೆಸ್‌ ಮಂಗಳೂರನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಹೊರಟಿದೆ. ಗೂಂಡಾ ರಾಜ್ಯವನ್ನಾಗಿ ಕಾಂಗ್ರೆಸ್‌ ಹಾಗೂ ಖಾದರ್‌ ಅವರ ಈ ಪ್ರಯತ್ನವನ್ನು ನಾವು ವಿಫಲಗೊಳಿಸುತ್ತೇವೆ” ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪ್ರವಾಸಕ್ಕೆಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಮಂಗಳೂರಿನ ವಿಷಯದ ಕುರಿತು ಬೇರೆ ಜಿಲ್ಲೆಯವರು ತಲೆ ಹಾಕಬೇಡಿ ಎಂದು ಯುಟಿ ಖಾದರ್‌ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ , “ಕಾಂಗ್ರೆಸ್‌ ಮಂಗಳೂರನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಹೊರಟಿದೆ. ಅದಕ್ಕಾಗಿ ಖಾದರ್‌ ಈ ರೀತಿ ಹೇಳಿಕೆ ನೀಡುತ್ತಾರೆ. ಕಾಶ್ಮೀರದ ಹಾಗೆಯೇ ಮಂಗಳೂರಿನಲ್ಲಿ 370 ವಿಧಿ ಇದೆಯಾ? ಮಂಗಳೂರು ಅಖಂಡ ಭಾರತದ ಭಾಗವಲ್ಲವೇ? ನಾವು ಕಾಶ್ಮೀರವನ್ನೇ ಬಿಟ್ಟಿಲ್ಲ ಇನ್ನೂ ಮಂಗಳೂರನ್ನು ಬಿಡುತ್ತೇವಾ?” ಎಂದು ಪ್ರಶ್ನಿಸಿದರು.

“ಕರ್ನಾಟಕವನ್ನು ಗೂಂಡಾಗಳು ತಮ್ಮ ರಾಜ್ಯ ಎಂದು ತಿಳಿದು ಕೊಂಡಿದ್ದಾರೆ. ಆದರೆ ನಾವು ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಮಾಡಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಸರಕಾರ ಸಾರ್ವಜನಿಕ ಆಸ್ತಿ ನಷ್ಟ ಮಾಡಿದ ಗೂಂಡಾಗಳನ್ನೇ ವೈಯಕ್ತಿಕವಾಗಿ ಹೊಣೆಗಾರನ್ನಾಗಿಸುವ ಚಿಂತನೆ ನಡೆಸಿದೆ” ಎಂದು ತಿಳಿಸಿದರು.

ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಘೋಷಸಲಾಗಿದ್ದ ಪರಿಹಾರ ತಡೆ ಹಿಡಿದ ವಿಚಾರಕ್ಕೆ ಸಂಬಂಧಿಸಿ, “ಗೋಲಿಬಾರ್‌ನಲ್ಲಿ ಮೃತಪಟ್ಟವರನ್ನು ಅಮಾಯಕರು ಎಂದು ಕರುಣೆಯಿಂದ ಪರಿಹಾರ ಘೋಷಣೆ ಮಾಡಲಾಗಿತ್ತು. ಆದರೆ ತನಿಖೆ ನಡೆಸಿದಾಗ ಅವರ ಮೇಲೆ ಆರೋಪಗಳು ಇರುವುದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಪರಿಹಾರ ವಾಪಾಸ್‌ ತಡೆ ಹಿಡಿಯಲಾಗಿದೆ. ಅವರು ಈ ಪ್ರಕರಣದಲ್ಲಿ ಅಮಾಯಕರು ಎಂದು ಸಾಬೀತು ಆದಲ್ಲಿ ಅವರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು” ಎಂದು ಆಶ್ವಾಸನೆ ನೀಡಿದರು.