ನಾವು ತಡವಾಗಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದರಿಂದ ಸೋಲಾಗಿದೆ , ಮತ್ತೊಮ್ಮೆ ಜೆಡಿಎಸ್ ಬಾವುಟ ಹಾರಿಸುತ್ತೇವೆ : ಪ್ರಜ್ವಲ್ ರೇವಣ್ಣ -Vishwanews24
ಬೆಂಗಳೂರು: ನಿರೀಕ್ಷಿತ ಮಟ್ಟಕ್ಕೆ ಫಲಿತಾಂಶ ಬರದೇ ಇದ್ದದ್ದು ಬೇಸರ ತರಿಸಿದೆ. ಈ ಸೋಲಿಗೆ ಯಾರನ್ನೂ ದೂರುವುದಕ್ಕೆ ಆಗಲ್ಲ. ಈ ಬಾರಿ ಆದ ನಮ್ಮ ಲೋಪದೋಷ ಸರಿಪಡಿಸಿಕೊಳ್ಳುತ್ತೇವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ದೇವೇಗೌಡ ನಿವಾಸದಲ್ಲಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಸೋಲು ಅನುಭವಿಸಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. “ರಾಜಕೀಯದಲ್ಲಿ ಸೋಲು-ಗೆಲುವು ಎನ್ನುವುದು ಸಾಮಾನ್ಯ. ಗೆದ್ದಾಗ ಬೀಗುವುದಿಲ್ಲ. ಸೋತಾಗ ಮೂಲೆ ಸೇರಿಕೊಳ್ಳಲ್ಲ. ಈ ಬಾರಿಯ ಚುನಾವಣೆಯಲ್ಲಿ ನಮ್ಮಿಂದಲೇ ತಪ್ಪಾಗಿರಬಹುದು. ಅದನನ್ನು ನಾವು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಸೋಲು ಅನುಭವಿಸಿದ ವಿಚಾರವಾಗಿ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯೆ ನೀಡಿದರು. ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಮತ ಬಿಜೆಪಿಗೆ ಶಿಫ್ಟ್ ಆಗಿದೆ. ನಮ್ಮ ಜೆಡಿಎಸ್ ಮತವನ್ನು ನಾವು ಪಡೆದುಕೊಂಡಿದ್ದೇವೆ. ಕಾಂಗ್ರೆಸ್ ಮತಗಳು ಬಿಜೆಪಿಗೆ ಹೋಗಿದೆ ಅಷ್ಟೆ ಎಂದರು.
ಸಾಮಾನ್ಯ ಚುನಾವಣೆಯೇ ಬೇರೆ. ಉಪ ಚುನಾವಣೆಯೇ ಬೇರೆ. ನಾವು ಮುಂದಿನ ದಿನ ಕಾರ್ಯಕರ್ತರ ಜೊತೆ ಕೂತು ಚರ್ಚಿಸುತ್ತೇವೆ. ಚರ್ಚಿಸಿ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇವೆ ಎಂದು ಪ್ರಜ್ವಲ್ ಹೇಳಿದರು.
ಹುಣಸೂರಲ್ಲಿ ಮತ್ತೊಮ್ಮೆ ಜೆಡಿಎಸ್ ಬಾವುಟ ಹಾರಿಸುತ್ತೇವೆ. ನಾವು ತಡವಾಗಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದರಿಂದ ಸೋಲಾಗಿದೆ ಎಂದರು.
