ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಸದಿದ್ದರೆ ಟೋಲ್ ಬಂದ್ -Vishwanews24
ಕುಂದಾಪುರ: ಗದಿತ ಸಮಯದಲ್ಲಿ ಬಾಕಿಯಿರುವ ಹೆದ್ದಾರಿ ವಿಸ್ತರಣೆ ಕಾಮಗಾರಿ ಮುಗಿಸದಿದ್ದರೆ ಟೋಲ್ ಸಂಗ್ರಹ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹೆದ್ದಾರಿ ವಿಸ್ತರಣೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಕುಂದಾಪುರ ಫೈ ಓವರ್ ಕಾಮಗಾರಿ 2020 ಮಾರ್ಚ್ ಹಾಗೂ ಪಡುಬಿದ್ರಿ ಬ್ರಿಡ್ಜ್ ರಸ್ತೆ ಕಾಮಗಾರಿ ಜನವರಿಯಲ್ಲಿ ಮುಗಿಸಬೇಕು. ಪಡುಬಿದ್ರಿ ಕೆಲಸ ಮುಗಿಸದಿದ್ದರೆ ಹೆಜಮಾಡಿ ಟೋಲ್ ಸಂಗ್ರಹ ಏ.1ರಿಂದ ಹಾಗೂ ಕುಂದಾಪುರ ಕಾಮಗಾರಿ ಮುಗಿಸದಿದ್ದರೆ ಮಾ.1ರಿಂದ ಸಾಸ್ತಾನ ಟೋಲ್ ಸಂಗ್ರಹ ನಿಲ್ಲಿಸಲಾಗುವುದು ಎಂದರು.
ಮೀಟಿಂಗ್ ಕರೆದರೂ ತಪ್ಪಿಸಿಕೊಳ್ಳುವ ಅಧಿಕಾರಿಗಳಿಗೆ ನೊಟೀಸ್ ನೀಡಲು ಸೂಚಿಸಿದ ಸಂಸದೆ ಶೋಭಾ ಕರಂದ್ಲಾಜೆ, ಹೆದ್ದಾರಿ ಕಾಮಗಾರಿ ಅಪೂರ್ಣದ ಬಗ್ಗೆ ಸಚಿವ ಗಡ್ಕರಿ ಅವರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು. ಹೆದ್ದಾರಿ ವಿಸ್ತರಣೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಲೋಕೋಪಯೋಗಿ ಸಚಿವರ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಲಾಗುತ್ತದೆ ಎಂದರು.
ಶಾಸ್ತ್ರೀ ಸರ್ಕಲ್ ಫ್ಲೈ ಓವರ್ ವಿಚಾರದಲ್ಲಿ ಜನರಿಂದ ಠೀಕೆ ಕೇಳಬೇಕಾಗಿದೆ. ಇಲ್ಲಿನ ಸಮಸ್ಯೆಗಳು ನಿಜಕ್ಕೂ ಜ್ವಲಂತ. ಈ ಗುತ್ತಿಗೆ ಕಂಪೆನಿಯನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕಿದೆ ಎಂದು ನಿತಿನ್ ಗಡ್ಕರಿಗೆ ತಿಳಿಸಿದ್ದೇವೆ. ಇನ್ನು ಮುಂದೆ ಈ ಕಂಪೆನಿಗೆ ಯಾವುದೇ ಗುತ್ತಿಗೆ ಟೆಂಡರ್ ನೀಡಬಾರದು ಈ ಬಗ್ಗೆ ಡಿಸಿ ಅವರು ಅಧೀಕೃತ ಪತ್ರ ಬರೆದು ಕೇಂದ್ರದ ಗಮನ ಸೆಳೆಯಲಿ ಎಂದರು.
ಎನ್.ಎಚ್.ಎ.ಐ ಅಧಿಕಾರಿಗಳು ಬೇಜವಬ್ದಾರಿ ವರ್ತನೆ ತೋರುತ್ತಿದ್ದಾರೆ.ಯಾವುದೇ ಸಭೆಗೆ ಅವರು ಬರುತ್ತಿಲ್ಲ ಎಂದು ಡಿಸಿ ಜಿ.ಜಗದೀಶ್ ಅಸಮಾಧಾನ ವ್ಯಕ್ತಪಡಿಸಿದರು. ಜನವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಕೆಲಸ ಮಾಡಿಮುಗಿಸುವ ಭರವಸೆ ನೀಡಿದಂತೆ ನಡೆದುಕೊಳ್ಳಿ ಇಲ್ಲದಿದ್ದರೆ ಫೆಬ್ರವರಿಯಲ್ಲಿ ಪಡುಬಿದ್ರೆ, ಎಪ್ರಿಲ್ ತಿಂಗಳಲ್ಲಿ ಸಾಸ್ತಾನ ಟೋಲ್ ನಿಲ್ಲಿಸ್ತೇವೆ ಎಂದು ಡಿಸಿ ಖಡಕ್ ಎಚ್ಚರಿಕೆ ನೀಡಿದ್ದು ಇದಕ್ಕೆ ಸಂಸದರು ಕೂಡ ಸಮ್ಮತಿ ಸೂಚಿಸಿದರು.
