ಪಡುಬಿದ್ರಿ : ಕೋಳಿ ಜಗಳ ; ಕುಟುಂಬಗಳ ಮಧ್ಯೆ ದೊಣ್ಣೆಯಿಂದ ಬಡಿದಾಟ -Vishwanews24
ಪಡುಬಿದ್ರಿ : ಕೋಳಿ ಜಗಳ ; ಕುಟುಂಬಗಳ ಮಧ್ಯೆ ದೊಣ್ಣೆಯಿಂದ ಬಡಿದಾಟ -Vishwanews24
ಉಡುಪಿ: ಪಕ್ಕದ ಮನೆ ಕೋಳಿ ತಮ್ಮ ಮನೆ ಮುಂದೆ ಬಂತೆಂಬ ಕ್ಷುಲ್ಲಕ ಕಾರಣಕ್ಕೆ ಬಡಿಗೆಯಿಂದ ಪರಸ್ಪರ ಬಡಿದಾಡಿದ ಘಟನೆ ಉಡುಪಿ ಜಿಲ್ಲೆ ಕಾಪು ತಾಲೂಕಿನಲ್ಲಿ ನಡೆದಿದೆ.
ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆ ಸಮೀಪದ ಉಳ್ಳೂರು ಗ್ರಾಮದಲ್ಲಿ ಗಲಾಟೆ ನಡೆದಿದೆ. ರವಿರಾಜ್ ಶೆಟ್ಟಿ ಎಂಬಾತ ದೊಣ್ಣೆ ತೆಗೆದುಕೊಂಡು ವಾರಿಜಾ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದಾನೆ. ರವಿರಾಜ್ ಮನೆಯ ಕೋಳಿ ವಾರಿಜಾ ಅವರ ಅಂಗಳಕ್ಕೆ ಹೋಗಿದೆ. ಅದನ್ನು ವಾರಿಜ ಓಡಿಸಿದ್ದಾರೆ. ಅಲ್ಲದೆ ಕೋಳಿ ಪದೇಪದೇ ಬರುತ್ತದೆ ಎಂದು ವಾರಿಜಾ ಬೈದಿದ್ದಾರೆ. ಇದೇ ವಿಚಾರ ರಂಪಾಟಕ್ಕೆ ಕಾರಣವಾಗಿದೆ.
ಮಾತಿಗೆ ಮಾತು ಬೆಳೆದು ಜಗಳ ಮಿತಿ ಮೀರಿ ದೊಣ್ಣೆ ತೆಗೆದುಕೊಂಡು ಮಹಿಳೆಯರ ಮೇಲೆ ರವಿರಾಜ್ ಹಲ್ಲೆ ಮಾಡಿದ್ದಾನೆ. ಮಹಿಳೆಯರನ್ನು ಎಳೆದಾಡಿ ಅವಾಚ್ಯವಾಗಿ ಬೈದಿದ್ದಾನೆ. ಆತನಿಗೆ ಮಹಿಳೆಯೊಬ್ಬರು ಬೆಂಬಲ ನೀಡಿದ್ದು, ವಾರಿಜಾ ಅವರ ಬೆಂಬಲಕ್ಕೆ ಬಂದ ಮಹಿಳೆಯ ಮೇಲೂ ಹಲ್ಲೆಯಾಗಿದೆ.
ಈ ಕೋಳಿ ಜಗಳದ ಹಿಂದೆ ಹಳೆಯ ವೈಷಮ್ಯ ಜಮೀನಿನ ತಗಾದೆ ಇರಬಹುದು ಎನ್ನಲಾಗಿದೆ. ನಂತರ ಪಡುಬಿದ್ರಿ ಪೊಲೀಸರು ಎರಡೂ ಕುಟುಂಬದವರನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆದು, ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.
