ಪಡುಬಿದ್ರಿ ರೈಲು ನಿಲ್ದಾಣ ಮೇಲ್ದರ್ಜೆಗೇರಿಸಲು ಮನವಿ – ಬೇಡಿಕೆ ಈಡೇರಿಸದಿದ್ದಲ್ಲಿ ಬೃಹತ್ ಪ್ರತಿಭಟನೆ : ದೇವಿಪ್ರಸಾದ್ ಶೆಟ್ಟಿ – VIshwanews24
ಪಡುಬಿದ್ರಿ ರೈಲು ನಿಲ್ದಾಣ ಮೇಲ್ದರ್ಜೆಗೇರಿಸಲು ಮನವಿ – ಬೇಡಿಕೆ ಈಡೇರಿಸದಿದ್ದಲ್ಲಿ ಬೃಹತ್ ಪ್ರತಿಭಟನೆ – ದೇವಿಪ್ರಸಾದ್ ಶೆಟ್ಟಿ
ಪಡುಬಿದ್ರಿ : ಬೆಳಪುವಿನಲ್ಲಿರುವ ಪಡುಬಿದ್ರಿ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ಮುಂಬಯಿ ಮತ್ತು ಬೆಂಗಳೂರು ರೈಲಿಗೆ ನಿಲುಗಡೆಗೊಳಿಸುವಂತೆ ಒತ್ತಾಯಿಸಿ ರೈಲು ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಕಾಪು ತಾಲೂಕು ಕೇಂದ್ರಕ್ಕೆ ಹತ್ತಿರದಲ್ಲಿರುವ ಮತ್ತು ಶಿಕ್ಷಣ, ಕೈಗಾರಿಕೆ, ಪ್ರವಾಸೋದ್ಯಮ ಸಹಿತವಾಗಿ ಎಲ್ಲಾ ವಿಧದಲ್ಲೂ ಬೆಳೆಯುತ್ತಿರುವ ಬೆಳಪುವಿನ ಪಡುಬಿದ್ರಿ ರೈಲು ನಿಲ್ದಾಣವು ಮೇಲ್ದರ್ಜೆಗೇರಬೇಕು. ಇದರಿಂದ ಪರಿಸರದ ಗ್ರಾಮದ ಜನರಿಗೆ ಪ್ರಯೋಜನವಾಗಲಿದೆ. ತಿಂಗಳ ಒಳಗೆ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಸಾವಿರಾರು ಮಂದಿಯನ್ನು ಸೇರಿಸಿಕೊಂಡು ಬೃಹತ್ ಪ್ರತಿಭಟನೆ ಹಾಗೂ ರೈಲು ರೋಖೋ ನಡೆಸುವುದಾಗಿ ಎಚ್ಚರಿಸಿದರು.
ಈ ರೈಲು ನಿಲ್ದಾಣದಲ್ಲಿ ಮಂಗಳೂರು-ಮಡಂಗಾವ್ ಪ್ಯಾಸೆಂಜರ್ ರೈಲು ಮಾತ್ರ ನಿಲುಗಡೆಯಾಗುತ್ತಿದೆ. ಕೊರೊನಾ ಪೂರ್ವದಲ್ಲಿ ಇಲ್ಲಿ ನಿಲಗಡೆಯಾಗುತ್ತಿದ್ದ ವೇರಾವೆಲ್ -ಗುಜರಾತ್ ಎಕ್ಸ್ಪ್ರೆಸ್ ಮತ್ತು ಡೆಮು ಎಕ್ಸ್ಪ್ರೆಸ್ ನಿಲುಗಡೆಯನ್ನು ಹಿಂಪಡೆಯಲಾಗಿದೆ. ಗ್ರಾಮೀಣ ಭಾಗದ ಜನರಿಂದ ಹೆಚ್ಚು ಬೇಡಿಕೆಯಿರುವ ಮತ್ಸ್ಯಗಂಧ ಎಕ್ಸ್ಪ್ರೆಸ್, ಸಿಎಸ್ ಟಿ ಎಕ್ಸ್ಪ್ರೆಸ್ ಮತ್ತು ಯಶವಂತಪುರ-ಕಾರವಾರ ರೈಲುಗಳ ನಿಲುಗಡೆಗೆ ಅವಕಾಶ ಮಾಡಿಕೊಡ ಬೇಕೆಂದು ಆಗ್ರಹಿಸಿದರು.
PSI’ ನೇಮಕಾತಿ ಪ್ರಕರಣ : ವಿಚಾರಣೆ ಎದುರಿಸಿದ್ದ ಗಣಪತಿ ಭಟ್ ನೇಣು ಬಿಗಿದು ಆತ್ಮಹತ್ಯೆ – VIshwanews24
ರೈಲ್ವೇ ನಿಲ್ದಾಣದ ಪಶ್ಚಿಮ ದಿಕ್ಕಿನಲ್ಲಿರುವ ಹತ್ತಾರು ಮನೆಯವರಿಗೆ ನಡೆದಾಡಲು, ಜಾನುವಾರುಗಳ ಓಡಾಟಕ್ಕೆ ಅಂಡರ್ಪಾಸ್ ಅಥವಾ ಫ್ಲೈಓವರ್ ಮಾದರಿಯ ವ್ಯವಸ್ಥೆ ಕಲ್ಪಿಸಬೇಕು. ರೈಲು ಮಾರ್ಗ ಮತ್ತು ನಿಲ್ದಾಣ ರಚನೆಗಾಗಿ ಹತ್ತಾರು ಎಕರೆ ಜಮೀನು ನೀಡಿದವರು ತಮಗೆ ಬೇಕಾದ ಮೂಲ ಸೌಕರ್ಯಗಳ ಜೋಡಣೆಯಿಲ್ಲದೇ ಸಮಸ್ಯೆ ಎದುರಿಸುತಿದ್ದಾರೆ.
ರೈಲ್ವೇ ನಿಲ್ದಾಣಕ್ಕೆ ತೆರಳುವ ಪಣಿಯೂರು-ರೈಲ್ವೇ ನಿಲ್ದಾಣ ರಸ್ತೆ ಮತ್ತು ಬೆಳಪು-ರೈಲ್ವೇ ನಿಲ್ದಾಣ ರಸ್ತೆ ಹಾಗೂ ಬೆಳಪು ರೈಲ್ವೇ ಮೇಲ್ಸೇತುವೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ದುರಸ್ತಿಗೆ ಆದ್ಯತೆ ನೀಡಬೇಕಿದೆ. ಇಲ್ಲಿನ ರಸ್ತೆ ಬದಿಗಳಲ್ಲಿ ಬೀದಿ ದೀಪದ ವ್ಯವಸ್ಥೆಯೂ ಇಲ್ಲದಿರುವುದರಿಂದ ಜನ ಓಡಾಡಲು ಕಷ್ಟವಾಗಿದೆ ಎಂದರು ತಿಳಿಸಿದರು.
ಇದೇ ವೇಳೆ ಪಡುಬಿದ್ರಿ ರೈಲು ನಿಲ್ದಾಣದ ಹೆಸರನ್ನು ಪಡುಬಿದ್ರಿ ಬದಲಿಗೆ ಪಣಿಯೂರು ಎಂದು ಪುನರ್ ನಾಮಕರಣ ಮಾಡಬೇಕು. ರೈಲು ನಿಲ್ದಾಣದ ಅಭಿವೃದ್ಧಿಯ ಬಗ್ಗೆ ಕಳೆದ 25 ವರ್ಷಗಳಿಂದಲೂ ನಿರಂತರ ಹೋರಾಟ ನಡೆಸುತಿದ್ದರೂ ಯಾವುದೇ ರೀತಿಯ ಸ್ಪಂಧನೆ ದೊರಕುತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಬಳಿಕ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಸ್ಟೇಷನ್ ಮಾಸ್ಟರ್ ಗಣಪತಿ ನಾಯ್ಕ್ ಅವರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಭಟ್, ಬಡಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಗಣೇಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಯು.ಸಿ. ಶೇಖಬ್ಬ, ಮೈಕಲ್ ಡಿ ಸೋಜ, ಮಲ್ಲಾರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಸಾಧಿಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷೆ ಜೇಬಾ ಸೆಲ್ವನ್, ಪ್ರಮುಖರಾದ ಯೋಗೀಶ್ ಶೆಟ್ಟಿ ಪಣಿಯೂರುಗುತ್ತು, ಲೋಕೇಶ್ ಶೆಟ್ಟಿ ಬೆಳಪುಗುತ್ತು, ಕರುಣಾಕರ ಶೆಟ್ಟಿ ಪಣಿಯೂರು ಗುತ್ತು, ದಿವಾಕರ ಶೆಟ್ಟಿ, ಉದಯ ಶೆಟ್ಟಿ, ಸುಶೀನ್ ಶೆಟ್ಟಿ, ರಾಕೇಶ್ ಕುಂಜೂರು, ಮುಶ್ತಾಕ್ ಅಹಮದ್, ಜಹೀರ್ ಅಹಮದ್, ಸಿರಾಜ್ ಅಹಮದ್ ಉಚ್ಚಿಲ, ಸಂತೋಷ್ ಶೆಟ್ಟಿ, ಹರೀಶ್ ನಾಯಕ್ ಕಾಪು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
