ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅತೀ ಶೀಘ್ರದಲ್ಲೇ ನಮಗೆ ಸೇರುತ್ತದೆ, ಯಾರಾದರೂ ದೇಶದ ವಿರುದ್ಧ ಮಾತನಾಡಿದರೆ ಅವರಿಗೆ ಗುಂಡೇಟೇ ಗತಿ : ಶಾಸಕ ಯತ್ನಾಳ್ -Vishwanews24
ವಿಜಯಪುರ: ಇನ್ನು ಮುಂದೆ ದೇಶದಲ್ಲಿ ಯಾರಾದರೂ ದೇಶದ ವಿರುದ್ಧ ಮಾತನಾಡಿದರೆ ಅವರಿಗೆ ಗುಂಡಿನೇಟೇ ಗತಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಬಿಜೆಪಿ ಆಯೋಜಿಸಿದ್ದ ಪೌರತ್ವ ಕಾಯಿದೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಣ್ಣಿನ ಮಗ ದೇವೇಗೌಡ, ಕಣ್ಣೀರಿನ ಮಗ ಕುಮಾರಸ್ವಾಮಿ, ಮಮತಾ ಬ್ಯಾನರ್ಜಿ ಇಂದು ಎಲ್ಲರೂ ಭಾರತ ಮಾತಾ ಕಿ ಜೈ ಎನ್ನುತ್ತಿದ್ದಾರೆ. ನೀವು ಒಪ್ಪಿಕೊಳ್ಳಿ ಬಿಡಿ, ಕಾಯ್ದೆ ಜಾರಿ ಆಗಿದೆ. ಕಾಶ್ಮೀರದಲ್ಲಿ 370 ನೇ ವಿಧಿ ತೆಗೆದಿದ್ದೇವೆ ಇದೇನು ದೊಡ್ಡದು? ಪೌರತ್ವ ಕಾಯ್ದೆ ಬಂತು ಇನ್ನು ಮುಂದೆ ನಾವಿಬ್ಬರು-ನಮಗಿಬ್ಬರು ಕಾಯ್ದೆ ಬರುತ್ತೆ,” ಎಂದು ಜನಸಂಖ್ಯೆ ನಿಯಂತ್ರಣ ಕಾಯಿದೆ ಜಾರಿಯಾಗುವ ಬಗ್ಗೆ ಸುಳಿವು ನೀಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅವರ ಸಂವಿಧಾನವನ್ನು ನಾವು ಗೌರವಿಸಲೇಬೇಕು. ನೀವು ಎಷ್ಟೇ ಜಿಗಿದಾಡಿದರೂ ಇನ್ನು 25 ವರ್ಷ ಪ್ರಧಾನಿ ಮೋದಿ ಹಾಗೂ ಅಮಿತಾ ಶಾ ಅವರನ್ನು ಕೆಳಗಿಳಿಸಲು ಆಗಲ್ಲ ಎಂದು ಭವಿಷ್ಯ ನುಡಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಧರ್ಮ, ನಮ್ಮ ದೇಶ ಉಳಿಬೇಕು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅತೀ ಶೀಘ್ರದಲ್ಲೇ ನಮಗೆ ಸೇರುತ್ತದೆ. ಮುಂದೆ ಪಾಕಿಸ್ತಾನದ ಬಳಿಕ ಆಪ್ಘಾನಿಸ್ತಾನ ಭಾರತದ ಒಳಗೆ ಸೇರುತ್ತದೆ. ಆಗ ಬೇಕಾದರೆ ಮೋದಿ ಅವರು ನಿವೃತ್ತಿ ಹೊಂದಲಿ. ಪಾಕಿಸ್ತಾನದಿಂದ ಬರುವ ಮುಸ್ಲಿಮರಿಗೆ ಭಾರತದಲ್ಲಿ ಅವಕಾಶ ನೀಡುವುದಿಲ್ಲ. ಅಕ್ರಮ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿಗರನ್ನು ಒದ್ದು ಹೊರ ಹಾಕುತ್ತೇವೆ. ನೀವು ಬೇಕಿದ್ದರೆ ನಾಲಿಗೆ ಹರಿಬಿಟ್ಟ ಯತ್ನಾಳ ಎಂದು ಬರೆಯಿರಿ ಎಂದು ಯತ್ನಾಳ ಹೇಳಿದರು
