ಪ್ರಧಾನಿಯಾಗಿ ನರೇಂದ್ರ ಮೋದಿ ಮೊದಲ ಭೇಟಿಗೆ ಉಡುಪಿ ಸಜ್ಜು
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಮೇ 1ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ನಗರದ ಎಂಜಿಎಂ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಪಕ್ಷದ ಬೃಹತ್ ಸಮಾವೇಶದಲ್ಲಿ ಅವರು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಇನ್ನೊಂದೆಡೆ, ಪರಿಸರದಲ್ಲಿ ವಿಶೇಷ ಭದ್ರತಾ ಪಡೆ ಸಿಬ್ಬಂದಿ (ಎಸ್ಪಿಜಿ) ಹದ್ದಿನ ಕಣ್ಣಿರಿಸಿದ್ದಾರೆ.
ಮೈದಾನದ ಉತ್ತರಾಭಿಮುಖದಲ್ಲಿ ವೇದಿಕೆ ನಿರ್ಮಾಣಗೊಂಡಿದ್ದು, ಛಾವಣಿ ಶೀಟು ಹೊದಿಕೆ ಕೆಲಸಗಳು ಪೂರ್ಣಗೊಂಡು ಕೊನೆಯ ಹಂತದ ಕಾರ್ಯ ನಡೆಯುತ್ತಿದೆ. ಪೆಂಡಾಲು, ಸೈಡ್ ಬ್ಯಾರಿಕೇಡ್, ಕುರ್ಚಿ ಇರಿಸುವುದು ಮೊದಲಾದ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದೆ. ನೂರಾರು ಕಾರ್ಮಿಕರು ಸಮಾವೇಶದ ವೇದಿಕೆ ಮತ್ತು ಪೆಂಡಾಲು ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಜಿಲ್ಲಾ ಬಿಜೆಪಿ ಪ್ರಮುಖರು ವೇದಿಕೆ ನಿರ್ಮಾಣ ಜವಾಬ್ದಾರಿ ಹೊತ್ತಿದ್ದಾರೆ. 60 ಅಡಿ ಅಗಲ, 8 ಅಡಿ ಎತ್ತರ, 40 ಅಡಿ ಉದ್ದದ ವಿಸ್ತೀರ್ಣದ ವೇದಿಕೆ ನಿರ್ಮಾಣಗೊಳ್ಳುತ್ತಿದೆ. ವಿಶೇಷವಾಗಿ ವೇದಿಕೆಗೆ ಹೊಂದಿಕೊಂಡು ತಾತ್ಕಾಲಿಕ ವಿಐಪಿ ಕೊಠಡಿ ನಿರ್ಮಿಸಲಾಗುತ್ತಿದೆ. ಬೆಂಗಳೂರಿನ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯೊಂದಕ್ಕೆ ಶಾಮಿಯಾನ, ಬ್ಯಾರಿಕೆಡ್ ಅಳವಡಿಕೆಗೆ ಗುತ್ತಿಗೆ ವಹಿಸಲಾಗಿದೆ.
ಎಂಜಿಎಂ ಮೈದಾನ 1 ಲಕ್ಷ ಮಂದಿ ಸಾಮರ್ಥ್ಯ ಹೊಂದಿದ್ದು, ಅಷ್ಟು ಸಂಖ್ಯೆಯ ಕಾರ್ಯಕರ್ತರನ್ನು ಸೇರಿಸುವುದು ಬಿಜೆಪಿ ನಿರೀಕ್ಷೆ. ಇತ್ತೀಚೆಗೆ ಧರ್ಮಸಂಸದ್ನ ಹಿಂದು ಸಮಾಜೋತ್ಸವ ಕಾರ್ಯಕ್ರಮ ಬೃಹತ್ ಮಟ್ಟದಲ್ಲಿ ಇದೇ ಮೈದಾನದಲ್ಲಿ ನಡೆದಿತ್ತು. ಪ್ರಧಾನಿ ಸಮಾವೇಶಕ್ಕೆ 10 ಸಾವಿರ ಬೈಕ್, 2 ಸಾವಿರ ಕಾರುಗಳಲ್ಲಿ ಕಾರ್ಯಕರ್ತರು ಆಗಮಿಸಲಿದ್ದಾರೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯಾವುದೇ ರ್ಯಾಲಿ ಹಮ್ಮಿಕೊಂಡಿಲ್ಲ ಎಂದು ಜಿಲ್ಲಾ ಬಿಜೆಪಿ ತಿಳಿಸಿದೆ.
ತಯಾರಿ ಹಂತದಲ್ಲೇ ಮೈದಾನಕ್ಕೆ ಬಿಗು ಭದ್ರತೆ
ಸಮಾವೇಶದಲ್ಲಿ ವಿದ್ಯುತ್ ಸಂಪರ್ಕ, ಹೈಸ್ಪೀಡ್ ಇಂಟರ್ನೆಟ್, ಹಾಟ್ಲೈನ್ ದೂರಸಂಪರ್ಕ ವ್ಯವಸ್ಥೆಯನ್ನು ಸಮರ್ಪಕವಾಗಿ ಒದಗಿಸಲು ಆಯಾ ವಿಭಾಗಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತಯಾರಿಯಿಂದಲೇ ಮೈದಾನಕ್ಕೆ ಭದ್ರತೆ ಒದಗಿಸಲಾಗಿದ್ದು ಮುಖ್ಯ ಮತ್ತು ಉಪದ್ವಾರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಬಿಜೆಪಿ ಮುಖಂಡರು, ಕಾರ್ಮಿಕರನ್ನು ಹೊರತುಪಡಿಸಿ ಸಾರ್ವಜನಿಕರು, ಅಪರಿಚಿತರು ಮೈದಾನದ ಒಳ ಪ್ರವೇಶಿಸದಂತೆ ಬಿಗು ಬಂದೋಬಸ್ತ್ ಮಾಡಲಾಗಿದೆ.
ಮೈದಾನದಲ್ಲಿ ಬೀಡುಬಿಟ್ಟ ಎಸ್ಪಿಜಿ
ಸಮಾವೇಶದ ಸಿದ್ಧತೆಯ ಸಂಪೂರ್ಣ ಚಿತ್ರಣವನ್ನು ಪ್ರಧಾನಿ ವಿಶೇಷ ಭದ್ರತಾ ಪಡೆಯ ಯೋಧರು ಸ್ಥಳದಲ್ಲಿ ಗಮನಿಸುತ್ತಿದ್ದಾರೆ. ಅವರ ಸೂಚನೆಯಂತೆ ವೇದಿಕೆ ಮತ್ತು ಸಮಾವೇಶದ ಸಾರ್ವಜನಿಕ ಸ್ಥಳದ ಅಂತರ ನಿಗದಿಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕೈದು ಎನ್ಎಸ್ಜಿ ತಂಡಗಳು ಜಿಲ್ಲೆಗೆ ಬಂದಿದ್ದು, ಒಂದೊಂದು ತಂಡ ಮೈದಾನ ಪರಿಶೀಲನೆ, ಪ್ರಧಾನಿ ಬರುವ ರಸ್ತೆ ಮತ್ತು ಅಕ್ಕಪಕ್ಕದ ಕಟ್ಟಡಗಳ ಮೇಲೆ ನಿಗಾ, ಒಂದು ತಂಡ ಆದಿ ಉಡುಪಿ ಹೆಲಿಪ್ಯಾಡ್ ಮೇಲೆ ನಿಗಾ ವಹಿಸಲಿದೆ.
ಮೋದಿ ಉಡುಪಿಗೆ ನಾಲ್ಕನೇ ಭೇಟಿ
ಉಡುಪಿಗೆ ಮೋದಿ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿ, ಪ್ರಧಾನಿಯಾಗಿ ಮೊದಲ ಭೇಟಿ. ಎಲ್.ಕೆ.ಆಡ್ವಾಣಿ ರಥಯಾತ್ರೆ ಸಂಯೋಜನೆಗಾಗಿ 1992ರಲ್ಲಿ ಉಡುಪಿಗೆ ಭೇಟಿ ನೀಡಿದಾಗ ಮೋದಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆಗ ಡಾ.ವಿ.ಎಸ್ ಆಚಾರ್ಯ ಅವರ ಕಡಿಯಾಳಿ ಮನೆಯಲ್ಲಿ ರಥಯಾತ್ರೆ ಪೂರ್ವಭಾವಿ ಸಭೆ ನಡೆದಿತ್ತು. ಮೋನಪ್ಪ ಭಂಡಾರಿ, ಕೃಷ್ಣಾನಂದ ಕಾಮತ್, ಕೈಯೂರು ನಾರಾಯಣ ಭಟ್, ಯೋಗೀಶ್ ಭಟ್ ಭಾಗವಹಿಸಿದ್ದರು. ಬಳಿಕ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2004ರಲ್ಲಿ ನಡೆದ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಉಡುಪಿಗೆ ಆಗಮಿಸಿ ಚಿತ್ತರಂಜನ್ ಸರ್ಕಲ್ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮೋದಿ ಮಾತನಾಡಿದ್ದರು. 2008ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಮಲ್ಪೆ ಕಡಲತೀರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು.
ಸಮಾವೇಶಕ್ಕೆ ಲಕ್ಷ ಜನರ ನಿರೀಕ್ಷೆ
ಪ್ರಧಾನಿ ಮೋದಿ ಮೇ 1ರಂದು 2.50ಕ್ಕೆ ಆದಿ ಉಡುಪಿ ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ.
ಎಂಜಿಎಂ ಕಾಲೇಜು ಮೈದಾನದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಉಡುಪಿಯ 5 ವಿಧಾನ ಸಭಾ ಕ್ಷೇತ್ರ ಹಾಗೂ ಉತ್ತರ ಕನ್ನಡದ ಕಾರವಾರ, ಭಟ್ಕಳ, ಕುಮಟಾ ಕ್ಷೇತ್ರ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದು, 1 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ ಎಂದು ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಭೆಯಲ್ಲಿ ಭಾಗವಹಿಸುವವರು 1 ಗಂಟೆಗೆ ಮೈದಾನದಲ್ಲಿ ಹಾಜರಿರಬೇಕು. ಕೇಂದ್ರ ಸಚಿವ ಸದಾನಂದ ಗೌಡ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಬಿಜೆಪಿ ಉಪಾಧ್ಯಕ್ಷ ಓಂ ಪ್ರಕಾಶ್ ಮಾಥುರ್, ಸುರೇಂದ್ರನ್ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉತ್ತರಪ್ರದೇಶದ ಗ್ರಾಮೀಣಾಭಿವೃದ್ಧಿ ಸಚಿವ ಮಹೇಂದ್ರ ಸಿಂಗ್, ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಂದ್ರನ್, ನಾಯಕರಾದ ಪ್ರೇಮ್ ಪ್ರಸಾದ್, ಉದಯಕುಮಾರ್ ಶೆಟ್ಟಿ, ಸುರೇಶ್ ನಾಯಕ್ ಕುಯಿಲಾಡಿ, ಮಾಜಿ ಶಾಸಕ ರಘುಪತಿ ಭಟ್ ಉಪಸ್ಥಿತರಿದ್ದರು.
