ಬದಲಾಗಲಿದೆ ಮಣಿಪಾಲ, ಉಡುಪಿ, ಮಲ್ಪೆಯ ಚಿತ್ರಣ, ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ಚಿಂತನೆ -Vishwanews24
ಉಡುಪಿ: ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಉಡುಪಿ, ಶಿಕ್ಷಣ ಕಾಶಿ ಖ್ಯಾತಿಯ ಮಣಿಪಾಲ ಮತ್ತು ಕರಾವಳಿ ಕರ್ನಾಟಕದ ಪ್ರಮುಖ ಬಂದರು ಹೊಂದಿರುವ ಮಲ್ಪೆಗಳನ್ನು “ಸ್ಮಾರ್ಟ್ ಸಿಟಿ’ ಪರಿಕಲ್ಪನೆಯಡಿ ಅಭಿವೃದ್ಧಿ ಪಡಿಸಲು ಅಗತ್ಯವಿರುವ ಸಿದ್ಧತೆ ನಡೆಯುತ್ತಿದೆ.
ಅಂತಾರಾಷ್ಟ್ರೀಯ ಗುಣ್ಣಮಟ್ಟದ ಮೂಲಸೌಕರ್ಯ, ಸಂಚಾರ ನಿಯಂತ್ರಣ, ಸುರಕ್ಷತೆ, ಪ್ರವಾಸೋದ್ಯಮ, ಸ್ಥಳೀಯ ಹೂಡಿಕೆ ಹೆಚ್ಚಳ ಮೊದಲಾದವು “ಸ್ಮಾರ್ಟ್ ಸಿಟಿ’ ಯೋಜನೆಯಡಿ ಇರುತ್ತವೆ.
ಖಾಸಗಿ – ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ಮಣಿಪಾಲ, ಉಡುಪಿ, ಮಲ್ಪೆಗಳನ್ನು ಸ್ಮಾರ್ಟ್ ಸಿಟಿಯಾಗಿಸಲು ಬೆಂಗಳೂರಿನ ಸಂಸ್ಥೆ ಯೊಂದು ನೀಲನಕಾಶೆ ತಯಾರಿಸಿದ್ದು, ಡಿಪಿಆರ್ ಸಿದ್ಧವಾಗುತ್ತಿದೆ. ಈಗಾಗಲೇ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್ಪಿ ನಿಶಾ ಜೇಮ್ಸ್, ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದೆ.
ಸ್ಮಾರ್ಟ್ ಮಣಿಪಾಲ, ಉಡುಪಿ, ಮಲ್ಪೆಯ ಚಿತ್ರಣ ಸಂಪೂರ್ಣವಾಗಿ ಬದಲಾಗಲಿದೆ. ಮಲ್ಟಿ ಲೆವೆಲ್ ಪಾರ್ಕಿಂಗ್ನಿಂದ ಪ್ರಸ್ತುತ ಉಡುಪಿ, ಮಲ್ಪೆ, ಮಣಿಪಾಲದಲ್ಲಿ ಕಾಡುತ್ತಿರುವ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಸಿಗಲಿದೆ. ಪ್ರಮುಖ ತಾಣಗಳ ಟ್ರಾಫಿಕ್ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗಲಿದೆ. ಮುಂದಿನ ದಿನಗಳಲ್ಲಿ ರಸ್ತೆಗೆ ಇಳಿಯಲಿರುವ ಇಲೆಕ್ಟ್ರಾನಿಕ್ ವಾಹನಗಳಿಗಾಗಿ ಚಾರ್ಜಿಂಗ್ ವ್ಯವಸ್ಥೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಆಯ್ದ ಕಡೆಗಳಲ್ಲಿ ಪ್ಯಾನಿಕ್ ಬಟನ್ ವ್ಯವಸ್ಥೆ ಇರಲಿದೆ.
ಪ್ರಮುಖ ಕಡೆಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಪತ್ತೆಗೆ ಎಲ್ಪಿ ಕೆಮರಾ, ಸ್ಮಾರ್ಟ್ ಪೋಲ್ಸ್, ಸ್ಮಾರ್ಟ್ ಟವರ್, ಕಂಟ್ರೋಲ್ ಸೆಂಟರ್, ಬಸ್ ಬೇ, ಆಟೋ ಬೇ, ಬೈಕ್ ಬೇ, ಸೈಕ್ಲಿಂಗ್ ಪಾಥ್, ಇ-ಟಾಯ್ಲೆಟ್, ಸ್ಮಾರ್ಟ್ ಲಾಂಜ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸ್ಮಾರ್ಟ್ ಲೈಟ್ಸ್, ಕೆಮರಾ, ಸರ್ವೇಲೆನ್ಸ್, ವೈಫೈ ಹಾಟ್ಸ್ಪಾಟ್, ಡಿಜಿಟಲ್ ಡಿಸ್ಪ್ಲೇ, ಆರ್ಎಫ್ಐಡಿ ಕಾರ್ಡ್ ರೀಡರ್ ಇತ್ಯಾದಿ ಒಳಗೊಂಡ 10ಕ್ಕೂ ಅಧಿಕ ಸ್ಮಾರ್ಟ್ ಪೋಲ್, ಸ್ಮಾಟ್ ಟವರ್ಗಳು ನೀಲನಕಾಶೆಯಲ್ಲಿ ಸೇರಿವೆ.
ಮಣಿಪಾಲವನ್ನು ಸ್ಮಾರ್ಟ್ ಸಿಟಿ ಮಾಡುವ ಯೋಜನೆ ಹಿಂದೆಯೇ ಇತ್ತು. ಈಗ ಅದನ್ನು ಉಡುಪಿ ಮತ್ತು ಮಲ್ಪೆಗೂ ಖಾಸಗಿ ಸಹಭಾಗಿತ್ವದಲ್ಲಿ ವಿಸ್ತರಿಸಲಾಗಿದೆ. ಬೆಂಗಳೂರಿನ ಸಂಸ್ಥೆಯೊಂದು ನೀಲನಕಾಶೆ ಸಿದ್ಧಪಡಿಸಿದೆ. ಮಲ್ಪೆ, ಮಣಿಪಾಲ, ಉಡುಪಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ “ಸ್ಮಾರ್ಟ್ ಸಿಟಿ’ ಯೋಜನೆ ಅನುಕೂಲವಾಗಲಿದೆ.
– ರಘುಪತಿ ಭಟ್, ಶಾಸಕರು, ಉಡುಪಿ

