ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ವಿಶ್ವಶಕ್ತಿಯಾಗಿ ಹೊರಹೊಮ್ಮುತ್ತಿದೆ : ಇಸ್ರೋ ಮಾಜಿ ಅಧ್ಯಕ್ಷ, ಡಾ.ಜಿ.ಮಾಧವನ್ ನಾಯರ್ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ನಮ್ಮ ವಿಜ್ಞಾನಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಸಾಕಷ್ಟು ಸಂಶೋಧನೆ ನಡೆಸುತ್ತಿದ್ದು, ಭಾರತ ವಿಶ್ವಶಕ್ತಿಯಾಗಿ ಹೊರಹೊಮ್ಮುತ್ತಿದೆ. ಚಂದ್ರಯಾನ-2 ಹೊಸ ಹುರುಪು ನೀಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಜಿ.ಮಾಧವನ್ ನಾಯರ್ ಅಭಿಪ್ರಾಯಪಟ್ಟರು.

ಎ.ಜೆ ಸಮೂಹ ಶಿಕ್ಷಣ ಸಂಸ್ಥೆಗಳ ಅಂಗ ಸಂಸ್ಥೆ ಲಕ್ಷ್ಮೀ ಮೆಮೋರಿಯಲ್ ಫಿಸಿಯೋಥೆರಪಿ ಕಾಲೇಜು ವತಿಯಿಂದ ಶುಕ್ರವಾರ ಆರಂಭಗೊಂಡ ಎರಡು ದಿನಗಳ ರಾಷ್ಟ್ರಮಟ್ಟದ ಫಿಸಿಯೋಥೆರಪಿ ಸಮ್ಮೇಳನ ‘ಕಾನ್‌ಫ್ಲುೃಯೆನ್ಸ್ -2019’ನಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಮಾನವ ಕುಲದ ಅಭಿವೃದ್ಧಿಗೆ ಬಾಹ್ಯಾಕಾಶ ಸಂಶೋಧನೆ ಸಹಕಾರಿ. ಸಾಮಾನ್ಯ ಜನರಿಗೂ ಇಂದು ಇದರ ಲಾಭ ತಲುಪಿದೆ. ಅಮೆರಿಕ, ರಷ್ಯಾಗಳಿಗೆ ಸರಿಸಮನಾಗಿ ಇಂದು ಭಾರತವೂ ಸಾಧನೆ ಮಾಡುತ್ತಿದೆ. ಮಾನವ ಸಹಿತ ಬಾಹ್ಯಾಕಾಶಯಾನಕ್ಕೆ ಸಿದ್ಧತೆ ನಡೆಸುತ್ತಿರುವುದು ಇದಕ್ಕೊಂದು ಉದಾಹರಣೆ. ಆದರೆ ಇದರಲ್ಲಿ ಸಾಕಷ್ಟು ಸವಾಲುಗಳಿದ್ದು, ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲೆ ರಾಜ್ಯ ಮಾತ್ರವಲ್ಲ ದೇಶದಲ್ಲೇ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಗ್ರಪಂಕ್ತಿಯಲ್ಲಿದೆ. ಇದಕ್ಕೆ ನಮ್ಮ ಹಿರಿಯರ ಪ್ರಯತ್ನ, ಶಿಕ್ಷಣ, ಆರೋಗ್ಯ ಸಂಸ್ಥೆಗಳ ಸ್ಥಾಪನೆ ಕಾರಣ ಎಂದರು.

ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಐಜಿಪಿ ಎಂ.ಚಂದ್ರಶೇಖರ್, ಕೊಚ್ಚಿನ್ ಲೇಕ್‌ಶೋರ್ ಆಸ್ಪತ್ರೆ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ.ವಿ.ಪಿ.ಗಂಗಾಧರನ್, ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಎ.ಪ್ರಶಾಂತ್ ಶೆಟ್ಟಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಶಿವಶರಣ್ ಶೆಟ್ಟಿ, ಎ.ಜೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ, ಕಾರ್ಯಕ್ರಮ ಸಂಘಟನಾ ಅಧ್ಯಕ್ಷ ಡಾ.ಅಭಿಲಾಶ್ ಪಿ.ವಿ, ಕಾರ್ಯದರ್ಶಿ ಡಾ.ಹರೀಶ್ ಎಸ್.ಕೃಷ್ಣ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಡಾ.ಸಂಜಯ್ ಏಪೆನ್ ಸ್ಯಾಮ್ಯುವೆಲ್ ವಂದಿಸಿದರು.