ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಸೇತುವೆಗಳು ಒಂದೇ ವಾರದಲ್ಲಿ ನಿರ್ಮಾಣ -Vishwanews24
ಬೆಳ್ತಂಗಡಿ :ಕಳೆದ ವಾರ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ಅಣಿಯೂರು ಹೊಳೆಗೆ ಬಾಂಜಾರುಮಲೆ ಸಮೀಪ ನಿರ್ಮಿಸಿದ ಸೇತುವೆಗೆ ಬದಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ವಾಕಿಂಗ್ ಸ್ಟೀಲ್ ಬ್ರಿಜ್ ನಿರ್ಮಾಣಗೊಂಡು ಸೋಮವಾರ ಲೋಕಾರ್ಪಣೆಗೊಂಡಿತು. ಇದರಿಂದ ಕಾನನದ ನಡುವೆ ಅತಂತ್ರರಾಗಿದ್ದ ಬಾಂಜಾರುಮಲೆ ನಿವಾಸಿಗಳಿಗೆ ಭರವಸೆಯ ಹೊಸ ಬೆಳಕು ಸಿಕ್ಕಂತಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಮಳೆ ಹಾಗೂ ಭೂ ಕುಸಿತದಿಂದಾಗಿ ಅಪಾರ ಹಾನಿ ಸಂಭವಿಸಿ ತತ್ತರಿಸಿ ಹೋಗಿದ್ದ ಬೆಳ್ತಂಗಡಿಯ ಗ್ರಾಮಗಳು ಅತ್ಯಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಅದಕ್ಕೆ ಉದಾಹರಣೆ ಕುಕ್ಕಾವು ಸೇತುವೆ, ಹೊಸಮಠ ಸೇತುವೆ ಹಾಗೂ ಬಾಂಜಾರುಮಲೆಯ ಸ್ಟೀಲ್ ಬ್ರಿಡ್ಜ್. ತಿಂಗಳ ಕಾಲ ಸಂಪರ್ಕವಿಲ್ಲದೆ ಕೊರಗಬೇಕಾಗಿ ಬರಲಿದೆ ಎಂದು ಭಾವಿಸಿದ್ದ ಜನರಿಗೆ ಒಂದೇ ವಾರದಲ್ಲಿ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿ ಬೆಳ್ತಂಗಡಿ ಮಾದರಿಯಾಗಿದೆ.
ಕಡಿದು ಹೋಗಿದ್ದ ದಿಡುಪೆಯ ಸೇತುವೆಯನ್ನು ಹಾಗೂ ಹೊಸಮಠ ಸೇತುವೆಗಳನ್ನು ತಾತ್ಕಾಲಿಕವಾಗಿ ನಿರ್ಮಿಸಿ ವಾಹನ ಸಂಚಾರಕ್ಕೆ ಬಿಡಲಾಗಿದ್ದರೆ ಇಂದು ಬಾಂಜಾರು ಮಲೆಯಲ್ಲಿ ಕೊಚ್ಚಿ ಹೋಗಿದ್ದ ಸೇತುವೆಯ ಬದಲಾಗಿ ಸ್ಟೀಲ್ ಬ್ರಿಡ್ಜ್ ನಿರ್ಮಿಸಿ ಕಾನನದ ನಡುವೆ ಅತಂತ್ರರಾಗಿದ್ದ ಬಾಂಜಾರು ನಿವಾಸಿಗಳಿಗೆ ಹೊಸ ಭರವಸೆಯ ಬೆಳಕನ್ನು ನೀಡಲಾಗಿದೆ.


ಬಾಂಜಾರು ಮಲೆ ಮಲೆಕುಡಿಯರ ಕಾಲೊನಿಗೆ ಸಂಪರ್ಕ ಕಲ್ಪಿಸುವ ಸೇತುವೆ ಭಾರೀ ಮಳೆಗೆ ಕೊಚ್ಚಿ ಹೋಗಿತ್ತು ಇಲ್ಲಿನ ಸುಮಾರು 40 ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಹೊರ ಪ್ರಪಂಚದೊಂದಿಗೆ ಸಂಪರ್ಕವನ್ನೇ ಕಳೆದುಕೊಂಡಿದ್ದರು ಕಳೆದ ಒಂದುವಾರದಿಂದ ಈ ಜನರು ಆಹಾರಕ್ಕೂ ಪರದಾಡುವಂತಾಗಿತ್ತು. ತಾಲೂಕು ಆಡಳಿತವೇ ಇವರಿಗೆ ಆಹಾರವನ್ನು ಪೂರೈಸಿತ್ತು. ಇದೀಗ ಒಂದೇ ವಾರದಲ್ಲಿ ಬಾಂಜಾರು ಮಲೆಗೆ ವಾಕಿಂಗ್ ಸ್ಟೀಲ್ ಬ್ರಿಡ್ಜ್ ನಿರ್ಮಿಸಿ ಅವರಿಗೆ ಹೊರಪ್ರಪಂಚದೊಂದಿಗೆ ಸಂಪರ್ಕ ಸಾಧಿಸುವಂತಾಗಿದೆ.
ಬಾಂಜಾರುಮಲೆ ನಿವಾಸಿಗರ ಬೇಡಿಕೆಯಂತೆ ವಾಕಿಂಗ್ ಸ್ಟೀಲ್ ಬ್ರಿಜ್ ನಿರ್ಮಿಸಲಾಗಿದೆ. ನೆರೆಯಿಂದ ಕೊಚ್ಚಿಹೋಗಿದ್ದ ಬಹುತೇಕ ಸೇತುವೆಗಳಿಗೆ ತಾತ್ಕಾಲಿಕ ವ್ಯವಸ್ಥೆಯಲ್ಲಿ ಸಂಪರ್ಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲ ಕೆಲಸಗಳಿಗೆ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಗುತ್ತಿಗೆದಾರರು ಉತ್ತಮವಾಗಿ ಸ್ಪಂದಿಸಿದ್ದಾರೆ. ಬಾಂಜಾರುಮಲೆ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ್ ಅಜಿಲ ಹಾಗೂ ಮಾಸ್ಟರ್ ಪ್ಲಾನರಿ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ.

ಹರೀಶ್ ಪೂಂಜ, ಬೆಳ್ತಂಗಡಿ ಶಾಸಕ
