ಭಾರತದೊಂದಿಗೆ ಯುದ್ಧದಲ್ಲಿ ಸೋಲಾದರೆ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನ ಕೊನೆಯವರೆಗೂ ಹೋರಾಟ ಮಾಡಲಿದೆ : ಪಾಕ್ ಪ್ರಧಾನಿ -Vishwanews24
ಇಸ್ಲಾಮಾಬಾದ್: ಭಾರತದೊಂದಿಗೆ ಯುದ್ಧವಾದಲ್ಲಿ ಪಾಕಿಸ್ತಾನ ಸೋಲುವುದು ಬಹುತೇಕ ಖಚಿತ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ಸಾಂಪ್ರದಾಯಿಕ ಯುದ್ಧದಲ್ಲಿ ಪಾಕ್ಗೆ ಸೋಲಾಗುತ್ತದೆ. ಆದರೆ ತಾವು ಯುದ್ಧ ವಿರೋಧಿಯಾಗಿದ್ದು, ಯುದ್ಧಕ್ಕೆ ಅವಕಾಶ ಕೊಡುವುದಿಲ್ಲ. ಅಣ್ವಸ್ತ್ರಗಳನ್ನು ಮೊದಲು ಬಳಕೆ ಮಾಡುವುದಿಲ್ಲ ಎಂದರು.
ಯುದ್ಧ ಮತ್ತು ಹಿಂಸಾಚಾರದಲ್ಲಿ ನಂಬಿಕೆ ಇಲ್ಲದ ವ್ಯಕ್ತಿ ನಾನು. ನಾನು ಯುದ್ಧ ವಿರೋಧಿ. ಯುದ್ಧಗಳಿಂದ ಸಮಸ್ಯೆ ಪರಿಹಾರವಾಗುತ್ತದೆ ಎಂಬದರಲ್ಲಿ ನನಗೆ ನಂಬಿಕೆಯಿಲ್ಲ. ವಿಯೆಟ್ನಾಂ, ಇರಾಕ್ ಅನ್ನು ಉದಾಹರಣ ತೆಗೆದುಕೊಂಡಾಗ, ಅಲ್ಲಿ ನಡೆದ ಯುದ್ಧದಿಂದಾಗಿ ಹೊಸ ಸಮಸ್ಯೆಗಳು ಉದ್ಭವಿಸಿವೆ. ಯಾವ ಉದ್ದೇಶಕ್ಕಾಗಿ ಯುದ್ಧ ಮಾಡಲಾಗಿತ್ತೋ ಅದಕ್ಕಿಂತಲೂ ಭಯಂಕರವಾದ ಪರಿಸ್ಥಿತಿ ಅಲ್ಲಿದೆ ಎಂದು ಹೇಳಿದರು.
ಯುದ್ಧದಲ್ಲಿ ಸೋಲಾದರೆ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನ ಕೊನೆಯವರೆಗೂ ಹೋರಾಟ ಮಾಡಲಿದೆ. ಭಾರತ ಮತ್ತು ಪಾಕ್ ನಡುವೆ ಸಾಂಪ್ರದಾಯಿಕ ಯುದ್ಧ ಆರಂಭವಾದರೂ ಅದು ಅಣ್ವಸ್ತ್ರಗಳ ಪ್ರಯೋಗದೊಂದಿಗೆ ಅಂತ್ಯವಾಗುವ ಸಾಧ್ಯತೆ ಇದೆ. ಸಾಂಪ್ರದಾಯಿಕ ಯುದ್ಧದಲ್ಲಿ ಪಾಕ್ ಸೋಲುವ ಅಥವಾ ಶರಣಾಗುವ ಸ್ಥಿತಿ ತಲುಪಿದರೆ, ಕೊನೆಯ ಉಸಿರನವರೆಗೂ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಶತಃಸಿದ್ಧ. ಹೀಗೆ ಕೊನೆ ಉಸಿರಿನವರೆಗಿನ ಹೋರಾಟದಲ್ಲಿ ಏನು ಬೇಕಾದರೂ ಆಗಬಹುದಾಗಿದೆ ಎಂಬುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು ಎಂದು ಇಮ್ರಾನ್ ಎಚ್ಚರಿಸಿದರು.
