ಭಾರಿ ಮಳೆಗೆ ಮಂಗಳೂರಿನಲ್ಲಿ ಮನೆ ಕುಸಿತ, ಧರೆಗುರುಳಿದ ಮರಗಳು
ಮಂಗಳೂರು: ಕರಾವಳಿಯಲ್ಲಿ ಶುಕ್ರವಾರ ರಾತ್ರಿ ಬಿದ್ದ ನಿರಂತರ ಮಳೆಗೆ ಮಂಗಳೂರಿನಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಹಲವೆಡೆ ಮರಗಳು ಧರೆಗುರುಳಿವೆ.
ಮಾರುಕಟ್ಟೆ ಸಮೀಪದ ಭವಂತಿ ರಸ್ತೆಯಲ್ಲಿ ಶನಿವಾರ ಮನೆಯೊಂದರ ಗೋಡೆ, ಸಜ್ಜಾ ಕುಸಿದು ಬಿದ್ದಿದೆ.
ಇತ್ತ ಆರ್ಟಿಒ ಕಚೇರಿ ಬಳಿ ಮರವೊಂದು ರಸ್ತೆಗುರುಳಿದೆ. ರೈಲು ನಿಲ್ದಾಣದ ಬಳಿ ಮರ ಬಿದ್ದಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಕರಾವಳಿಯಲ್ಲಿ ಮಳೆ ಶನಿವಾರವೂ ಮುಂದುವರಿದಿದ್ದು, ಬಿಟ್ಟು ಬಿಟ್ಟು ಭಾರಿ ಪ್ರಮಾಣದಲ್ಲಿ ಸುರಿಯುತ್ತಿದೆ.
ದಕ್ಣಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದೂ ಶಾಲೆಗಳಿಗೆ ರಜೆ ನೀಡಲಾಗಿದೆ. ಹಲವೆಡೆ ಕಾಲೇಜುಗಳೂ ರಜೆ ಘೋಷಿಸಿವೆ.
ಸುಬ್ರಹ್ಮಣ್ಯದ ಸ್ನಾನಘಟ್ಟದಲ್ಲಿ ನೀರು ತುಂಬಿ ಹರಿಯುತ್ತಿದೆ. ಕುಮಾರಧಾರ ನದಿಗೆ ನೂತನ ಸಂಪರ್ಕ ಸೇತುವೆ ನಿರ್ಮಾಣವಾಗಿರುವುದರಿಂದ ಕುಕ್ಕೆ ಭೇಟಿಗೆ ಅಡ್ಡಿ ಇಲ್ಲ.
