ಮಂಗಳೂರು : ನಗರದ ತೊಕ್ಕೊಟ್ಟು ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ಕು ಆರೋಪಿಗಳ ಬಂಧನ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ನಗರದ ತೊಕ್ಕೊಟ್ಟು ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಕಮಿಷನರ್ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಸರಗೋಡು ಕೊಡ್ಲಮೊಗರು ನಿವಾಸಿ ಅಬೂಬಕರ್ ಸಮದ್ (24), ಕಾಸರಗೋಡು ಕಡಂಬಾರು ನಿವಾಸಿಗಳಾದ ಮುಹಮ್ಮದ್ ಅಶ್ರಫ್ (30), ಮುಹಮ್ಮದ್ ಅಫ್ರಿದ್ (22) ಹಾಗೂ ಮುಹಮ್ಮದ್ ಅರ್ಷದ್ (18) ಬಂಧಿತ ಆರೋಪಿಗಳು. ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಕೋದಂಡರಾಮ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.

ಬಂಧಿತ ಆರೋಪಿಗಳಿಂದ ಎರಡು ಲಕ್ಷ ರೂ. ಮೌಲ್ಯದ 10 ಕೆ.ಜಿ. ಗಾಂಜಾ, 2.5 ಲಕ್ಷ ಮೌಲ್ಯದ ಹುಂಡೈ ಕಾರು, 50 ಸಾವಿರ ರೂ. ಮೌಲ್ಯದ ಸ್ಕೂಟರ್, ಮೂರು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ ಸೊತ್ತುಗಳ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದವರು ತಿಳಿಸಿದರು.