ಮಂಗಳೂರು: ಸರ್ಕಾರಿ ಅಧಿಕಾರಿಗಳ ನಕಲಿ ನಂಬರ್ ಪ್ಲೇಟ್ ಹಾಕಿ ದರೋಡೆಗೆ ಸಂಚು : ಆರೋಪಿಗಳು ಪೊಲೀಸ್ ವಶಕ್ಕೆ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ನ್ಯಾಶನಲ್ ಕ್ರೈಮ್ ಇನ್ವೆಸ್ಟಿಗೇಶನ್ ಬ್ಯೂರೋ ಎಂದು ಬೋರ್ಡ್ ಹಾಕಿ ಕೇಂದ್ರ ಸರಕಾರದ ಲಾಂಛನ ಉಪಯೋಗಿಸಿ, ದರೋಡೆಗೆ ಸಂಚು ನಡೆಸುತ್ತಿದ್ದ 8 ಜನ ಆರೋಪಿಗಳನ್ನು ಮಂಗಳೂರು ಪೊಲೀಸರು ಪಂಪವೆಲ್ ಬಳಿ ಬಂಧಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ, “ಅಂತರಾಜ್ಯ ವಂಚನಾ ಜಾಲ ಇದಾಗಿದ್ದು , ನಿಖರ ಮಾಹಿತಿ ಮೇರೆಗೆ ಮಂಗಳೂರು ಪೂರ್ವ ಪೊಲೀಸ್‌ ಠಾಣೆಯ ಪೊಲೀಸರು ದಾಳಿ ನಡೆಸಿದ್ದು ಆರೋಪಿಗಳನ್ನು ವಶಪಡಿಸಿ ಅವರಿಂದ ಸುಮಾರು 20 ಲಕ್ಷ ಮೌಲ್ಯದ 2 ಕಾರು, 1 ಪಿಸ್ತೂಲ್‌, 1 ರಿವಾಲ್ವರ್‌ ಮತ್ತು 8 ಜೀವಂತ ಗುಂಡುಗಳನ್ನು ಹಾಗು ಅವರಲ್ಲಿದ್ದ 10 ಮೊಬೈಲ್‌ ಪೋನ್‌ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಸ್ಯಾಮ್ ಪೀಟರ್, ಮದನ್, ಸುನಿಲ್ ರಾಜ್, ಕೋದಂಡರಾಮ, ಟಿ.ಕೆ.ಬೋಪಣ್ಣ, ಚಿನ್ನಪ್ಪ, ಚೆರಿಯನ್ ಮತ್ತು ಅಬ್ದುಲ್ ಲತೀಫ್ ಎಂದು ಗುರುತಿಸಲಾಗಿದೆ.

ಈ ತಂಡದ ನಟೋರಿಯಸ್ ಲೀಡರ್ ಕೇರಳ ಮೂಲದ ಸ್ಯಾಮ್ ಪೀಟರ್ ಎಂದು ಗುರುತಿಸಲಾಗಿದ್ದು, ಕೊಲ್ಕತ್ತಾ, ಭುವನೇಶ್ವರ ಸೇರಿ ಹಲವೆಡೆ ಈತನಿಗೆ ಸಂಪರ್ಕವಿದೆ ಎಂದು ವರದಿಯಾಗಿದೆ. ಸರ್ಕಾರಿ ಅಧಿಕಾರಿಗಳ ರೀತಿಯಲ್ಲಿ ಇವರಿಗೆ 5 ಗನ್ ಮ್ಯಾನ್ ರೀತಿ ಇದ್ದರು. ಇವರಿಗೆ ನೆರವು ನೀಡಿದ ಲತೀಫ್ ಮತ್ತು ಚೆರಿಯನ್ ಎಂಬ ಮಂಗಳೂರು ನಿವಾಸಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಯುಕ್ತರು ಮಾಹಿತಿ ನೀಡಿದರು.

ನಂಬರ್ ಪ್ಲೇಟ್‌ ಇಲ್ಲದ ಪೂರ್ಣ ಕಪ್ಪು ಟೆಂಟ್‌ ಹಾಕಲಾಗಿದ್ದ ಕಾರಿನಿಂದ ಶುಕ್ರವಾರ ರಾತ್ರಿ ಆರೋಪಿಗಳನ್ನು ಬಂಧಿಸಲಾಗಿತ್ತು. . ಕಾರಿನಲ್ಲಿ ಚಾಲಕ ಸೇರಿ ಸಫಾರಿ ವಸ್ತ್ರದಲ್ಲಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ಯಾಮ್‌ ಪೀಟರ್ ಎಂಬಾತ ಹೊಟೇಲ್‌ ನಲ್ಲಿದ್ದಾನೆ ಎಂಬ ಮಾಹಿತಿ ನೀಡಿದ್ದರು. ಹೊಟೇಲಿಗೆ ದಾಳಿ ನಡೆಸಿದ ಪೊಲೀಸರು ಅಲ್ಲಿ ತಂಡ ಲೀಡರ್‌ ಸ್ಯಾಮ್‌ ಪೀಟರ್, ಮತ್ತು ಆತನಿಗೆ ಸಹಾಯ ಮಾಡುತ್ತಿದ್ದ ಮಂಗಳೂರಿನ ಮೊಹಿದ್ದೀನ್‌ ಮತ್ತು ಅಬ್ದುಲ್‌ ಲತೀಫ್‌ ಎಂಬವರನ್ನು ವಶಕ್ಕೆ ಪಡೆದಿದ್ದರು.