ಮಕ್ಕಳ ಕಳ್ಳರ ಬಗ್ಗೆ ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ : ಉಡುಪಿ ಎಸ್ಪಿ ಎಚ್ಚರಿಕೆ – vishwanews24
ಮಕ್ಕಳ ಕಳ್ಳರ ಬಗ್ಗೆ ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ : ಉಡುಪಿ ಎಸ್ಪಿ ಎಚ್ಚರಿಕೆ
ಉಡುಪಿ, : ಜಿಲ್ಲೆಯ ಅಲೆವೂರು, ಬೆಳ್ಳೆ ಮತ್ತು ಕುಂತಳನಗರ ಪರಿಸರದಲ್ಲಿ ಮಕ್ಕಳ ಕಳ್ಳರು ತಿರುಗಾಡುತ್ತಿದ್ದಾರೆ ಎಂಬ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಎಚ್ಚರಿಸಿದ್ದಾರೆ.
“ಅಲೆವೂರು, ಬೆಳ್ಳೆ ಮತ್ತು ಕುಂತಳನಗರ ಭಾಗಗಳಲ್ಲಿ ಮಕ್ಕಳ ಕಳ್ಳರು ವೇಷ ಮರೆಸಿಕೊಂಡು ಓಡಾಡುತ್ತಿದ್ದಾರೆ. ಪೋಷಕರು ಬೆಳಿಗ್ಗೆ ಮತ್ತು ಸಂಜೆ ತಮ್ಮ ಮಕ್ಕಳನ್ನು ಆಟೋಗಳಲ್ಲಿ ಕಳುಹಿಸುವಾಗ ಜೊತೆಯಲ್ಲೇ ಇರಬೇಕು. ಮಕ್ಕಳನ್ನು ಜಾಗರೂಕತೆಯಿಂದ ರಕ್ಷಿಸುವುದು ಎಲ್ಲರ ಜವಾಬ್ದಾರಿ” ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ.
ಇದನ್ನೂ ಓದಿ:👇
ಎಲ್ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಸಿಲಿಂಡರ್ ಬುಕಿಂಗ್ ನಲ್ಲಿ ಮಹತ್ವದ ಬದಲಾವಣೆ – vishwanews24
“ಈ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ. ಸಾರ್ವಜನಿಕರು ಇಂತಹ ಯಾವುದೇ ಸಂದೇಶಗಳನ್ನು ಹಂಚಿಕೊಳ್ಳಬಾರದು ಅಥವಾ ಫಾರ್ವರ್ಡ್ ಮಾಡಬಾರದು. ಯಾರಾದರೂ ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದು ಕಂಡುಬಂದಲ್ಲಿ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿ. ಅಂತಹವರ ವಿರುದ್ಧ ಅಧಿಕೃತವಾಗಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಈ ಬಗ್ಗೆ ಎಸ್ಪಿ ಹರಿರಾಮ್ ಶಂಕರ್ ಸ್ಪಷ್ಟನೆ ನೀಡಿದ್ದಾರೆ.
ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಪೋಷಕರು ಮತ್ತು ಪೊಲೀಸರ ಕರ್ತವ್ಯವಾಗಿದೆ. ಆದರೆ ಇಂತಹ ತಪ್ಪು ಮಾಹಿತಿಗಳನ್ನು ಹರಡುವುದರಿಂದ ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಮತ್ತು ಗೊಂದಲ ಉಂಟಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇಂತಹ ಸಂದೇಶಗಳನ್ನು ನಂಬಬೇಡಿ ಮತ್ತು ಜಾಗರೂಕರಾಗಿರಿ. ಒಂದು ವೇಳೆ ಅಂತಹ ಮಕ್ಕಳ ಕಳ್ಳರ ಬಗ್ಗೆ ಮಾಹಿತಿ ಇದ್ದಲ್ಲಿ ಅದನ್ನು ಅಧಿಕೃತ ಮಾಧ್ಯಮಗಳ ಮೂಲಕವೇ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:👇
ಕಾಪು: ಸ್ಕೂಟಿ ಮತ್ತು ಬೈಕ್ ಪರಸ್ಪರ ಡಿಕ್ಕಿ : ಸವಾರ ಸಾವು – vishwanews24
