ಮಳವಳ್ಳಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ : ಬಿಇಒ ಸಲ್ಲಿಸಿದ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ – Vishwanews24
ಮಳವಳ್ಳಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ : ಬಿಇಒ ಸಲ್ಲಿಸಿದ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
ಬಾಲಕಿ ಟ್ಯೂಶನ್ ಪಡೆಯುತ್ತಿದ್ದ ಟ್ಯೂಶನ್ ಸೆಂಟರ್ ಅಧಿಕೃತವಲ್ಲ..
ಆರೋಪಿ ಕಾಂತರಾಜು ಶಿಕ್ಷಕನೇ ಅಲ್ಲ ..
ಅನುಮತಿ ಪಡೆಯದೆ ಟ್ಯೂಷನ್ ನಡೆಸಿದರೆ ಪ್ರಕರಣ ದಾಖಲು , ಅನಧಿಕೃತ ಟ್ಯೂಷನ್ ಸೆಂಟರ್ಗಳಿಗೆ ಮಂಡ್ಯ ಡಿಡಿಪಿಐ ಖಡಕ್ ಎಚ್ಚರಿಕೆ
ಮಳವಳ್ಳಿ : ಮಳವಳ್ಳಿಯಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗುತ್ತಿವೆ. ಬಾಲಕಿ ಟ್ಯೂಶನ್ ಪಡೆಯುತ್ತಿದ್ದ ಟ್ಯೂಶನ್ ಸೆಂಟರ್ ಅಧಿಕೃತವಲ್ಲ ಮತ್ತು ಆರೋಪಿ ಕಾಂತರಾಜು ಶಿಕ್ಷಕನೇ ಅಲ್ಲ ಎಂಬುದು ಇದೀಗ ಬಯಲಾಗಿದೆ.
ಟ್ಯೂಶನ್ಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಘಟನೆ ನಡೆದ ಬೆನ್ನಲ್ಲೇ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಅನಧಿಕೃತ ಟ್ಯೂಶನ್ ಸೆಂಟರ್ಗಳ ಮೇಲೆ ನಿಗಾ ವಹಿಸಿದೆ. ಇದರೊಂದಿಗೆ ಮೃತ ಬಾಲಕಿ ಟ್ಯೂಶನ್ ಪಡೆಯುತ್ತಿದ್ದ ಜ್ಞಾನ ಕುಟೀರ ಟ್ಯೂಶನ್ ಸೆಂಟರ್ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿತ್ತು. ಅಲ್ಲದೆ ಅಲ್ಲಿ ಟ್ಯೂಶನ್ ಹೇಳಿಕೊಡುತ್ತಿದ್ದ ಕಾಂತರಾಜು ಶಿಕ್ಷಕನಾಗಿರಲಿಲ್ಲ. ಆತ ಕೇವಲ ಹತ್ತನೇ ತರಗತಿ ಮತ್ತು ಪಿಯುಸಿ ಓದಿದ್ದ ಎಂಬುದು ಗೊತ್ತಾಗಿದೆ. ಈ ಬಗ್ಗೆ ಬಿಇಒ ಅವರು ಡಿಡಿಪಿಐಗೆ ವರದಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಶಿಕ್ಷಣ ಇಲಾಖೆಯು ಈ ಘಟನೆ ನಂತರ ಅನಧಿಕೃತ ಟ್ಯೂಶನ್ ಸೆಂಟರ್ಗಳ ವಿರುದ್ದ ಕಾರ್ಯಾಚರಣೆ ಆರಂಭಿಸಿದ್ದು, ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಟ್ಯೂಶನ್ ಸೆಂಟರ್ಗಳ ಪತ್ತೆಗೆ ಸುತ್ತೋಲೆ ಹೊರಡಿಸಿದೆ. ಸರ್ಕಾರಿ, ಅನುದಾನಿತ, ಅನುದಾನರಹಿತ ಶಿಕ್ಷಕರು ಟ್ಯೂಶನ್ ನೀಡುತ್ತಿದ್ದಲ್ಲಿ ಅಂತಹವರ ವಿರುದ್ದ ಶಿಸ್ತು ಕ್ರಮದ ಎಚ್ಚರಿಕೆಯನ್ನು ನೀಡಿದೆ. ಅನುಮತಿ ಪಡೆಯದೆ ಟ್ಯೂಶನ್ ನಡೆಸುವವರ ವಿರುದ್ದ ಪ್ರಕರಣ ದಾಖಲಿಸಲಾಗುತ್ತದೆ ಎಂದು ಮಂಡ್ಯ ಡಿಡಿಪಿಐ ಜವರೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.
