ಮಹಾತ್ಮ ಗಾಂಧೀಜಿ ಯವರು ಈಗ ಬದುಕಿರುತ್ತಿದ್ದರೆ ಎನ್‌ಆರ್‌ಸಿ ವಿರೋಧಿಸಿ ಸತ್ಯಾಗ್ರಹ ನಡೆಸುತ್ತಿದ್ದರು : ಪ್ರೊ.ಗಣೇಶ್‌ ಎನ್‌.ದೇವಿ

Featured, ದಕ್ಷಿಣ ಕನ್ನಡ

ಮಂಗಳೂರು: ಮಹಾತ್ಮ ಗಾಂಧೀಜಿ ಯವರು ಈಗ ಬದುಕಿರುತ್ತಿದ್ದರೆ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ಸತ್ಯಾಗ್ರಹ ನಡೆಸುತ್ತಿದ್ದರು. ಕಸ್ತೂರ ಬಾ ಅವರೂ ಹೋರಾಟದಲ್ಲಿ ಜತೆಯಾಗಿರುತ್ತಿದ್ದರು ಎಂದು ಗಾಂಧಿವಾದಿ, ಚಿಂತಕ ಪ್ರೊ.ಗಣೇಶ್‌ ಎನ್‌.ದೇವಿ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ನೆಹರೂ ಅಧ್ಯಯನ ಕೇಂದ್ರದ ವತಿಯಿಂದ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಗಾಂಧಿಯವರ ಸಂಭಾಷಣೆಗಳು’ ಕುರಿತ ವಿಚಾರ ಸಂಕಿರಣದಲ್ಲಿ ‘ಪ್ರಜಾಪ್ರಭುತ್ವ ಮತ್ತು ಭಿನ್ನಾಭಿಪ್ರಾಯ’ ವಿಷಯ ಕುರಿತು ಅವರು ಮಾತನಾಡಿದರು.

ಲಿಂಗ, ಧರ್ಮ, ಜಾತಿ, ವರ್ಗಗಳ ಭೇದವಿಲ್ಲದೆ ಸತ್ಯ ಮತ್ತು ಅಹಿಂಸೆಯ ಹೋರಾಟಗಳಿಂದ ಮಾತ್ರವೇ ಪ್ರಜಾಪ್ರಭುತ್ವವನ್ನು ಕಾಪಾಡಲು ಸಾಧ್ಯ. ಎಲ್ಲರನ್ನೂ ಒಳಗೊಳ್ಳುವ ಪ್ರಜಾಪ್ರಭುತ್ವವನ್ನು ಗಾಂಧೀಜಿ ಬಯಸಿದ್ದರು. ಆದರೆ, ಕೇಂದ್ರ ಸರ್ಕಾರವು ಎನ್‌ಆರ್‌ಸಿ ಮೂಲಕ ಮುಸ್ಲಿಮರು ಮತ್ತು ಯೆಹೂದಿಗಳು ದೇಶದಲ್ಲಿ ಆಶ್ರಯ ಪಡೆಯುವ ಅವಕಾಶ ನಿರಾಕರಿಸಲು ಹೊರಟಿದೆ. ಇದು ಗಾಂಧೀಜಿಯವರು ಪ್ರತಿಪಾದಿಸಿದ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ ನಡೆ ಎಂದರು.

ಅಹಿಂಸೆ ಮತ್ತು ಸತ್ಯದ ಬುನಾದಿಯ ಮೇಲೆ ನಡೆಸಿದ ಹೋರಾಟವನ್ನು ಗಾಂಧೀಜಿಯವರು ಎಂದೂ ರಾಜಕೀಯ ತತ್ವವಾಗಿ ಕಂಡಿರಲಿಲ್ಲ. ಅಹಿಂಸೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಆಳುವವರನ್ನು ಪ್ರಶ್ನಿಸುತ್ತಿದ್ದರು. ಸತ್ಯವನ್ನು ಹೇಳುವ ಮೂಲಕ ಆ ಕಾಲಘಟ್ಟದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುತ್ತಿದ್ದರು. ದ್ವೇಷ, ತಾರತಮ್ಯ, ಕೋಮುಸಂಘರ್ಷ ರಹಿತ ಪ್ರಜಾಪ್ರಭುತ್ವವನ್ನು ಅವರು ಬಯಸಿದ್ದರು ಎಂದು ಹೇಳಿದರು.

ರಾಜಕೀಯ ವಿಶ್ಲೇಷಕ ಪ್ರೊ.ವಲೇರಿಯನ್ ರಾಡ್ರಿಗಸ್, ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಇಂಗ್ಲಿಷ್‌ ವಿಭಾಗದ ಪ್ರಾಧ್ಯಾಪಕ ಪ್ರೊ.ಪಟ್ಟಾಭಿರಾಮ ಸೋಮಯಾಜಿ ಎಚ್., ಪ್ರಾಂಶುಪಾಲ ಡಾ. ಉದಯ ಕುಮಾರ್ ಉಪಸ್ಥಿತರಿದ್ದರು.