ಮೀನುಗಾರರ ಪತ್ತೆಗೆ ಸರಕಾರಗಳ ನಿರ್ಲಕ್ಷ್ಯ ; ಜ.6 ರಂದು ಬಂದರುಗಳು ಬಂದ್ ಹಾಗೂ ಬೃಹತ್ ಪ್ರತಿಭಟನೆ ..
ಉಡುಪಿ: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಏಳು ಮೀನುಗಾರರು ನಾಪತ್ತೆಯಾಗಿ 20 ದಿನ ಕಳೆದಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರ ಮೀನುಗಾರರ ಪತ್ತೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಮೀನುಗಾರರು ಬೃಹತ್ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ಮಲ್ಪೆಯಿಂದ ಆಳಸಮುದ್ರಕ್ಕೆ ತೆರಳಿ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್ ಹಾಗೂ ಅದರಲ್ಲಿದ್ದ 7 ಮೀನುಗಾರರನ್ನು ಪತ್ತೆ ಹಚ್ಚುವಲ್ಲಿ ರಾಜ್ಯ- ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಕರಾವಳಿಯ ಮೀನುಗಾರರು ಅನಾಥವಾಗಿದ್ದಾರೆ, ಈ ಹಿನ್ನಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮೀನುಗಾರರು ನಿರ್ಧರಿಸಿದ್ದಾರೆ..
ಜನವರಿ 6 ರಂದು ಪ್ರತಿಭಟನೆಯ ಅಂಗವಾಗಿ ಮಲ್ಪೆಯಿಂದ ಉಡುಪಿಯವರೆಗೆ ಪಾದಯಾತ್ರೆ ಮಾಡುತ್ತೇವೆ. 50 ಸಾವಿರ ಮಂದಿ ರಾಷ್ಟ್ರೀಯ ಹೆದ್ದಾರಿ ತಡೆ ಮಾಡುತ್ತೇವೆ. ರಾಜ್ಯ, ಕೇಂದ್ರ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟ ಪಡಿಸಿದರು. ಮೀನುಗಾರರ ನಾಪತ್ತೆ ಪ್ರಕರಣದ ಬಗ್ಗೆ ರಾಜ್ಯ ಸರಕಾರ ತಲೆ ಕೆಡಿಸಿಕೊಡಿಲ್ಲ. ಸಿಎಂ ಹಾಗು ಉಸ್ತುವಾರಿ ಸಚಿವರು ಇತ್ತ ತಲೆಯೇ ಹಾಕಿಲ್ಲ. ಇದೇ ರೀತಿ ರೈತರಿಗೆ ಸಮಸ್ಯೆಯಾದಾಗಲೂ ಅಸಡ್ಡೆ ತೋರಿಸುತ್ತೀರಾ? ಎಂದು ಅವರು ಕಿಡಿಕಾರಿದರು.
