ಮೀನ ಲಗ್ನ ಸುಮುಹೂರ್ತದಲ್ಲಿ ಪೊಳಲಿ ಶ್ರೀರಾಜರಾಜೇಶ್ವರಿ-ಪರಿವಾರ ದೇವರುಗಳಿಗೆ ಬ್ರಹ್ಮಕಲಶಾಭಿಷೇಕ ಸಂಪನ್ನ – Vishwanews24
ಬಂಟ್ವಾಳ,:ಇತಿಹಾಸಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ, ದುರ್ಗಾಪರಮೇಶ್ವರಿ ಮತ್ತು ಸಪರಿವಾರ ದೇವರುಗಳಿಗೆ ಮಾ.13ರ ಪ್ರಾತಃಕಾಲ 4ರಿಂದ ಮೀನ ಲಗ್ನ ಸಮುಹೂರ್ತದಲ್ಲಿ ಪುಣ್ಯಾಹ, ಗಣಹೋಮ ನಡೆಸಿ ಪೂರ್ವಾಹ್ನ 7.40ರಿಂದ 8.10ರ ಬ್ರಹ್ಮಕಲಶಾಭಿಷೇಕವು ವೈದಿಕ ವಿಧಿವಿಜ್ಞಾನದೊಂದಿಗೆ ಶಾಸ್ತ್ರೋಕ್ತವಾಗಿ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ತಂತ್ರಿ, ಬ್ರಹ್ಮಶ್ರೀ ವೇದಮೂರ್ತಿ ನರಸಿಂಹ ತಂತ್ರಿ, ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯರು ನೇತೃತ್ವದಲ್ಲಿ ನೆರವೇರಿಸಿದರು.
ಪೊಳಲಿಯ ಶ್ರೀರಾಜರಾಜೇಶ್ವರಿ ಹಾಗೂ ಪರಿವಾರ ದೇವರುಗಳು ಮೃಣ್ಮಮ ಮೂರ್ತಿಗಳಾಗಿವೆ. ಶ್ರೀರಾಜರಾಜೇಶ್ವರಿಯ ಮೃಣ್ಮಯ ಮೂರ್ತಿಯ ಎದುರು ಕಂಚಿನ ಅಭಿಮಾನಿ ಮೂರ್ತಿ ಇದ್ದು, ಮೃಣ್ಮಯ ಮೂರ್ತಿಯಿಂದ ಶಕ್ತಿ ಆಹಾವನೆ ನಡೆಸಿ ಕಂಚಿನ ಮೂರ್ತಿಗೆ ಶಕ್ತಿ ತುಂಬಲಾಗುತ್ತದೆ. ಬಳಿಕ ಶ್ರೀರಾಜರಾಜೇಶ್ಬರಿ ಮೃಣ್ಮಯ ಮೂರ್ತಿಯ ಎದುರಿರುವ ಕಂಚಿನ ಶ್ರೀರಾಜರಾಜೇಶ್ವರಿ ಅಭಿಮಾನಿ ಮೂರ್ತಿಗೆ ನಿರಂತರ ವಿವಿಧ ಬಗೆಯ ಕಲಶಾಭಿಷೇಕ ಶಾಸ್ತ್ರೋಕ್ತವಾಗಿ ಜರಗಿತು.
ಬೆಳಗ್ಗಿನಿಂದಲೇ ಭಕ್ತರದಂಡು ದೇವಳಕ್ಕೆ ಆಗಮಿಸಿದ್ದು, ಅಪರಾಹ್ನದ ವೇಳೆಗೆ ಕ್ಷೇತ್ರಕ್ಕೆ ಬಂದ ಭಕ್ತರ ಸಂಖ್ಯೆ ಸುಮಾರು ಒಂದೂವರೆಲಕ್ಷವನ್ನು ಮೀರಿತ್ತು. ಸಂಜೆಯ ಬಳಿಕವಂತೂ ಸಾವಿರ ಸಾವಿರ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಬಂದ ಭಕ್ತರು ರಾಜರಾಜೇಶ್ವರಿ ದೇವಿಯನ್ನು ಕಂಡು ಕಣ್ತುಂಬಿಕೊಂಡರು. ಯಾವುದೇ ರೀತಿಯ ನೂಕುನುಗ್ಗಲಾಗದಂತೆ ವಿವಿಧ ಸಮಿತಿಗಳು, ಸ್ವಯಂಸೇವಕರು ಶ್ರಮಿಸಿ, ಎಲ್ಲಾದಿನಗಳ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಬ್ರಹ್ಮಕಲಶೋತ್ಸವದ ಸಂದರ್ಭ ಕ್ಷೇತ್ರಕ್ಕೆ ಆಗಮಿಸಿ, ದರ್ಶನ ಪಡೆದರು.
ಶ್ರೀರಾಜರಾಜೇಶ್ವರಿಯನ್ನು ಕುಂಕುಮ ಬಣ್ಣದ ಪೀತಾಂಬರ ಸೀರೆಯಿಂದ, ವಜ್ರವೈಢೂರ್ಯ ಆಭರಣಗಳಿಂದ ಶೃಂಗರಿಸಲಾಗಿತ್ತು. ಶ್ರೀದೇವಿಯ ಈ ಪುಣ್ಯಕಾರ್ಯವನ್ನು ಕಣ್ತುಂಬಿಕೊಳ್ಳಲು ನಾಲ್ಕೂ ದಿಕ್ಕುಗಳಿಂದ ಭಕ್ತ ಜನರು ಸಾಗರೋಪಾದಿಯಲ್ಲಿ ದೇಗುಲದತ್ತ ಸಾಗಿಬಂದರು.
ದೇವರ ಬ್ರಹ್ಮಕಲಶಾಭಿಷೇಕವನ್ನು ಸರ್ವಭಕ್ತರಿಗೂ ಕಣ್ತುಂಬಿಕೊಳ್ಳಲು ದೇವಸ್ಥಾನದ ಆಸುಪಾಸುಗಳಲ್ಲಿ ಏಳೆಂಟು ಎಲ್ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ. ದೃಶ್ಯ ಮಾಧ್ಯಮಗಳು, ವೆಬ್ಸೈಟ್ ಹೀಗೆ ಸುದ್ಧಿಮಾಧ್ಯಮಗಳು ಪ್ರಚಾರಕಾರ್ಯದಲ್ಲಿ ನಿರತವಾಗಿವೆ. ಪರಿಣಾಮ ಶ್ರೀಕ್ಷೇತ್ರ ಪೊಳಲಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವವನ್ನು ಲಕ್ಷೋಪಲಕ್ಷ ಭಕ್ತ ಜನರು ತಮ್ಮ ಮನೆಗಳಲ್ಲೇ ಕುಳಿತು ನೋಡುವಂತಾಗಿದೆ.
