ಮುಂಬೈ ಭೀಕರ ಭಯೋತ್ಪಾದಕ ದಾಳಿ ಇಂದಿಗೆ 10 ವರ್ಷ…
ಮುಂಬೈ: ಭಾರತದ ಆರ್ಥಿಕ ರಾಜಧಾನಿ ಮುಂಬೈ ಮೇಲೆ ಪಾಕಿಸ್ತಾನದ ಲಷ್ಕರ್- ಎ- ತೊಯ್ಬಾ ಉಗ್ರರು ದಾಳಿ ನಡೆಸಿ ಇಂದಿಗೆ 10 ವರ್ಷಗಳು ಕಳೆದಿವೆ.
2008 ನವೆಂಬರ್ 26 ರಂದು ಪಾಕಿಸ್ತಾನದ ಲಷ್ಕರ್-ಇ-ತೊಯ್ಬಾ ಉಗ್ರರು ಮುಂಬೈನಲ್ಲಿ ದಾಳಿ ನಡೆಸಿದ್ದರು. ಅಂದು ಸತತ ಮೂರು ದಿನಗಳ ಕಾಲ ಮುಂಬೈ ಮಹಾನಗರಿ ಭಯದಲ್ಲಿ ನಡುಗಿ ಹೋಗಿದ್ದು, ವಿಶ್ವಾದ್ಯಂತ ಸುದ್ದಿಯಾಗಿತ್ತು. ಈ ಭೀಕರ ಭಯೋತ್ಪಾದಕ ದಾಳಿಗೆ 166 ಮಂದಿ ಬಲಿಯಾಗಿದ್ದರು.
ನ.26 ರಂದು ಪಾಕಿಸ್ತಾನದ 10 ಮಂದಿ ಉಗ್ರರು ಬೋಟ್ ಮೂಲಕ ಭಾರತದತ್ತ ಪ್ರಯಾಣಿಸಿದ್ದರು. ಗುರುತು ಮರೆಸಿಕೊಂಡು ಮುಂಬೈಯನ್ನು ಪ್ರವೇಶಿಸಿದ ಉಗ್ರರು ಮೂರು ದಿನಗಳ ಕಾಲ ಹೋಟೆಲ್, ರೈಲ್ವೆನಿಲ್ದಾಣ, ಆಸ್ಪತ್ರೆ. ಯಹೂದಿ ಸಮುದಾಯ ಕೇಂದ್ರ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿ ನಡೆಸಿ 166 ಜನರ ಸಾವಿಗೆ ಕಾರಣರಾದರು. 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಭಯೋತ್ಪಾದಕರ ದಾಳಿಯ ಬಗ್ಗೆ ತಿಳಿಯುತ್ತಿದ್ದಂತೆ ಜನರ ರಕ್ಷಣೆಗೆ ಪೊಲೀಸರು ದೌಡಾಯಿಸಿದ್ದರು. ಆದರೆ ಈ ದಾಳಿಯಲ್ಲಿ ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್, ಅಶೋಕ್ ಕಾಮ್ಟೆ ಮತ್ತು ತುಕಾರಾಮ್ ಓಂಬ್ಳೆ ಮತ್ತು ಯೋಧ ಸಂದೀಪ್ ಉನ್ನಿಕೃಷ್ಣನ್ ಉಗ್ರರಿಂದ ಹತರಾಗಿದ್ದರು. ಇನ್ನೂ 10 ಉಗ್ರರಲ್ಲಿ 9 ದಾಳಿಕೋರರನ್ನು ಭದ್ರತಾ ಪಡೆ ಕೊಂದು ಹಾಕಿತ್ತು.ಕಸಬ್ ನನ್ನು 2012ರ ನ.21 ರಂದು ಪುಣೆಯ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
2008ರ ಭಯೋತ್ಪಾದಕರು ನಡೆಸಿದ ದಾಳಿ ಬಳಿಕ ಮುಂಬೈ ತನ್ನ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿಕೊಂಡಿದೆ. ಭಾರತೀಯ ಸೇನೆ, ಕೋಸ್ಟಲ್ ಗಾರ್ಡ್ ಮತ್ತು ಮರೈನ್ ಪೊಲೀಸ್ ಸೇರಿ ಮೂರು ಹಂತದಲ್ಲಿ ಕರಾವಳಿ ಪ್ರದೇಶದಲ್ಲಿ ಹದ್ದಿನಕಣ್ಣಡಲಾಗಿದೆ. ಜೊತೆಗೆ ಮಹಾರಾಷ್ಟ್ರ ಸರ್ಕಾರ ರಾಡಾರ್, ಹೈಪವರ್ ಅಂಡರ್ ವಾಟರ್ ಸೆನ್ಸರ್, ಡ್ರೈವರ್ ಡಿಟೆಕ್ಷನ್ ಅಂಡರ್ ವಾಟರ್ ಸೆನ್ಸರ್, ಡ್ರೈವರ್ ಡಿಟೆಕ್ಷನ್ ಸೋನಾರ್ಸ್ ಇರುವ ಆರ್ಟ್ ಹಾರ್ಬರ್ ಡಿಫೆನ್ಸ್ ಸಿಸ್ಟರ್ ಜಾರಿಗೊಳಿಸಿದೆ.
