ಮೂಡಬಿದಿರೆ : ದನ ಕಳ್ಳರ ಹಾವಳಿ : ರಕ್ಷಣೆಗೆ ದೈವ, ದೇವರಿಗೆ ಮೊರೆ -Vishwanews24
ಮೂಡಬಿದಿರೆ : ದನ ಕಳ್ಳರ ಹಾವಳಿಯಿಂದ ರೋಸಿ ಹೋಗಿರುವ ಮಾಂಟ್ರಾಡಿ ಗ್ರಾಮದ ಪೆಂಚಾರಿನ ಗ್ರಾಮಸ್ಥರೊಬ್ಬರು ದೈವ, ದೇವರಿಗೆ ಮೊರೆ ಹೋಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪರಿಸರಗಳಲ್ಲಿ ದನ ಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ. ಮೇವಿಗೆಂದು ಹೊರಟ ದನಗಳು ಮನೆ ಸೇರದೆ ಕಳ್ಳಕಾಕರ ಕೈಗೆ ಸಿಕ್ಕಿ ಕಸಾಯಿಖಾನೆ ಸೇರುತ್ತಿದೆ. ಹಲವು ಪೋಲೀಸ್ ದೂರುಗಳು ದಾಖಲಾದರೂ ದನ ಕಳೆದುಕೊಂಡವರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಸಾಲ ಮಾಡಿ ದನ ಖರೀದಿಸಿ ಜೀವನ ಸಾಗಿಸುತ್ತಿರುವ ಬಡ ಕುಟುಂಬದ ದನಗಳನ್ನು ಕಳ್ಳತನ ಮಾಡುತ್ತಿರುವುದು ಹೆಚ್ಚಾಗಲಾರಂಭಿಸಿದೆ.
ದನಕಳ್ಳರ ಕಾಟ ತಡೆಯಲಾರದೆ ಜಿಲ್ಲೆಯ ಜನ ದೈವ-ದೇವರುಗಳ ಮೊರೆ ಹೋಗಿದ್ದಾರೆ. ದನ ಕಳ್ಳರ ಮೇಲೆ ಧರ್ಮಸ್ಥಳ, ಪಣೊಲಿಬೈಲು,ಮಾರಣಬೆಟ್ಟು, ಕೊರಗಜ್ಜ ಮೊದಲಾದ ದೈವಗಳಿಗೆ ಹರಕೆ ಹೊರಲಾಂಭಿಸಿದ್ದಾರೆ. ದನ ಕಳ್ಳತನ ಮಾಡಿದವರು ಹುಚ್ಚರಂತೆ ತಿರುಗಾಡಬೇಕು ಎಂದು ದೇವರ ಮೊರೆ ಹೋಗಿರುತ್ತೇವೆ-ನೊಂದ ದನಗಳ ಯಾಜಮಾನರು’ ಎಂದು ಫ್ಲೆಕ್ಸ್ನಲ್ಲಿ ಮುದ್ರಿಸಲಾಗಿದೆ. ಕಳವಾದ ದನದ ಚಿತ್ರವನ್ನು ಕೂಡ ಪ್ರಕಟಿಸಲಾಗಿದೆ.
