ಮೋದಿ ಸಮಾವೇಶಕ್ಕೆ ಲಕ್ಷ ಮಂದಿ’

Featured, ಉಡುಪಿ

ಉಡುಪಿ: ಎಂಜಿಎಂ ಮೈದಾನದಲ್ಲಿ ಮೇ 1ರಂದು ಜರಗಲಿರುವ ಪ್ರಧಾನಿ ಮೋದಿ ಅವರ ಸಾರ್ವಜನಿಕ ಸಮಾವೇಶದಲ್ಲಿ ಒಂದು ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

ಮೋದಿಯವರು ಮೇ 1ರಂದು ಮಂಗಳೂರಿನಿಂದ ಆದಿ ಉಡುಪಿ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಅಲ್ಲಿಂದ ಶ್ರೀಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ ಪಡೆದು ಪೇಜಾವರ ಶ್ರೀಪಾದರು ಮತ್ತು ಪರ್ಯಾಯ ಪಲಿಮಾರು ಶ್ರೀಪಾದರನ್ನು ಭೇಟಿಯಾಗಲಿದ್ದಾರೆ. ಸಭೆಯಲ್ಲಿ ಒಟ್ಟು 20 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು, ಮುಖಂಡರು ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿ ಪ್ರತಿ 20 ಕ್ಷೇತ್ರಗಳಿಗೆ ಒಂದು ಕಡೆಯಂತೆ ಸುಮಾರು 20 ಸಭೆಗಳಲ್ಲಿ ಮೋದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪ್ರಧಾನಿಯಾದ ಅನಂತರ ನರೇಂದ್ರ ಮೋದಿ ಉಡುಪಿಗೆ ಆಗಮಿಸ ಬೇಕೆಂಬುದು ಪೇಜಾವರ ಶ್ರೀಗಳು, ಉಡಪಿ ಜನತೆಯ ಆಶಯವಾಗಿತ್ತು. ಅದು ಈಗ ಈಡೇರುತ್ತಿದೆ. ಇದೊಂದು ಅವಿಸ್ಮರಣೀಯ ಕಾರ್ಯಕ್ರಮವಾಗಲಿದೆ ಎಂದು ಮಟ್ಟಾರು ಹೇಳಿದರು.

ಜಿಲ್ಲೆಯ 5 ಕ್ಷೇತ್ರಗಳಲ್ಲಿಯೂ ನಿರೀಕ್ಷೆಯಂತೆಯೇ ಅಭ್ಯರ್ಥಿಗಳ ಆಯ್ಕೆ ನಡೆದಿದೆ. ಹಾಗಾಗಿ ಗೊಂದಲಗಳಿಗೆ ಅವಕಾಶವಿಲ್ಲ. ಎಲ್ಲರೂ ಒಂದಾಗಿ ಗೆಲುವಿಗೆ ಶ್ರಮಿಸುತ್ತಿದ್ದೇವೆ. ಅಭ್ಯರ್ಥಿತ್ವ ಬಯಸುವುದರಲ್ಲಿ ತಪ್ಪಿಲ್ಲ. ಅಭ್ಯರ್ಥಿಗಳ ಘೋಷಣೆಯಾದ ಅನಂತರ ಯಾರೂ ಪ್ರತಿರೋಧ ತೋರಿಸಿಲ್ಲ ಎಂದು ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹೆಗ್ಡೆ ಅವರು, “ಶೀರೂರು ಶ್ರೀಗಳನ್ನು ಶನಿವಾರ ಭೇಟಿಯಾಗಿದ್ದೇನೆ. ಅವರು ನಾಮಪತ್ರ ವಾಪಸು ಪಡೆಯುವರೆಂಬ ವಿಶ್ವಾಸವಿದೆ. ಮೋದಿ ಪರವಾಗಿ ನಾವು ಅವರ ಜತೆ ಮಾತನಾಡುತ್ತೇವೆ. ಸದ್ಯ ಶ್ರೀಗಳಿಗೆ ಅನಾರೋಗ್ಯವಿದೆ, ಗುಣಮುಖವಾಗಲಿ ಎಂದು ಹಾರೈಸುತ್ತೇನೆ’ ಎಂದರು.

ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ಅಸಮಾಧಾನ ಗೊಂಡಿರುವ ಕೆಲವು ಪದಾಧಿಕಾರಿಗಳ ಜತೆಗೆ ನಾನು ಮತ್ತು ಜಯಪ್ರಕಾಶ್‌ ಹೆಗ್ಡೆ ಮಾತುಕತೆ ನಡೆಸಿದ್ದೇವೆ. ಗೊಂದಲ ಪರಿಹಾರವಾಗಿದೆ ಎಂದು ಜಿಲ್ಲಾ ಚುನಾವಣಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಜಿಲ್ಲಾ ಪ್ರ. ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ, ಉಡುಪಿ ಕ್ಷೇತ್ರ ಉಸ್ತುವಾರಿ ಪ್ರವೀಣ್‌ ಕುಮಾರ್‌ ಶೆಟ್ಟಿ ಕಪ್ಪೆಟ್ಟು, ಜಿಲ್ಲಾ ವಕ್ತಾರ ಕಟಪಾಡಿ ಶಂಕರ ಪೂಜಾರಿ, ಕೋಶಾಧಿಕಾರಿ ರವಿ ಅಮೀನ್‌ ಉಪಸ್ಥಿತರಿದ್ದರು.

ಇಂದು ಕಾರ್ಕಳ, ಉಡುಪಿಗೆ ರಾಜನಾಥ್‌ ಸಿಂಗ್‌
ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಎ. 23ರಂದು 11.40ಕ್ಕೆ ಕಾರ್ಕಳಕ್ಕೆ ಆಗಮಿಸಿ ಕುಕ್ಕುಂದೂರಿನಲ್ಲಿ ತಾಲೂಕು ಕಚೇರಿ ಸಮೀಪ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಬೆಳ್ತಂಗಡಿಗೆ ತೆರಳಿ 3 ಗಂಟೆಗೆ ಆದಿ ಉಡುಪಿ ಹೆಲಿಪ್ಯಾಡ್‌ಗೆ ಆಗಮಿಸುತ್ತಾರೆ. ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೇಜಾವರ ಶ್ರೀಗಳು ಮತ್ತು ಪರ್ಯಾಯ ಶ್ರೀಗಳನ್ನು ಭೇಟಿ ಯಾಗಲಿದ್ದಾರೆ. ಬಳಿಕ 3.45ರ ವೇಳೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. 4.15ರ ವೇಳೆಗೆ ಮಣಿ ಪಾಲದ ಕಂಟ್ರಿ ಇನ್‌ ಹೊಟೇಲ್‌ ನಲ್ಲಿ ಚಿಂತಕ ರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳ ಲಿದ್ದಾರೆ ಎಂದು ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.