ರಾತ್ರೋ ರಾತ್ರಿ ನಟ ದುನಿಯಾ ವಿಜಯ್ ಬಂಧನ !

Featured, ರಾಜ್ಯ ನ್ಯೂಸ್, ಸಿನಿಮಾ

ಬೆಂಗಳೂರು: ನಗರದ ಅಂಬೇಡ್ಕರ್‌ ಭವನದಲ್ಲಿ  ಶನಿವಾರ ರಾತ್ರಿ ನಡೆದ ಜಗಳವೊಂದು ಘರ್ಷಣೆಗೆ ತಿರುಗಿ ಖ್ಯಾತ ನಟ ದುನಿಯಾ ವಿಜಯ್‌ ಮತ್ತು ಬೆಂಬಲಿಗರ ಬಂಧನಕ್ಕೆ ಕಾರಣವಾಗಿದೆ.

ಜಿಮ್‌ ಟ್ರೈನರ್‌ ಆಗಿರುವ ಪಾನಿಪುರಿ ಕಿಟ್ಟಿ ಅವರ ತಮ್ಮನ ಮಗ ಮಾರುತಿ ಗೌಡ ಎನ್ನುವ ಯುವಕನನ್ನು ದುನಿಯಾ ವಿಜಿ ಮತ್ತು ಮೂವರು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.

ಅಂಬೇಡ್ಕರ್‌ ಭವನದಲ್ಲಿ ಬಾಡಿ ಬಿಲ್ಡಿಂಗ್‌ ಸ್ಪರ್ಧೆ ನಡೆಯುತ್ತಿದ್ದ ವೇಳೆ ಜಗಳ ಆರಂಭವಾಗಿದ್ದು ಆ ಬಳಿಕ ಮಾರುತಿಗೆ ದುನಿಯಾ ವಿಜಿ ಅವಾಚ್ಯ ಶಬ್ಧಗಳಿಂದ ಬೈದು ಕಾರಿನಲ್ಲಿ ಅಪಹರಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ.

ತಕ್ಷಣ ಪೊಲೀಸರಿಗೆ ದೂರು ನೀಡಲಾಗಿದ್ದು , ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ದುನಿಯಾ ವಿಜಯ್‌ ಸೇರಿ ಮೂವರನ್ನು ಬಂಧಿಸಿದ್ದಾರೆ.

ನಡೆದಿದ್ದೇನು?
ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿದ್ದಾರೆ. ದುನಿಯಾ ವಿಜಿ, ಮಣಿ ಮತ್ತು ಪ್ರಸಾದ್ ಸಹಚರರಿಂದ ಈ ಕೃತ್ಯ ನಡೆದಿದೆ.

ಮಾರುತಿಗೌಡ ಸಹಚರರಿಂದ ದೂರು ಪಡೆದ ಹೈಗ್ರೌಂಡ್ ಪೊಲೀಸರು ಮೊದಲಿಗೆ ದುನಿಯಾ ವಿಜಯ್‍ಗೆ ಕರೆ ಮಾಡಿ ಎಚ್ಚರಿಸಿದ್ದಾರೆ. 30 ನಿಮಿಷದ ನಂತರ ಕಿಡ್ನಾಪ್ ಮಾಡಿದ್ದ ಮಾರುತಿಗೌಡನೊಂದಿಗೆ ದುನಿಯಾ ವಿಜಯ್ ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ತನ್ನ ರೇಂಜ್ ರೋವರ್ ಕಾರಿನಲ್ಲಿ ಪ್ರತ್ಯಕ್ಷನಾಗಿದ್ದಾರೆ. ಜೊತೆಗೆ ಹಲ್ಲೆ ಮಾಡಿದ್ದ ಜಿಮ್ ಟ್ರೇನರ್ ಮಾರುತಿಗೌಡನ್ನ ಕರೆದುಕೊಂಡು ಬಂದಿದ್ದರು. ಆದರೆ ದುನಿಯಾ ವಿಜಯ್ ಪೋಲೀಸ್ ಠಾಣೆಯೂ ಬಳಿಯೂ ದರ್ಪ ತೋರಿದ್ದು, ಅವಾಚ್ಯ ಶಬ್ಧಗಳಿಂದ ಮತ್ತೆ ಪಾನಿಪುರಿ ಕಿಟ್ಟಿ ಹಾಗೂ ಹುಡುಗರನ್ನ ಬೈದಿದ್ದಾರೆ.

ಇದೇ ವೇಳೆ ಪಾನಿಪುರಿ ಕಿಟ್ಟಿ ಹುಡುಗರು, ದುನಿಯ್ ವಿಜಿ ಕಾರ್ ನ ಮೇಲೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಕೆಎಸ್‍ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿತ್ತು. ಪೊಲೀಸ್ ಠಾಣೆ ಬಳಿಯೂ ದರ್ಪ ಮೆರೆಯುತ್ತಿದ್ದ ವಿಜಿಗೆ ಎಸಿಪಿ ರವಿಶಂಕರ್ ಖಡಕ್ ವಾರ್ನಿಂಗ್ ಮಾಡಿದ್ದಾರೆ.

ಈ ಕುರಿತು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದುನಿಯ್ ವಿಜಯ್ ಹಾಗೂ ಸಹಚರರನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 365, 342, 325, 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೈಗ್ರೌಂಡ್ ಪೊಲೀಸರು ದುನಿಯ್ ವಿಜಯ್ ನನ್ನ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.